
ಚಿಕ್ಕಬಳ್ಳಾಪುರ : ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ವ್ಯಾಪ್ತಿಯಲ್ಲಿ ಬರುವ ವಿವಿಧ 101 ಜಾತಿಗಳ ಜನಗಣತಿ ಮೇ 5 ರಿಂದ ಆರಂಭವಾಗಲಿದೆ.

j3tvkannada
ಮನೆ ಮನೆಗೆ ಬರುವ ಗಣತಿದಾರರಿಗೆ ತಪ್ಪದೆ ತಮ್ಮ ಜಾತಿಯ ಮಾಹಿತಿ ನೀಡಬೇಕು ಎಂದು ಮಾದಿಗ ದಂಡೋರ ಜಿಲ್ಲ ಘಟಕದ ಅಧ್ಯಕ್ಷ ಎಂ.ವಿ.ರಾಮಪ್ಪ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾದಿಗ ಸಮುದಾಯದ ಮುಖಂಡರು ಜನರಲ್ಲಿ ಜಾಗೃತಿ ಮೂಡಿಸಬೇಕು. ಪರಿಶಿಷ್ಟರಲ್ಲಿ ಮಾದಿಗ ಸಮುದಾಯ ಬಹುಸಂಖ್ಯಾತವಾಗಿದೆ. ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಪಡೆಯುವಲ್ಲಿ ವಂಚಿತರಾಗಿದ್ದೇವೆ.
ಮೀಸಲಾತಿಯ ತಾರತಮ್ಯದ ವಿರುದ್ಧ 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಮಾದಿಗ ದಂಡೋರದ ಹೋರಾಟದ ಫಲವಾಗಿಯೇ ನ್ಯಾಯಮೂರ್ತಿ ಸದಾಶಿವ ಆಯೋಗ, ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚನೆಯಾಗಿತ್ತು ಎಂದರು.
ಪರಿಶಿಷ್ಟ ಜಾತಿಯಲ್ಲಿ ಬರುವ ವಿವಿಧ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವರ್ಗೀಕರಣ ಮಾಡುವ ಸಲುವಾಗಿಯೇ ಗಣತಿ ನಡೆಯುತ್ತಿದೆ. ಯಾರಿಗೂ ಅನ್ಯಾಯವಾಗದಂತೆ ಅವರವರ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು ಎಂಬುದು ನಮ್ಮ ಹೋರಾಟವಾಗಿತ್ತು.
ಅಂತಿಮ ಹಂತವಾಗಿ ಮೇ 5 ರಿಂದ 17ರವರೆಗೆ ಗಣತಿ ನಡೆಯುತ್ತದೆ. ಗಣತಿದಾರರು ಬಂದಾಗ ಕಾಲಂ ನಂ 61 ರಲ್ಲಿ ಮಾದಿಗ ಎಂದೇ ನಮೂದಿಸಬೇಕು. ಆದಿದ್ರಾವಿಡ, ಆದಿಕರ್ನಾಟಕ, ಆದಿ ಆಂದ್ರ, ಜಾಂಬುವರು, ಎಕೆ, ಎಡಿ ಎಂದು ಬರೆಸಬಾರದು. ಮಾದಿಗ ಎಂದು ಬರೆಸಬೇಕು ಎಂದರು.
ಇದರಿಂದ ಖಚಿತ ಜನಸಂಖ್ಯೆ, ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿಯ ಸೌಲಭ್ಯಗಳು ದೊರೆಯುತ್ತವೆ ಎಂದು ತಿಳಿಸಿದರು.