
ಬೆಳಗಾವಿ: ಇಡೀ ಊರಿನ ಆರೋಗ್ಯವನ್ನು ಕಾಪಾಡುವುದು ಪೌರಕಾರ್ಮಿಕರು. ಆದರೆ, ಅವರ ಆರೋಗ್ಯದ ಬಗ್ಗೆಯೇ ಕಾಳಜಿ ವಹಿಸುವವರು ಯಾರು ಇಲ್ಲ.

j3tvkannada
ಬೆಳಗಾವಿ ಮಹಾನಗರ ಪಾಲಿಕೆಯೂ ಸೇರಿದಂತೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಗಳ ಪೌರಕಾರ್ಮಿಕರ ಗೋಳು ಕೇಳುವವರು ದಿಕ್ಕಿಲ್ಲ. ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬ ಕನಿಷ್ಠ ಸೌಜನ್ಯವನ್ನೂ ಸ್ಥಳೀಯ ಸಂಸ್ಥೆಗಳು ತೋರಿಲ್ಲ.
ಒಂದು ವರ್ಷದ ಹಿಂದೆ ಅಶೋಕ ದುಡಗುಂಟಿ ಅವರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ ಆರೋಗ್ಯ ತಪಾಸಣೆ ಮಾಡಿಸಿದ್ದರು. ಇಲ್ಲಿನ ಕೆ.ಎಲ್.ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಸಮಗ್ರ ಆರೋಗ್ಯ ಚಿಕಿತ್ಸೆ ಕೊಡಿಸಿದ್ದರು. ವರ್ಷ ಕಳೆದರೂ ಯಾರೂ ಆರೋಗ್ಯದ ಬಗ್ಗೆ ಕಾಲಜಿ ತೋರಿಲ್ಲ ಎಂದು ಕಾರ್ಮಿಕ ಮಹಿಳೆಯರು ಆರೋಪಿಸುತ್ತಾರೆ.
ನಸುಕಿನ 4ಕ್ಕೇ ಎದ್ದು, ಕಸ, ಮುಸುರೆ, ರೊಚ್ಚು, ಕೊಳೆತ ವಸ್ತುಗಳು, ಮಾಂಸಾಹಾರದ ತ್ಯಾಜ್ಯ, ಸತ್ತ ಪ್ರಾಣಿಗಳ ದೇಹ ಸೇರಿದಂತೆ ಎಲ್ಲವನ್ನೂ ತೆರವು ಮಾಡುವ ಜೀವಗಳಿವು. ಇಡೀ ಬದುಕನ್ನು ಕಸದಲ್ಲೇ ಕಳೆಯುವುದರಿಂದ ಅವರಿಗೆ ರೋಗಗಳು ತಗಲುವ, ಅನಾರೋಗ್ಯ ಉಂಟಾಗುವ ಸಂಭವ ಹೆಚ್ಚಿರುತ್ತದೆ. ಅದಲ್ಲದೇ, ಪ್ರತಿ ದಿನವೂ ನಿಯಮಿತವಾಗಿ ನಿದ್ದೆ ಮಾಡದ ಕಾರಣ ದೇಹದಲ್ಲಿ ಅಸಮತೋಲನ, ರಕ್ತದೊತ್ತಡ, ಮಧುಮೇಹ ಮುಂತಾದ ಕಾಯಿಲೆಗಳೂ ಅಂಟಿಕೊಳ್ಳಬಹುದು.
ನಿಯಮಿತವಾಗಿ ಸುಸಜ್ಜಿತ ಆಸ್ಪತ್ರೆಗಳಲ್ಲಿ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು. ಕಾಯಿಲೆ ಬಂದವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂಬ ನಿಯಮವಿದೆ. ಮಹಾನಗರ ಪಾಲಿಕೆಯಲ್ಲಿ ಈ ನಿಯಮ ಪಾಲಿಸಿಲ್ಲ ಎನ್ನುವುದು ಅವರ ಗೋಳು. ವರ್ಷಕ್ಕೆ ಎರಡು ಜತೆ ಬಟ್ಟೆ, ಪುರುಷರಿಗೆ ಷರ್ಟ್- ಪ್ಯಾಂಟ್, ಗೌನು, ಕೈಗವಸು, ಬೂಟು, ಕಾಲುಚೀಲಗಳನ್ನು ನೀಡಬೇಕು. ಇದರೊಂದಿಗೆ ಮಹಿಳೆಯರಿಗೆ ಸೀರೆ ಕೊಡಬೇಕು. ಆದರೆ, ಕೆಲವರಿಗೆ ನೀಡಿದ್ದು ಕೆಲವರಿಗೆ ನೀಡಿಲ್ಲ. ನಗರದ ಹಲವು ಕಡೆ ಕೈಗವಸು (ಹ್ಯಾಂಡ್ಗೌಸ್) ಕಸ ಎತ್ತುವ ಹಲವು ಕಾರ್ಮಿಕರು ನೋಡಲು ಸಿಗುತ್ತಾರೆ.ಮತ್ತೆ ಕೆಲವರು ಅಲ್ಲೇ ಬಿದ್ದಿದ್ದ ಪ್ಲಾಸ್ಟಿಕ್ ಚೀಲಗಳನ್ನೇ ಕೈಗೆ ಹಾಕಿಕೊಂಡು ಕಸ ತೆಗೆಯುತ್ತಾರೆ. ಅದೇ ಕೈಯಿಂದ ಅವರು ಊಟ, ಉಪಾಹಾರ, ನೀರು ಸೇವನೆ ಮಾಡುತ್ತಾರೆ. ರೋಗಾಣುಗಳು ನೇರವಾಗಿ ದೇಹ ಸೇರುವ ಸಾಧ್ಯತೆ ಹೆಚ್ಚಾಗಿದೆ.
ಕಸ ಬೇರ್ಪಡಿಸದ ಜನ:-
ಹಸಿ ಕಸ- ಒಣ ಕಸವನ್ನು ಮನೆಯಲ್ಲೇ ಬೇರ್ಪಡಿಸಿ ಇಡಬೇಕು. ಒಂದೇ ಕಸದ ಡಬ್ಬದ ಬದಲು ಎರಡು ಡಬ್ಬಗಳನ್ನು ಇಟ್ಟುಕೊಂಡರೆ ಮನೆಯಲ್ಲೇ ಇದನ್ನು ಮಾಡಹುದು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸಬೇಕಿದೆ. ಈಗಲೂ ಜನರು ಹಸಿ ಕಸ- ಒಣ ಕಸವನ್ನು ಒಂದೇ ಬಕೆಟ್ನಲ್ಲಿ ಹಾಕಿ ಕೊಡುತ್ತಾರೆ. ಇದು ಕೂಡ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ರೀತಿ ತೆಗೆದುಕೊಂಡು ಬಂದ ಕಸವನ್ನು ಮತ್ತೆ ಬೇರ್ಪಡಿಸುವುದು ಅನಿವಾರ್ಯ. ಇದರಿಂದಾಗಿ ಪೌರಕಾರ್ಮಿಕರಿಗೆ ಇಡೀ ದಿನ ಬಿಡುವಿಲ್ಲದ ಕೆಲಸ ಕೊಡುತ್ತಿದ್ದಾರೆ. ಕಸ ಬೇರ್ಪಡಿಸುವ ಸಂಬಂಧ ಇನ್ನಷ್ಟು ಜಾಗೃತಿ ಮೂಡಿಸಬೇಕು. ಬೇರ್ಪಡಿಸದ ಮನೆಯ ಕಸ ಎತ್ತದಂತೆ ನಿಯಮ ಮಾಡಬೇಕು ಎಂಬುದು ಕಾರ್ಮಿಕರ ಬೇಡಿಕೆ.
8 ಲಕ್ಷ ಜನಸಂಖ್ಯೆಗೆ 1300 ಕಾರ್ಮಿಕರು:-
ಬೃಹತ್ತಾಗಿ ಬೆಳೆದ ಬೆಳಗಾವಿ ನಗರದಲ್ಲಿ 8 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇವರೆಲ್ಲರ ಗಲೀಜು ಸ್ವಚ್ಛ ಮಾಡಲು ಇರುವುದು ಕೇವಲ 1300 ಪೌರ ಕಾರ್ಮಿಕರು. ನಿಯಮದ ಪ್ರಕಾರ 700 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಆದರೆ ನಗರದಲ್ಲಿ ಇದರ ಸಂಖ್ಯೆ ಅಲ್ಲೋಲ- ಕಲ್ಲೋಲ ಎನ್ನುವಷ್ಟು ಹೆಚ್ಚಾಗಿದೆ. ತುರ್ತಾಗಿ ಹೆಚ್ಚಿನ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂಬ ಕೂಗಿಗೆ ಇನ್ನೂ ಬೆಲೆ ಸಿಕ್ಕಿಲ್ಲ.