
ರಾಮನಗರ: ಮಾವಿನ ಋತು ಶುರುವಾಗಿ ಮಾರುಕಟ್ಟೆಯಲ್ಲಿ ಹಣ್ಣಿನ ಘಮಲು ಮೂಗಿಗೆ ಬಡಿಯುವ ಹೊತ್ತಿನಲ್ಲೇ ಮಾವಿನ ಕಾಯಿಗಳಲ್ಲಿ ಜೋನಿ ರೋಗ ಕಾಣಿಸಿಕೊಂಡಿದೆ. ತಿಂಗಳಿಂದ ಶುರುವಾಗಿರುವ ಬಿಸಿಲು ಮತ್ತು ಮಳೆಯಾಟದ ನಡುವೆಯೇ ಬಂದಿರುವ ರೋಗವು, ಈ ಸಲವೂ ಮಾವು ಬೆಳೆಗಾರರನ್ನು ನಷ್ಟದ ಕೂಪಕ್ಕೆ ದೂಡಿದೆ. ಅಕಾಲಿಕ ಮಳೆ-ಗಾಳಿಯಿಂದಾಗಿ ನೆಲ ಕಚ್ಚುತ್ತಿರುವ ಮಾವಿನ ಕಾಯಿಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಪರದಾಡುತ್ತಿದ್ದರು. ಮಳೆಯಿಂದಾಗಿ ಮರಗಳಲ್ಲಿ ಚಿಗುರು ಶುರುವಾಗಿ ಹೂ ಸಹ ಬಿಡತೊಡಗಿತ್ತು. ಇದೀಗ ಕಾಯಿಗಳಲ್ಲಿ ಜೋನಿ ಕಾಣಿಸಿಕೊಂಡು ಮರದಲ್ಲೇ ಕೊಳೆಯತೊಡಗಿವೆ. ಕಾಯಿಯಿಂದ ಕಾಯಿಗೆ, ಮರದಿಂದ ಮರಕ್ಕೆ ವೇಗವಾಗಿ ಹರಡುತ್ತಿರುವ ರೋಗದಿಂದಾಗಿ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

ಗಾಯದ ಮೇಲೆ ಬರೆ ಎಳೆದಂತೆ ಜೋನಿ ರೋಗ ಕಾಣಿಸಿಕೊಂಡಿದೆ. ಕೆಲವರು ಬಲಿತ ಕಾಯಿಗಳ ಕೊಯ್ದು ಮಾಡುತ್ತಿದ್ದಾರೆ. ಹಲವೆಡೆ ಇನ್ನೂ ಬಲಿತಿಲ್ಲ. ಅಂತಹ ಕಾಯಿಗಳಿಗೆ ಜೋನಿ ಕಾಟ ಶುರುವಾಗಿದೆ ಎಂದು ಬೆಳೆಗಾರ ಆದರ್ಶ್ ತಿಳಿಸಿದರು. ರಾಮನಗರ ಜಿಲ್ಲೆಯ ಮಾವು ಮಂಡಿ ಹಾಗೂ ಮಾರುಕಟ್ಟೆ ಪ್ರವೇಶಿಸುವ ಮೂಲಕ, ರಾಜ್ಯದಲ್ಲಿ ಮಾವಿನ ಋತು ಶುರುವಾಗುತ್ತದೆ. ಆಗಾಗ ಬಿದ್ದ ಅಕಾಲಿಕ ಮಳೆಯಿಂದಾಗಿ ಮರಗಳಲ್ಲಿ ಹೂವು ಬಿಟ್ಟಿದೆ. ಇದರ ಜೊತೆಗೆ ಕಾಣಿಸಿಕೊಂಡಿರುವ ಜೋನಿಯು, ಈ ಸಲ ಮಾವಿನ ಇಳುವರಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಹಾಕಿದ ಬಂಡವಾಳವೂ ಕೈ ಸೇರದ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಕಾಲಿಕ ಮಳೆ-ಬಿಸಿಲಿನ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಮರಗಳಲ್ಲಿ ಈ ಸಲ ಎರಡು ಹಂತದಲ್ಲಿ ಹೂ ಬಿಟ್ಟಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಬಿಟ್ಟಿದ್ದ ಹೂವು ಫಸಲಿನ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ತಡವಾಗಿ ಸುರಿದ ಮಳೆಗೆ ಕಾಣಿಸಿಕೊಂಡಿದ್ದ ಹೂವು ನೆಲ ಕಚ್ಚಿದೆ. ಅದರ ಬೆನ್ನಲ್ಲೇ ಮಾವಿನ ಮರಗಳಲ್ಲಿ ಚಿಗುರು ಕಾಣಿಸಿಕೊಂಡಿದ್ದರಿಂದ ಕೀಟಬಾಧೆಗಳು ಹೆಚ್ಚಾಗಿದೆ. ಮೊದಲ ಹಂತದಲ್ಲಿ ಹೂವಿನಲ್ಲಿ ಕಚ್ಚಿದ ಕಾಯಿಗೆ ಯಾವುದೇ ರೋಗ ಇರಲಿಲ್ಲವಾದರೂ, ಎರಡನೇ ಹಂತದಲ್ಲಿ ಕಾಣಿಸಿಕೊಂಡ ಹೂವಿನಲ್ಲಿ ಕಚ್ಚಿದ ಕಾಯಿಗೆ ಕೀಟಬಾಧೆ ಶುರುವಾಗಿದೆ. ಮಾವಿನಕಾಯಿಗಳು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯತೊಡಗಿವೆ. ಇದರಿಂದಾಗಿ ಮಾವು ಬೆಳೆದವರು ಕಂಗಾಲಾಗಿದ್ದಾರೆ ಎಂದು ಬೆಳೆಗಾರರು ಅಳಲು ತೋಡಿಕೊಂಡರು.