
ಹಾಸನ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾ ಅರಣ್ಯ ವ್ಯಾಪ್ತಿಯಲ್ಲಿ ಆನೆ ಧಾಮ ಆರಂಭಿಸಲಾಗುವುದು. ಇದಕ್ಕಾಗಿ ₹53 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

j3tvkannada
ತಾಲ್ಲೂಕಿನ ಬೈಕೆರೆ ಗ್ರಾಮದಲ್ಲಿ ಏಪ್ರಿಲ್ 25ರಂದು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದ ರೈತ ಷಣ್ಮುಖ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ತಾಯಿ, ಪತ್ನಿ ಹಾಗೂ ಪುತ್ರನಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸಾಫ್ಟ್ ರಿಲೀಫ್ ಸೆಂಟರ್ ಆರಂಭಿಸುವ ಬಗ್ಗೆ ಚರ್ಚೆ ನಡೆದಿದ್ದು, ನಾಡಿನಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಇಲ್ಲಿಗೆ ಸಾಗಿಸಲಾಗುವುದು. ಇಲ್ಲಿ ಪುಂಡಾನೆಗಳ ನಡವಳಿಕೆಯನ್ನು ಸುಧಾರಿಸಿ ಅಭಯಾರಣ್ಯಕ್ಕೆ ಬಿಡುವ ಯೋಜನೆ ರೂಪಿಸಿಸಲಾಗಿದೆ. 8ರಿಂದ 10 ತಿಂಗಳಿನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಕಾಡಾನೆ- ಮಾನವ ಸಂಘರ್ಷ ಅತಿಯಾಗಿದ್ದು, ಒಂದು ವರ್ಷದಲ್ಲಿ 7 ಜನರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸಹ ಪ್ರಾಣ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸಹ ಹಲವು ಘಟಕಗಳನ್ನು ತೆರೆದು ಕಾಡಾನೆ- ಮಾನವ ಸಂಘರ್ಷ ತಡೆಗೆ ಮುಂದಾಗಿದೆ. ಸದ್ಯ ದ್ರೋಣ್ ಮೂಲಕ ಕಾಡಾನೆಗಳನ್ನು ಗುರುತಿಸುವ ಹಂತವಾಗಿ ಹಾಸನ ಅರಣ್ಯ ಇಲಾಖೆ ಎರಡು ದ್ರೋಣ್ ಖರೀದಿಸಲಾಗಿದೆ ಎಂದರು.
ಕಾಡಾನೆ- ಮಾನವ ಸಂಘರ್ಷ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶದಲ್ಲೇ ಈ ಸಮಸ್ಯೆ ಇದ್ದು, ಸಂಕೀರ್ಣ ಸಮಸ್ಯೆ ಪರಿಹಾರಕ್ಕೆ ತನ್ನದೇ ಆದ ಸಮಯ ಹಿಡಿಯಲಿದೆ. ಸಮಸ್ಯೆ ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಮೇ ಅಂತ್ಯದಲ್ಲಿ ಬೆಳಗಾರರು, ತಜ್ಞರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಲಾಗುವುದು. ನಂತರ ಕಾಡಾನೆ ಪೀಡಿತ ಕ್ಷೇತ್ರದ ಶಾಸಕರೊಂದಿಗೆ ದೆಹಲಿಗೆ ತೆರಳಿ, ಕೇಂದ್ರ ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮಾನವ ಹತ್ಯೆ ಆಗದಂತೆ ನಿತ್ಯ ದೇವರಲ್ಲಿ ಪ್ರಾರ್ಥಿಸಿಕೊಳ್ಳುವೆ. ಮೃತ ಷಣ್ಮುಖ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು. ತಾಲ್ಲೂಕಿನಲ್ಲಿ ಉಪಟಳ ನೀಡುತ್ತಿರುವ ಮತ್ತೆರಡು ಕಾಡಾನೆಗಳನ್ನು ಹಿಡಿಯಲು ಕಾರ್ಯಾಚರಣೆ ಮಾಡಲಾಗುವುದು. ಅಗತ್ಯ ಬಿದ್ದರೆ ಮತ್ತಷ್ಟು ಆನೆ ಸೆರೆಗೆ ಆದೇಶ ನೀಡಲಾಗುವುದು ಎಂದರು.
ನಮ್ಮ ಸರ್ಕಾರದಲ್ಲಿ ಬೆಳೆ ಪರಿಹಾರವನ್ನು ತಕ್ಷಣವೇ ನೀಡುವಂತೆ ಆದೇಶ ನೀಡಲಾಗಿದೆ. ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೂ ಒಂದೇ ಹಂತದಲ್ಲಿ ಪರಿಹಾರ ನೀಡಲಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ ಸರಾಸರಿ ಲೆಕ್ಕದಲ್ಲಿ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಕಾಡಾನೆಯಿಂದ ಪ್ರಾಣ ಹಾನಿ ಆಗದಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೈಗೊಳ್ಳಲಿದ್ದಾರೆ ಎಂದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್, ಸಿ.ಸಿ.ಎಫ್ ಏಡುಕೊಂಡಲು, ಡಿ.ಎಫ್.ಒ ಸೂರಬ್ಕುಮಾರ್ ಹಾಗೂ ಇತರರು ಇದ್ದರು.