
ಕೊಪ್ಪಳ : ಪಟ್ಟಣದ ಹೊರವಲಯದಲ್ಲಿ ಏಕಾಏಕಿ ಸುಂಟರಗಾಳಿ ಬೀಸಿದ್ದರಿಂದ ತೋಟದಲ್ಲಿ ಅಳವಡಿಸಿದ್ದ ಹನಿ ನೀರಾವರಿ ಪೈಪ್ಗಳು ತರಗೆಲೆಯಂತೆ ಹಾರಾಡಿ ವಿದ್ಯುತ್ ತಂತಿಯ ಮೇಲೆ ಬಿದ್ದಿರುವ ಘಟನೆಯು ನಡೆದಿದೆ.

j3tvkannada
ಟೆಂಗುಂಟಿ ರಸ್ತೆ ಪಕ್ಕದಲ್ಲಿ ಬಸವರಾಜ ಕುದರಿಮೋತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು ನಿಡಶೇಸಿ ಗ್ರಾಮದ ಮಲ್ಲೇಶಪ್ಪ ಕರಡೆಪ್ಪ ಎಂಬುವವರು ಲೀಸ್ ಮೇಲೆ ಪಡೆದು ಹತ್ತಿ ಬೀಜೋತ್ಪಾದನೆ ಕೈಗೊಂಡಿದ್ದರು.
ಆದರೆ ಸುಂಟರಗಾಳಿಗೆ ಪೈಪ್ಗಳೆಲ್ಲ ಕಿತ್ತು ವಿದ್ಯುತ್ ಕಂಬ ಹಾಗೂ ತಂತಿಯ ಮೇಲೆ ಬಿದ್ದಿದ್ದವು. ಇದರಿಂದ ರೈತ ಮಲ್ಲೇಶಪ್ಪ ಎಂಬುವವರಿಗೆ ಬಹಳಷ್ಟು ಹಾನಿ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದಾಗ ತೋಟದಲ್ಲಿ ಯಾರೂ ಇರದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಅದೇ ರೀತಿ ಇತರೆ ಜಮೀನುಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾಕಿದ್ದ ಪ್ಲಾಸ್ಟಿಂಗ್ ಹೊದಿಕೆ ಶೀಟ್ ಕಿತ್ತುಹೋಗಿವೆ. ಜೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಪೈಪ್ಗಳನ್ನು ತೆರವುಗೊಳಿಸಿದರು.