
ಹುಬ್ಬಳ್ಳಿ: ನಿರಂತರ ಬೆಲೆ ಏರಿಕೆ ಮೂಲಕ ಬಡವರ, ಮಧ್ಯಮ ವರ್ಗದ ದ್ವೇಷಿ ಆಗಿರುವ ನರೇಂದ್ರ ಮೋದಿ ಅವರ ಸರ್ಕಾರ, ಜಾತಿಗಳ ನಡುವೆ, ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ ತನ್ನ ವೈಫಲ್ಯ ಮುಚ್ಚಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಅಕ್ಕಿಯಿಂದ ಚಿನ್ನದವರೆಗೂ ಎಲ್ಲದರ ಬೆಲೆ ಆಕಾಶಕ್ಕೆ ಏರಿದೆ. ದೇಶದ ಹಾಗೂ ರಾಜ್ಯದ ಜನರಿಗೆ ಬಿಜೆಪಿ ಪರಿವಾರದ ಜನದ್ರೋಹ ಈಗ ಅರ್ಥವಾಗಿದೆ. ಇದನ್ನು ಮರೆ ಮಾಚಲು ಹಾಗೂ ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

j3tvkannada
ಹುಬ್ಬಳ್ಳಿಯಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನಾ ಕಾರ್ಯಕ್ರಮ ನಡೆದಿದ್ದು. ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ದೇಶದಲ್ಲಿ ಉಪ್ಪು, ಸಕ್ಕರೆ, ಟೀ, ಕಾಫಿ, ಅಕ್ಕಿ, ಬೇಳೆ, ಎಣ್ಣೆ, ಕಾಳು, ಚಿನ್ನ, ಬೆಳ್ಳಿ, ರಸಗೊಬ್ಬರ, ಔಷಧ, ಡೀಸೆಲ್, ಪೆಟ್ರೋಲ್ ಹಾಗೂ ಅಡುಗೆ ಅನಿಲ ಸೇರಿ ಎಲ್ಲದರ ಬೆಲೆ ಆಕಾಶಕ್ಕೆ ಏರಿಸಿರುವ ಮೋದಿಯವರು ಯಾವುದನ್ನು ತಾನೆ ಬಿಟ್ಟಿದ್ದಾರೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು 2014 ರಲ್ಲಿ ಡಾಲರ್ ಬೆಲೆಯು 59 ರೂಪಾಯಿ ಇತ್ತು. ಇಂದು ಡಾಲರ್ ಮುಂದೆ ರೂಪಾಯಿ ಬೆಲೆಯು 86 ರೂಪಾಯಿ ಆಗಿದೆ. ಇದಕ್ಕೆ ಯಾರು ಕಾರಣರು ಮೋದಿಯವರೇ, ಇದೇನಾ ನಿಮ್ಮ ಅಚ್ಛೆ ದಿನ್ ಅಂತ ಪ್ರಶ್ನೆ ಕೇಳಿದ್ದಾರೆ.
2014ರಲ್ಲಿ ದೇಶದಲ್ಲಿ 50 ಕೆಜಿ ಸಿಮೆಂಟ್ ಬೆಲೆಯು 200 ಇತ್ತು. ಅದೇ ಈಗ 450 ರೂಪಾಯಿ ಆಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 425 ಇತ್ತು. ಆದರೆ, ಇಂದು 850 ದಾಟಿದೆ ಆಗಿದೆ. ಶೇ100 ರಷ್ಟು ಬೆಲೆ ಏರಿಕೆಯನ್ನು ಬಿಜೆಪಿ ಅವರು ಮಾಡಿದ್ದೀರಿ. ಜನದ್ರೋಹದ ಪರಮಾವಧಿ ಮುಂದುವರಿಸಿದ್ದು, ಸಿಲಿಂಡರ್ ಸಬ್ಸಿಡಿ ತೆಗೆದು ಹಾಕಿ ಬಡವರ ಮತ್ತು ಮಧ್ಯಮ ವರ್ಗದವರ ವಿರೋಧಿ ಆಗಿದ್ದೀರಿ ಎಂದಿದ್ದಾರೆ. ನಿಮ್ಮ ವಂಚನೆಗೆ ಕೊನೆಯೇ ಇಲ್ಲವೇ ಅಂತ ಕೇಳಿರುವ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೇ, ನೀವು ಮತ್ತು ಮೋದಿಯವರು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದ್ದೀರಿ. ಆದರೆ, ನೀವು ಮಾಡಿದ ಪಾಪದ ಕೊಡವನ್ನು ನಮ್ಮ ತಲೆ ಮೇಲೆ ಹೊರಿಸಲು ಯತ್ನಿಸುತ್ತಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಖಾರವಾಗಿಯೇ ಕೇಳಿದ್ದಾರೆ.

j3tvkananda
ಕರ್ನಾಟಕ ಸರ್ಕಾರ ಹಾಲಿನ ದರವನ್ನು 4ರೂಪಾಯಿ ಹೆಚ್ಚಿಸಿದೆ. ಆದರೆ ಅಷ್ಟೂ ಹಣವನ್ನೂ ರೈತರಿಗೆ ವರ್ಗಾಯಿಸಲಾಗಿದೆ. ಇದರಲ್ಲಿ ಹತ್ತು ಪೈಸೆಯನ್ನು ಸಹ ಸರ್ಕಾರಕ್ಕೆ ಬರುವುದಿಲ್ಲ. ನೀವು ಮಾಡಿರುವ ಬೆಲೆ ಏರಿಕೆಯಿಂದಾಗಿ ಯಾವ ಭಾರತೀಯರಿಗೆ ಸಿಗುತ್ತಿದೆ ಹೇಳಿ. ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಕಳೆದರೂ ಅಸಮಾನತೆ, ತಾರತಮ್ಯ ಕಡಿಮೆಯಾಗಿಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡುವ ಬಗ್ಗೆ ಭರವಸೆ ನೀಡಿದ್ದೆವು. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ರಾಹುಲ್ ಗಾಂಧಿಯವರು ಪಾರ್ಲಿಮೆಂಟಿನಲ್ಲಿ ನಿರಂತರ ಈ ಬಗ್ಗೆ ಧ್ವನಿ ಎತ್ತಿ ಹೋರಾಟ ನಡೆಸಿದ್ದರು. ಇದರ ಪರಿಣಾಮ ಕೇಂದ್ರ ಬಿಜೆಪಿ ಸರ್ಕಾರ ಇಂದು ನಮ್ಮ ಹೋರಾಟಕ್ಕೆ ಮಣಿದು ಈಗ ಜಾತಿ ಗಣತಿಗೆ ನಿರ್ಧರಿಸಿದೆ.
ಇದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಸೈದ್ಧಾಂತಿಕ ಬದ್ಧತೆಗೆ ಸಿಕ್ಕ ಗೆಲುವು ಎಂದು ಅವರು ಹೇಳಿದ್ದಾರೆ. ಇನ್ನು ಇದೇ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೂ ವಾಗ್ದಾಳಿ ನಡೆಸಿದ್ದಾರೆ. ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರವು ಜನರ ಪಿಕ್ ಪಾಕೆಟ್ ಮಾಡುತ್ತಿದೆ ಎಂದಿದ್ದಾರೆ. ಬೆಲೆ ಏರಿಕೆಗೆ ಮುಕ್ತಿ ಹಾಡಲು ಗ್ಯಾರಂಟಿ ನೀಡಿದ್ದೇವೆ. ಐದು ಗ್ಯಾರಂಟಿ ಕೊಟ್ಟು ಶಕ್ತಿ ನೀಡ್ತೀದ್ದೇವೆ ಆದರೂ ಬಿಜೆಪಿಯವರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಜನಾಕ್ರೋಶ ಯಾತ್ರೆ ಆರಂಭದ ವೇಳೆಯೇ ಕೇಂದ್ರ ಡಿಸೇಲ್ ದರ ಏರಿಸಿತ್ತು.
ಅದರ ವಿರುದ್ಧ ಬಿಜೆಪಿ ಏಕೆ ಹೋರಾಟ ಮಾಡ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಎರಡು ವರ್ಷ ಪೂರೈಸಿದ ವೇಳೆ ವಿಜಯನಗರದಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ. ಪೌರಕಾರ್ಮಿಕರ ಸೇವೆ ಖಾಯಂ ಮಾಡ್ತೇವೆ ಅಂತ ಭರವಸೆ ನೀಡಿದ್ದೆವು. ಅದರಂತೆ ಇವತ್ತು 12600 ಜನ ಪೌರ ಕಾರ್ಮಿಕರಿಗೆ ಸೇವೆ ಖಾಯಮಾತಿ ಮಾಡಿದ ಪ್ರಮಾಣ ಪತ್ರ ನೀಡಿದ್ದೇವೆ . ನಿಮ್ಮ ಜನಾಕ್ರೋಶ ಕೇಂದ್ರ ಸರ್ಕಾರದ ಮೇಲಿರಲಿ. ನಮ್ಮ ಸರ್ಕಾರದ ಮೇಲಲ್ಲ ಮಹದಾಯಿ ವಿಚಾರದಲ್ಲಿ ಬಿಜೆಪಿ ವಿಜಯೋತ್ಸವ ಮಾಡಿತು.

j3tvkannada
ಆದರೆ ಇದುವರೆಗೂ ಯಾಕೆ ಅನುಷ್ಠಾನ ಆಗಿಲ್ಲವೇಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಸಂವಿಧಾನ ಉಳಿಸಲು ನಾವು ಈ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಹೋರಾಟ ಮಾಡಲು ಬಂದರೆ ಅದಕ್ಕೆ ನಾವು ಅವಕಾಶ ನೀಡಲ್ಲ ಇದು ಕಾಂಗ್ರೆಸ್ ಸಂಕಲ್ಪ ಅಂತ ಹುಬ್ಬಳ್ಳಿಯಲ್ಲಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.ನಾನು ಮೋದಿಗೆ ಹೆದರಲ್ಲ, ಅಮಿತ್ ಶಾಗೂ ಹೆದರಲ್ಲ. ನಾನು ಯಾರಿಗೂ ಹೆದರಲ್ಲ. ಸಂವಿಧಾನ ಇದೆ, ಅದಕ್ಕಾಗಿ ನಾವೆಲ್ಲರೂ ಸ್ವತಂತ್ರವಾಗಿ ಮಾತನಾಡೋ ಶಕ್ತಿ ಇದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವವರ ಮೇಲೆ ಇಡಿ, ಸಿಬಿಐ ತೋರಿಸಿ ಧಮ್ಕಿ ಹಾಕ್ತಿದೆ.
ಇದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದಿದ್ದಾರೆ. ಸಂವಿಧಾನ ಬಚಾವೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರ್ಯಾಲಿ ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಎಚ್ಚರಿಕೆ ಗಂಟೆ ಕೊಡುವ ಕೆಲಸ ಇಲ್ಲಿಂದ ನಡೆಯುತ್ತಿದೆ. ಸಂವಿಧಾನ ಬಲಪಡಿಸೋ ಕೆಲಸ ಮಾಡಬೇಕಿದೆ. ಕೆಲವರು ಹೀಯಾಳಿಸಿ ಮಾತನಾಡ್ತಾರೆ. ಎಲ್ಲದಕ್ಕೂ ಟೀಕೆ ಮಾಡ್ತಾರೆ. ಜಾತಿ ಜನಗಣತಿ ಮಾಡಬಹುದು ಅಂತ ಕೇಂದ್ರ ನಿರ್ಣಯ ಕೈಗೊಂಡಿದೆ. ಇದಕ್ಕಾಗಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೆವು. ನಾವು ಹೇಳಿದಾಗ ಅವರು ಕೇಳಲಿಲ್ಲ. ಜನರ ಒತ್ತಡ ಹೆಚ್ಚಾದ ಮೇಲೆ ಸರ್ಕಾರ ಬಗ್ಗಿದೆ.

j3tvkannada
ಜಾತಿ ಜನಗಣತಿ ಮಾಡ್ತೇವೆ ಅಂತ ಹೇಳಿದ್ದಾರೆ ಎಂದರು. ಜಾತಿ ಜನಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಂತ್ರಿಯೊಬ್ಬರು ರಾಹುಲ್ ಗಾಂಧಿ ನಿಲುವು ಸರಿಯಿಲ್ಲ ಅಂತ ಹೇಳಿದ. ಅಲ್ಲದೇ ಬಾಯಿಗೆ ಬಂದಂತೆ ಮಾತನಾಡಿದರು. ಜಾತಿ ಜಾತಿಗೆ ಜಗಳ ಹಚ್ಚುತ್ತಿದ್ದಾರೆ. ದೇಶದ ತುಂಡಾಗುತ್ತೆ ಅಂತ ಹೇಳಿದರು. ಈಗ ಅವರದೇ ಸರ್ಕಾರ ಜಾತಿ ಜನಗಣತಿ ಮಾಡಲು ಮುಂದಾಗಿದೆ. ಟೀಕೆ ಮಾಡಿದವರೇ ನೀವೇ ಅದರ ಪರಿಣಾಮ ಎದುರಿಸಬೇಕಾಗುತ್ತೆ. ಶೇ 50 ರಷ್ಟು ಮೀಸಲಾತಿಗೆ ಮಿತಿ ಇದೆ. ಈ ಮಿತಿ ತೆಗೆದು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ತಯಾರಿದ್ದಾರೆ. ಕೇಂದ್ರ ಸರ್ಕಾರ ಅದಕ್ಕೆ ಅವಕಾಶ ಕೊಡ್ತಿಲ್ಲ. ಪ್ರತಿ 10 ವರ್ಷಕ್ಕೊಮ್ಮೆ ಜಾತಿ ಜನಗಣತಿ ಮಾಡಬೇಕು. ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರ ಮಾಡಲೇಬೇಕು. ಇಲ್ಲದಿದ್ದಲ್ಲಿ ನಿಮಗೆ ನಿರಾಸಕ್ತಿ ಇದೆ ಅಂತ ಅರ್ಥ ಮಾಡಿಕೊಳಲಿದ್ದೇವೆ ಎಂದು ಎಚ್ಚರಿಸಿದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಲೋಪದೋಷ ಯಾರದ್ದು, ಇದಕ್ಕೆ ಕಾರಣರಾದವರು ಯಾರು? ಮೂರು ಹಂತದ ಸೆಕ್ಯೂರಿಟಿ ಇದ್ದರೂ ಹೇಗೆ ದಾಳಿ ನಡೀತು? ಸರ್ವ ಪಕ್ಷ ಸಭೆಗೆ ಪ್ರಧಾನಿಯೇ ಬರಲಿಲ್ಲ ಅಂದ್ರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮೋದಿ ಬಿಹಾರಕ್ಕೆ ಹೋಗಿ ಭಾಷಣ ಮಾಡ್ತಿದ್ದರು. ನೀವು ಏನಾದ್ರು ಭಾಷಣ ಮಾಡಿ, ಆದ್ರೆ ನಮಗೆ ಬೇಕಿರೋದು ರಕ್ಷಣೆ ದೇಶದ ವಿಚಾರದಲ್ಲಿ ಎಲ್ಲರೂ ಒಂದಾಗಿರಬೇಕು. ನಮಗೆ ದೇಶದ ಮುಖ್ಯ, ಉಳಿದದ್ದು ನಂತರ ಎಂದರು.