
ದಕ್ಷಿಣ ಕನ್ನಡ: ದಶಕಗಳ ಕನಸು ನನಸಾಗಿ 3 ವಾರ ಕಳೆದಿದೆ. ಆಗಲೇ ಈ ಯೋಜನೆಗೆ ಅದ್ಭುತ ಸ್ಪಂದನೆ ಸಿಕ್ಕಿದೆ. ಮಂಗಳೂರಿನಿಂದ ಪುತ್ತೂರು ವರೆಗೆ ಮಾತ್ರ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೂ ವಿಸ್ತರಣೆ ಮಾಡಿದ ನಂತರ ಪುತ್ತೂರು, ಕಡಬ, ಸುಳ್ಯ ತಾಲೂಕುಗಳ ಮೇಲೆ ಅದ್ಭುತ ಪರಿಣಾಮ ಬೀರಿದೆ.
ಕಡಲ ನಗರಿ ಮಂಗಳೂರು ಮತ್ತು ದೇಗುಲ ನಗರಿ ಕುಕ್ಕೆ ಸುಬ್ರಹ್ಮಣ್ಯವನ್ನು ಬೆಸೆಯುವ ಪ್ಯಾಸೆಂಜರ್ ರೈಲು ದಿನಕ್ಕೆ ಎರಡು ಬಾರಿ ಸಂಚಾರ ಆರಂಭಿಸಿದ ಬಳಿಕ ಈ ಭಾಗದ ಪ್ರಯಾಣಿಕರು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಏಪ್ರಿಲ್ 12ರಂದು ಮಂಗಳೂರಿನಲ್ಲಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಈ ರೈಲಿಗೆ ಚಾಲನೆ ನೀಡಿದ್ದರು. ಇದಾದ ಬಳಿಕ ಸಂಸದ ಕ್ಯಾ. ಬ್ರಿಜೇಶ್ ಚೌಟ ರೈಲಿನಲ್ಲೇ ಸುಬ್ರಹ್ಮಣ್ಯ ರೋಡ್ ನಿಲ್ದಾಣದ ವರೆಗೆ ಪ್ರಯಾಣಿಸಿದ್ದರು.

j3tvkannada
ಮಂಗಳೂರು- ಸೆಂಟ್ರಲ್ ನಿಲ್ದಾಣದಿಂದ ಕಬಕ- ಪುತ್ತೂರು ನಿಲ್ದಾಣದ ವರೆಗೆ ಮೊದಲಿನಿಂದಲೇ ರೈಲು ಸೌಕರ್ಯವಿದ್ದ ಕಾರಣ ಈ ಎರಡು ನಗರಗಳ ನಡುವೆ ಯಾವುದೇ ಬದಲಾವಣೆ ಆಗಿಲ್ಲ. ಆದರೆ ಪುತ್ತೂರಿನಿಂದ- ಸುಬ್ರಹ್ಮಣ್ಯದ ವರೆಗೆ ಧನಾತ್ಮಕ ಬದಲಾವಣೆ ಉಂಟಾಗಿದೆ. ಪುತ್ತೂರು, ನರಿಮೊಗರು (ಸರ್ವೆ), ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜೆಕರೆ ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳಲ್ಲಿ ಉತ್ತಮ ಸ್ಪಂದನೆ ಕಂಡು ಬಂದಿದೆ.
ಮುಂಜಾನೆ 4 ಗಂಟೆಗೆ ಮಂಗಳೂರಿನಿಂದ ರೈಲು ಹೊರಡುವಾಗ ಅಷ್ಟೇನೂ ಪ್ರಯಾಣಿಕರ ಒತ್ತಡ ಇರುವುದಿಲ್ಲ. ಆದರೆ 5.20ಕ್ಕೆ ಪುತ್ತೂರಿಗೆ ಬಂದಾಗ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರಯಾಣಿಕರು ಕಾಯುತ್ತಿರುತ್ತಾರೆ. 6.30 ಗಂಟೆಗೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪುವ ರೈಲು ಅಲ್ಲಿಂದ 7 ಗಂಟೆಗೆ ಗಂಟೆಗೆ ಹೊರಡುವಾಗ ನೇರ ಮಂಗಳೂರಿಗೆ ಹೋಗುವ ಸುಬ್ರಹ್ಮಣ್ಯ ಯಾತ್ರಾರ್ಥಿಗಳು ಮತ್ತು ಪುತ್ತೂರು, ಮಂಗಳೂರು ಕಡೆಗೆ ಉದ್ಯೋಗ ನಿಮಿತ್ತ ಹೋಗುವ ಪ್ರಯಾಣಿಕರು ಸಿಗುತ್ತಿದ್ದಾರೆ.

j3tvkananda
ಕೋಡಿಂಬಾಳ ನಿಲ್ದಾಣದಲ್ಲಿ ಸುಮಾರು 40ರಷ್ಟು, ಎಡಮಂಗಲದಲ್ಲಿ ಸುಮಾರು 50ರಷ್ಟು, ಕಾಣಿಯೂರಿನಲ್ಲಿ ಸುಮಾರು 60ರಷ್ಟು ಪ್ರಯಾಣಿಕರು ಸರಾಸರಿ ಇರುತ್ತಾರೆ. 7.50ಕ್ಕೆ ಪುತ್ತೂರು ತಲುಪುವಾಗ ಮಂಗಳೂರಿಗೆ ಹೋಗುವ 75ಕ್ಕಿಂತಲೂ ಅಧಿಕ ಪ್ರಯಾಣಿಕರಿರುತ್ತಾರೆ ಎಂದು ನಿತ್ಯ ಪ್ರಯಾಣಿಕರು ಹೇಳುತ್ತಿದ್ದಾರೆ. ಬೆಳಗ್ಗಿನ ಹೊತ್ತು ಭಣಗುಡುತ್ತಿದ್ದ ನರಿಮೊಗರು, ಕಾಣಿಯೂರು, ಎಡಮಂಗಲ, ಕೋಡಿಂಬಾಳ, ಬಜಕೆರೆ ನಿಲ್ದಾಣಗಳು ಈಗ ಪ್ರಯಾಣಿಕರಿಂದ ಕಂಗೊಳಿಸುತ್ತಿವೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಕೇವಲ ಒಂದು ರೈಲು ಈ ಭಾಗಗಳ ಜನ ಸಂಚಾರದ ನಕಾಶೆಯನ್ನೇ ಬದಲಾಯಿಸಿದೆ.