ಸಣ್ಣ ಮಳೆ ಬಿದ್ದರೆ ಸಾಕು ರೈನ್ ಕೋಟ್ ಹಾಕಿ ಸ್ನೇಹಿತರ ಜೊತೆ ತೆಂಗಿನಕಾಯಿ ಹಿಡಿಯೋಕೆ ಹೋಗೋರು ಈಗಲೂ ಇದ್ದಾರೆ. ಇಂಥದ್ದೊಂದು ಘಟನೆ ಕೇರಳದಲ್ಲಿ ನಡೆದಿದೆ.
ಮಳೆಗಾಲ ಬಂತು ಅಂದರೆ ಕರಾವಳಿ ಭಾಗಗಳಲ್ಲಿ ಒಂದು ಪದ್ಧತಿ ಇದೆ. ಹರಿಯುವ ನದಿಯೋ, ತೊರೆಯ ಪಕ್ಕದಲ್ಲೋ, ಸೇತುವೆ ಮೇಲೆಯೋ ನಿಂತು ತೆಂಗಿನಕಾಯಿ ಹಿಡಿಯೋದು. ಇದೊಂಥರಾ ಮೀನು ಹಿಡಿಯುವಷ್ಟೇ ಮಜವಾದ ಸಂಗತಿ. ಬಿಟ್ಟಿ ಸಿಗೋದರ ಖುಷಿ ಬೇರೇನೇ ಅಲ್ವೇ? ಹೀಗೆಯೇ ಮಳೆಗಾಲದಲ್ಲಿ ನದಿಯಲ್ಲಿ ತೇಲಿ ಬರುವ ತೆಂಗಿನಕಾಯಿಗೆ ವಾರಿಸುದಾರರಿಲ್ಲ. ಅದು ಸಿಕ್ಕಿದವರ ಪಾಲಿನದ್ದು.
ಕಣ್ಣೂರಿನ ಅಳಿಕ್ಕಲ್ನಲ್ಲಿ ಮೀನುಗಾರರ ಗುಂಪೊಂದು ಮೀನು ಹಿಡಿಯೋಕೆ ಅಂತ ಕಡಲಿಗಿಳಿದಿತ್ತು. ಆದರೆ ಅವರಿಗೆ ಮೀನಿನ ಬದಲು ಸಿಕ್ಕಿದ್ದು ರಾಶಿ ರಾಶಿ ತೆಂಗಿನಕಾಯಿ.
ಕಣ್ಣೂರಿನ ಪಯ್ಯಂಬಲಂ ತೀರದ ಕಡಲಿನಲ್ಲಿ ನಾಲ್ಕು ಮೀಟರ್ ದೂರದಲ್ಲಿ ತೇಲಿಬಂದಿದ್ದ ಮರಗಳ ದಿಮ್ಮಿ ಹಾಗೂ ರೆಂಬೆಗಳ ಮಧ್ಯೆ ನೂರಾರು ತೆಂಗಿನಕಾಯಿ ತೇಲುತ್ತಿತ್ತು. ಅದು ಮೀನುಗಾರರ ಪಾಲಾಗಿದೆ. ಇತ್ತೀಚಿನ ವಿಪರೀತ ಮಳೆಗೆ ಕಡಲಿಗೆ ಹರಿದು ಬಂದು ಸೇರಿದ ತೆಂಗಿನಕಾಯಿ ಇದಾಗಿರಬಹುದು ಎನ್ನುತ್ತಾರೆ ಮೀನುಗಾರರು.
25 ಜನರನ್ನು ಒಳಗೊಂಡ ಮೀನುಗಾರರ ತಂಡ ಶಿವಗಂಗಾ ಬೋಟ್ ಹತ್ತಿತ್ತು. ಇನ್ನೆರಡು ಚಿಕ್ಕ ಬೋಟ್ಗಳೂ ಇದ್ದವು. ಮಂಗಳವಾರ ಬೆಳಗ್ಗೆ ಈ ಬೋಟ್ಗಳು ಹೊರಡಿದ್ದವು. ಬೆಳಗ್ಗೆ 6.30 ಗೆ ಹೊರಟಿದ್ದೆವು. ನಾಲ್ಕು ಕಿಲೋ ಮೀಟರ್ ಮುಂದೆ ಹೋದರೂ ಮೀನು ಸಿಕ್ಕಿಲ್ಲ.

ಗಾಳಿ ಜೋರಾಗಿ ಮಳೆಯೂ ಜೋರಾಗುತ್ತಿದ್ದಂತೆ ನಾವು ವಾಪಸ್ ಬರಲು ನಿರ್ಧರಿಸಿದ್ದೆವು ಎಂದು ಬೋಟ್ನ ಮಾಲೀಕ ಕೆಕೆ ಬೈಜು ಹೇಳಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಆಳಿಕ್ಕಲ್ಗೆ ಬರಲಾಗದೆ ಅವರು ಕಣ್ಣೂರು ಬಂದರಿನತ್ತ ಬೋಟ್ ತಿರುಗಿಸಿದ್ದಾರೆ.
ಮುಂದೆ ಸಾಗುವಾಗ ತೆಂಗಿನ ಕಾಯಿ ರಾಶಿ ಕಾಣಿಸಿದೆ. ಸುಮಾರು 300ಕ್ಕೂ ಹೆಚ್ಚು ತೆಂಗಿನಕಾಯಿಗಳನ್ನು ಅಲ್ಲಿಂದ ಹೆಕ್ಕಿಕೊಂಡು ಬೋಟ್ಗೆ ಲೋಡ್ ಮಾಡಿದೆವು. ನೀರಲ್ಲಿಯೇ ಇದ್ದ ಕಾರಣ ನೆನೆದುಕೊಂಡು ಅವುಗಳು ಕಪ್ಪಾಗಿದ್ದವು, ಆದರೆ ಹಾಳಾಗಿರಲಿಲ್ಲ. ಬಳಸಬಹುದಾಗಿದೆ ಎಂದು ಬೈಜು ಹೇಳಿದ್ದಾರೆ.
ಮಳೆಗಾಲದಲ್ಲಿ ನದಿ ನೀರು ಆಳಿಕ್ಕಲ್ ಮೂಲಕ ಕಡಲಿಗೆ ಸೇರುತ್ತದೆ. ಇದರಿಂದ ಬೋಟ್ ಕಡಲಿಗಿಳಿಯುವುದು ಕಷ್ಟವಾಗುತ್ತದೆ. ಹಾಗಾಗಿ ಕೆಲವು ತಿಂಗಳು ಮೀನುಗಾರರು ಕಣ್ಣೂರು ಬಂದರಿನಿಂದ ಕೆಲಸ ಮಾಡುತ್ತಾರೆ. ತೀರದಲ್ಲಿ ಬೋಟ್ನಿಂದ ತೆಂಗಿನಕಾಯಿ ಇಳಿಸೋದನ್ನು ನೋಡಿದ ಜನ ಅಚ್ಚರಿಗೊಂಡಿದ್ದರು.
ನಂತರ ಬಂದ ಬೋಟ್ನಲ್ಲಿ ಸುಮಾರು 800 ತೆಂಗಿನಕಾಯಿಗಳಿದ್ದವು. ಮೀನುಗಾರರು ಈ ತೆಂಗಿನಕಾಯಿಗಳನ್ನು ತಮ್ಮ ಮನೆ ಖರ್ಚಿಗೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ತೆಂಗಿನಕಾಯಿ ಬೆಲೆ ಹೆಚ್ಚಿರುವುದಿಂದ ಒಂದಷ್ಟನ್ನು ಮಾರಾಟ ಮಾಡಿದ ಕಾರಣ ಆ ದಿನದ ಸಂಪಾದನೆಯಾಗಿದೆ ಎಂದಿದ್ದಾರೆ ಬೈಜು.
ಸಮುದ್ರದಲ್ಲಿ ಒಂದು ಅಥವಾ ಎರಡು ತೆಂಗಿನಕಾಯಿ ಸಿಗುವುದು ಸಹಜ. ಆದರೆ ಇಷ್ಟೊಂದು ರಾಶಿ ತೆಂಗಿನಕಾಯಿ ಸಿಗೋದು ನಾವೆಂದೂ ನೋಡಿಲ್ಲ ಎಂದು ಬೈಜು ಹೇಳಿದ್ದಾರೆ. ಮರುದಿನ ನೋಡಿದಾಗ ಯಾವುದೇ ತೆಂಗಿನಕಾಯಿ ಸಿಗಲಿಲ್ಲ. ತೀವ್ರವಾದ ಗಾಳಿ ಮಳೆ ಇದ್ದಾಗ ನದಿಗಳ ಮೂಲಕ ತೇಲಿ ಬಂದ ತೆಂಗಿನಕಾಯಿ ಸಮುದ್ರದಲ್ಲಿ ತೇಲುತ್ತಿರುತ್ತವೆ.
ಸಾಮಾನ್ಯವಾಗಿ ಜೋರು ಗಾಳಿ ಮಳೆಯ ನಂತರ ನಮಗೆ ತೀರದಲ್ಲಿಯೇ ಮೀನು ಸಿಗುತ್ತದೆ. ಆದರೆ ಈ ಬಾರಿ ಹಾಗೆ ಆಗಿಲ್ಲ. ಇನ್ನೊಂದು ಮಳೆ ಬಿದ್ದರೆ ಮೀನುಗಳು ತೀರಕ್ಕೆ ಬರಬಹುದು ಎಂದು ಅಂದುಕೊಂಡಿದ್ದೇವೆ ಎಂದಿದ್ದಾರೆ ಮೀನುಗಾರರು.