
ಗದಗ: ದಂಪತಿಗಳು ತಮ್ಮ ಜೀವನದಲ್ಲಿ ಬರುವ ಕಷ್ಟ ಮತ್ತು ಸುಖದ ಕ್ಷಣಗಳಲ್ಲಿ ಒಟ್ಟಾಗಿ ಸಾಗಿದಾದ ಮಾತ್ರ ಕುಟುಂಬ, ಸಮಾಜ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಹುಣಸಘಟ್ಟಿ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ಬೆನಹಾಳ ಗ್ರಾಮದಲ್ಲಿ ಸೋಮವಾರ ಶ್ರೀರಾಮಲಿಂಗೇಶ್ವರ ಸೇವಾ ಸಮಿತಿ ವತಿಯಿಂದ ನಡೆದ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

j3tvkananda
ನವ ಜೀವನಕ್ಕೆ ಕಾಲಿಡುವ ಸತಿಪತಿಗಳು ಪರಸ್ಪರ ನಂಬಿಕೆ ವಿಶ್ವಾಸ ಹೊಂದಬೇಕು. ಗುರು ಹಿರಿಯರಲ್ಲಿ ವಾತ್ಸಲ್ಯದಿಂದ ವರ್ತಿಸಬೇಕು ಎಂದರು. ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ದೆ ಭಕ್ತಿಯಿಂದ ಭಾಗವಹಿಸಿ ಜೀವನದಲ್ಲಿ ಉತ್ತಮ ಸಂಸ್ಕಾರ ಹೊಂದಬೇಕು. ಸಮಾಜದಲ್ಲಿ ಪ್ರತಿಯೊಬ್ಬರು ಆದರ್ಶ ಜೀವನ ನಡೆಸಬೇಕು ಎಂದರು. ಶರಣಬಸವೇಶ್ವರ ಪುರಾಣ ಮುಕ್ತಾಯದ ಅಂಗವಾಗಿ ಗ್ರಾಮದ ಮಹಿಳೆಯರಿಂದ ಬೆಳಿಗ್ಗೆ ಪೂರ್ಣ ಕುಂಬದೊಂದಿಗೆ ಮೆರವಣಿಗೆ ನಡೆದ ನಂತರ ಸಾಮೂಹಿಕ ವಿವಾಹ ವಿವಾಹ ನೆರವೇರಿತು.
ಬಾದಾಮಿ ನವಗ್ರಹ ಹಿರೇಮಠದ ಶಿವಪೂಜ್ಯ ಶಿವಾಚಾರ್ಯರು, ಗುಳೇದಗುಡ್ಡ ಒಪ್ಪತೇಶ್ವರ ಮಠದ ಅಭಿನವ ಒಪ್ಪತೇಶ್ವರ ಸ್ವಾಮೀಜಿ, ಕೂತಬಾಳ ಅಂಕಲಗಿ ಮಠದ ಗಂಗಾಧರ ಸ್ವಾಮೀಜಿ, ಗಡಿಗೌಡಗಾವ್ ಗ್ರಾಮದ ಹಾವಗಿ ಲಿಂಗೇಶ್ವರ ಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಬೆನಹಾಳ ಹಾಗೂ ಹುನಗುಂಡಿ ಗ್ರಾಮದ ಹಿರಿಯರು ಮತ್ತು ಭಕ್ತರು ಇದ್ದರು.