
ಬೀದರ್: ನಾನು ಬರೆದ ಕೆ-ಸಿಇಟಿ ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ವಿಷಯಗಳ ಸರಾಸರಿ ಅಂಕಗಳನ್ನು ಆಧರಿಸಿ ಗಣಿತ ವಿಷಯಕ್ಕೆ ಅಂಕ ನೀಡಬೇಕು ಎಂದು ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಮನವಿ ಮಾಡಿದ್ದಾರೆ.

j3tvkannada
ಈ ಸಂಬಂಧ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಪತ್ರ ಬರೆದು ಕೋರಿದ್ದಾರೆ. ನಾನು, ನನ್ನ ಪೋಷಕರ ಜೊತೆಗೆ ಈ ವಿಚಾರವಾಗಿ ಸಮಾಲೋಚಿಸಿದ ನಂತರ ಈ ತೀರ್ಮಾನಕ್ಕೆ ಬಂದಿರುವೆ. ಸರ್ಕಾರ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಏ. 17ರಂದು ನಗರದ ಸಾಯಿಸ್ಪೂರ್ತಿ ಖಾಸಗಿ ಕಾಲೇಜಿನಲ್ಲಿ ಸಿಇಟಿ ಗಣಿತ ವಿಷಯದ ಪರೀಕ್ಷೆ ಬರೆಯಲು ತೆರಳಿದ್ದ ಸುಚಿವ್ರತ್ ಅವರಿಗೆ ಜನಿವಾರ ಧರಿಸಿದ ಕಾರಣಕ್ಕಾಗಿ ಅಲ್ಲಿನ ಸಿಬ್ಬಂದಿ ಪರೀಕ್ಷೆಗೆ ಅನುವು ಮಾಡಿಕೊಟ್ಟಿರಲಿಲ್ಲ. ಬಳಿಕ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾಲೇಜಿನ ಪ್ರಾಂಶುಪಾಲ ಹಾಗೂ ಅಲ್ಲಿನ ಸಿಬ್ಬಂದಿಯನ್ನು ವಜಾಗೊಳಿಸಿ ಕ್ರಮ ಕೈಗೊಂಡಿತು. ಬಳಿಕ ಉನ್ನತ ಶಿಕ್ಷಣ ಸಚಿವರು, ಸುಚಿವ್ರತ್ ಅವರಿಗೆ ಪತ್ರ ಬರೆದು, ಸಿಇಟಿ ಗಣಿತ ವಿಷಯದ ಪರೀಕ್ಷೆ ಪುನಃ ಬರೆಯಬಹುದು ಅಥವಾ ಈಗಾಗಲೇ ಬರೆದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಸರಾಸರಿ ಅಂಕಗಳನ್ನು ಆಧರಿಸಿ ಗಣಿತ ವಿಷಯಕ್ಕೆ ಅಂಕ ನೀಡಲಾಗುವುದು. ಈ ಕುರಿತು ನಿರ್ಧಾರ ತಿಳಿಸಿದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದರು. ಆದ ಕಾರಣ ಸುಚಿವ್ರತ್ ಸರ್ಕಾರಕ್ಕೆ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿದ್ದಾರೆ.