
ವಿಜಯಪುರ: ಪಟ್ಟಣ ಎಲ್ಲ ರಂಗದಲ್ಲೂ ಶರವೇಗದಲ್ಲಿ ಬೆಳೆಯುತ್ತಿದೆ. ಜನದಟ್ಟಣೆ ಅಧಿಕವಾಗುತ್ತಿದೆ. ಹೀಗಾಗಿ ಪಟ್ಟಣದಲ್ಲಿಯೂ ಅಪರಾಧ ಪ್ರಕರಣ, ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಿವೆ. ಪಟ್ಟಣದ ಸಾರ್ವಜನಿಕರನ್ನು, ವ್ಯಾಪಾರೋದ್ಯಮಿಗಳನ್ನು ನಿದ್ದೆ ಗೆಡಿಸಿವೆ. ಇವುಗಳ ನಿಯಂತ್ರಣಕ್ಕೆ ಪಟ್ಟಣದಲ್ಲಿ ಪೊಲೀಸ್ ಠಾಣೆ ಅಗತ್ಯವಾಗಿದೆ.

j3tvkannada
ನಾಲತವಾಡದವರೇ ಆದ ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅವರು ಪಟ್ಟಣದಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಆರಂಭಕ್ಕೆ ಆದ್ಯತೆ ನೀಡಲಿದ್ದಾರೆ ಎಂಬ ವಿಶ್ವಾಸ ಜನರಲ್ಲಿ ಮನೆ ಮಾಡಿದೆ.
ನಾಲತವಾಡ 2014ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆ ಹೊಂದಿದೆ. ಆದರೆ, ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ತಕ್ಕಂತೆ ಪೊಲೀಸ್ ವ್ಯವಸ್ಥೆ ಇಲ್ಲ.
ಪಟ್ಟಣಕ್ಕೆ ಪ್ರತ್ಯೇಕ ಹಾಗೂ ಗ್ರಾಮೀಣಕ್ಕೆ ಪ್ರತ್ಯೇಕ ಪೊಲೀಸ್ ಠಾಣೆಯ ಅಗತ್ಯತೆ ಬಹಳಷ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಿದ ಗ್ರಾಮಗಳಾದ ಬಿಜೂರ, ಸುಲ್ತಾನಪುರ, ಖಾನಾಪುರ, ಕಾನಿಕೇರಿ, ಅಯ್ಯನಗುಡಿ, ಚಿಕ್ಕ ಬಿಜೂರ, ಲೊಟಗೇರಿ, ಘಾಳಪೂಜಿ, ಟಕ್ಕಳಕಿ, ಇಂಗಳಗಿ, ಬಲದಿನ್ನಿ, ಕಾರಕೂರ, ರಕ್ಕಸಗಿ, ಬಂಗಾರಗುಂಡ, ವೀರೇಶನಗರ, ನಾಗಬೇನಾಳ ತಾಂಡಾ, ಆರೇಶಂಕರ, ನಾಗಬೇನಾಳ ಗ್ರಾಮಗಳಿಗೆ ಪಟ್ಟಣದಿಂದ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಪ್ರತ್ಯೇಕ ಗ್ರಾಮಗಳಾಗಿದ್ದರೂ ಪಟ್ಟಣದ ವ್ಯಾಪ್ತಿಯಲ್ಲಿವೆ. ಪಟ್ಟಣ ಬೆಳೆಯುತ್ತಿದೆ.

j3tvkannada
20ಕ್ಕೂ ಹೆಚ್ಚು ಬಡಾವಣೆಗಳು ತಲೆಯತ್ತಿ ನಿಂತಿವೆ. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಸುಮಾರು 35 ಶಿಕ್ಷಣ ಸಂಸ್ಥೆಗಳು, 30ಕ್ಕೂ ಅಧಿಕ ವಿವಿಧ ರೀತಿಯ ಸಂಘ, ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಕಬ್ಬಿನ ಬೆಳೆಯ ಸಲುವಾಗಿ, ಕಾಲುವೆ ನೀರಿಗಾಗಿ ಹಾಗೂ ಇನ್ನುಳಿದ ನಾನಾ ಕಾರಣ ಹೋರಾಟ, ಪ್ರತಿಭಟನೆ ನಡೆಯುತ್ತಲೆ ಇರುತ್ತವೆ. ಅದಕ್ಕಾಗಿ ಇಲ್ಲಿ ಪಿಎಸ್ಐ ಹಾಗೂ ಎಎಸ್ಐ ಒಳಗೊಂಡ ದೊಡ್ಡ ಪೊಲೀಸ್ ಠಾಣೆಯ ಅಗತ್ಯತೆ ಇದೆ. ಪಟ್ಟಣದಲ್ಲಿ ವಿಜಯಪುರ, ಯಾದಗಿರಿ ಹಾಗೂ ರಾಯಚೂರ ರಾಜ್ಯ ಹೆದ್ದಾರಿಗಳಿವೆ.
ಸಮೀಪದಲ್ಲೇ ಸಕ್ಕರೆ ಕಾರ್ಖಾನೆ, ಬೃಹತ್ ಎಣ್ಣೆ ಉದ್ಯಮಗಳು ಇರುವುದರಿಂದ ಜನರ, ಕಾರ್ಮಿಕ ವಾಹನ ಸಂಖ್ಯೆ ಅಧಿಕವಾಗುತ್ತ ನಡೆದಿದೆ. ಕಬ್ಬು ಕಟಾವು ಹಂಗಾಮಿನಲ್ಲಿ 5 ಸಾವಿರಕ್ಕೂ ಅಧಿಕ ಕೂಲಿ ಕಾರ್ಮಿಕರು, 500ಕ್ಕೂ ಅಧಿಕ ಕಬ್ಬು ತುಂಬುವ ಟ್ರ್ಯಾಕ್ಟರ್ ಮಹಾರಾಷ್ಟ್ರದಿಂದ ಬರುತ್ತದೆ. ಸಮೀಪದಲ್ಲೆ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಿವೆ. ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯವೂ ಹತ್ತಿರ ಇದೆ. 40 ಹಳ್ಳಿಗಳ ಹೋಬಳಿ ಕೇಂದ್ರವಾದ್ದರಿಂದ, ಹಬ್ಬ ಜಾತ್ರೆಗಳಿಗೆ, ಮದುವೆಯ ಜವಳಿ ಹಾಗೂ ಬಂಗಾರ ಖರೀದಿ ಜೋರಾಗಿರುತ್ತದೆ. ಇದರಿಂದ ಸಹಜವಾಗಿ ಸಂಚಾರ ದಟ್ಟಣೆ ಅಧಿಕವಾಗುತ್ತದೆ.