
ಬೆಂಗಳೂರು: ಸಿಗರೇಟ್, ಬೀಡಿ ತುಂಡು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್ಜಿಟಿ) 2015ರಲ್ಲಿಯೇ ಆದೇಶ ನೀಡಿತ್ತು. ಇದಾಗಿ ದಶಕದ ಬಳಿಕ ಈ ಆದೇಶ ಜಾರಿಗೊಳಿಸಲು ಬಿ.ಬಿ.ಎಂ.ಪಿ ಮುಂದಾಗಿದೆ.

j3tvkannada.in
ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮೂರು ವರ್ಷಗಳ ಹಿಂದೆ ಸಿಗರೇಟು, ಬೀಡಿ ತುಂಡುಗಳಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಗ್ಗಿಸಲು ಹೊರಡಿಸಿದ್ದ ಮಾರ್ಗಸೂಚಿಯಂತೆ ಬೀಡಿ ಸಿಗರೇಟು ತುಂಡುಗಳನ್ನು ಬಿಸಾಡುವವರ ವಿರುದ್ಧ ಇದೀಗ ಸಮರ ಸಾರಿದೆ.
ಈ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ಈಗಾಗಲೇ ಆದೇಶವನ್ನು ಹೊರಡಿಸಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಾಗಿರುವ ಬಿ.ಬಿ.ಎಂ.ಪಿ, ಆ ಕುರಿತು ಮಾರ್ಷಲ್ಗಳಿಗೆ ತರಬೇತಿಯನ್ನೂ ನೀಡಿ ಅವರನ್ನು ಕಾರ್ಯಾಚರಣೆಗಿಳಿಸಲು ಸಜ್ಜಾಗಿದೆ. ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಸಿಗರೇಟ್ ತುಂಡುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು 2020ರ ಅನ್ವಯ 500 ರೂ. ದಂಡ ವಿಧಿಸಲು ಮಾರ್ಷಲ್ಗಳಿಗೆ ಅಧಿಕಾರ ನೀಡಲಾಗಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯು ಕಳೆದ ಜ.17ರಂದು ಹೊರಡಿಸಿರುವ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿನ ದಿನಸಿ ಅಂಗಡಿ, ವಾಣಿಜ್ಯ ಸಂಕೀರ್ಣಗಳು, ಬಾರ್ ಮತ್ತು ರೆಸ್ಟೋರೆಂಟ್ಗಳು ಮತ್ತು ಇತರೆಡೆ ಧೂಮಪಾನ ಮಾಡಿ ಸಿಗರೇಟು, ಬೀಡಿ ತುಂಡುಗಳನ್ನು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ಅದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಹಾಗಾಗಿ ನಗರದ ಸ್ವಚ್ಛತೆ ಹಾಳಾಗುತ್ತಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯ ಅನ್ವಯ ವಿಲೇವಾರಿ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹೇಳಲಾಗಿದೆ.
ಸದ್ಯ ಬೀಡಿ, ಸಿಗರೇಟು ತುಂಡುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಬಿ.ಬಿ.ಎಂ.ಪಿ.ಯಲ್ಲಿ ಯಾವುದೇ ಪ್ರಮಾಣೀಕೃತ ಕಾರ್ಯ ವಿಧಾನವಿಲ್ಲ. ಬಹುತೇಕ ಎಲ್ಲಾ ಸಿಗರೇಟು, ಬೀಡಿ ತುಂಡುಗಳನ್ನು ಕಸದ ಜತೆಯೇ ಸೇರಿಸಲಾಗುತ್ತದೆ. ಸಣ್ಣ ಪುಟ್ಟ ಅಂಗಡಿಗಳ ಮುಂದೆ ಸಿಗರೇಟು, ಬೀಡಿ ಸೇದುವ ಜನರು ತುಂಡುಗಳನ್ನು ಅಲ್ಲೇ ತುಳಿದು ಬೆಂಕಿ ಆರಿಸಿ ಹೊರಟು ಹೋಗುತ್ತಾರೆ. ಆನಂತರ ಅಂಗಡಿ ಮಾಲೀಕರು ಅದನ್ನು ಗುಡಿಸಿ ಕಸದ ಜತೆ ಹಾಕುತ್ತಿದ್ದಾರೆ.
10 ವರ್ಷದ ಹಿಂದೆ ಬೆಂಗಳೂರು ನಗರದಲ್ಲಿಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ನಡೆಸಿದ ಸಮೀಕ್ಷೆಯಂತೆ ದಿನಕ್ಕೆ ಸುಮಾರು 31 ಲಕ್ಷ ಬೀಡಿ, ಸಿಗರೇಟು ತುಂಡುಗಳು ಸೃಷ್ಟಿಯಾಗುತ್ತಿದ್ದವು. ಇವು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತವೆ. ಹಾಗಾಗಿ ವೈಜ್ಞಾನಿಕ ರೀತಿಯಲ್ಲಿ ತುಂಡುಗಳ ವಿಲೇವಾರಿ ಜತೆಗೆ ದಂಡ ವಿಧಿಸಬೇಕೆಂದು ಸಮೀಕ್ಷೆಯಲ್ಲಿ ತಿಳಿಸಲಾಗಿತ್ತು. ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಆ ಪ್ರಮಾಣ ಕನಿಷ್ಠವೆಂದರೂ ದಿನಕ್ಕೆ 50 ಲಕ್ಷ ತುಂಡುಗಳನ್ನು ದಾಟಿದೆ. ಹಾಗಾಗಿ ಅವುಗಳನ್ನು ತಡೆಯುವ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಜರೂರಿದೆ” ಎನ್ನುತ್ತಾರೆ ತಂಬಾಕು ಮುಕ್ತ ಬೆಂಗಳೂರು ನಿರ್ಮಾಣ, ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಕಾರ್ಯಕರ್ತರು.