
ಚಿತ್ರದುರ್ಗ: ಬಸ್ಗಾಗಿ ಕಾಯುವ ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಹಾಗೂ ಕುಳಿತು ವಿಶ್ರಮಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣಗಳು ಜಿಲ್ಲೆಯಲ್ಲಿ ಸದ್ಬಳಕೆಯಾಗುತ್ತಿಲ್ಲ. ಕುಳಿತುಕೊಳ್ಳುವ ಆಸನಗಳು ಸರಿ ಇಲ್ಲ. ಸ್ವಚ್ಛತೆಯೂ ಇಲ್ಲದೇ ನಿರ್ವಹಣೆ ಕೊರತೆಯಿಂದ ತಂಗುದಾಣಗಳು ಸಂಪೂರ್ಣ ಹಾಳಾಗಿವೆ. ಗ್ರಾಮೀಣ ಪ್ರದೇಶ ಮಾತ್ರವಲ್ಲ ಜಿಲ್ಲಾ ಕೇಂದ್ರದಲ್ಲೇ ಪ್ರಯಾಣಿಕರ ತಂಗುದಾಣಗಳನ್ನು ಹುಡುಕುವಂತಾಗಿದೆ. ವಿವಿಧೆಡೆ ಇದ್ದೂ ಇಲ್ಲದಂತ ಶೋಚನೀಯ ಸ್ಥಿತಿ ತಲುಪಿವೆ. ಛಾವಣಿಯಂತಿದ್ದ ಸ್ಟೀಲ್ ಶೀಟ್ಗಳು ಹಾರಿ ಹೋಗಿವೆ. ಕೆಲವೆಡೆ ಹೋಟೆಲ್ಗಳಾಗಿ ಮಾರ್ಪಾಡಾಗಿವೆ. ಇದಕ್ಕೆ ಜಿಲ್ಲಾ ಪಂಚಾಯಿತಿ ಮುಂಭಾಗದ ಪ್ರಯಾಣಿಕರ ತಂಗುದಾಣ ಉತ್ತಮ ನಿದರ್ಶನವಾಗಿದೆ.

j3tvkannada
ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸೇರಿ ಹಲವು ರೀತಿಯ ಅನುದಾನದಲ್ಲಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಸೂಕ್ತ ಸ್ಥಳದ ಆಯ್ಕೆಯಲ್ಲೂ ಕೆಲವೆಡೆ ಹಿನ್ನಡೆಯಾಗಿದೆ. ಅಗತ್ಯವಿಲ್ಲದ ಕಡೆ ನಿರ್ಮಾಣ ಮಾಡಿರುವ ಕಾರಣ ತಂಗುದಾಣಗಳ ಸದುಪಯೋಗ ಆಗುತ್ತಿಲ್ಲ. ಚಿತ್ರದುರ್ಗದಲ್ಲಿ ನಗರ ಸಾರಿಗೆ ಆರಂಭಕ್ಕೂ ಮುನ್ನ ಜಿಲ್ಲಾ ಆಸ್ಪತ್ರೆ ಮುಂಭಾಗ, ತಿಪ್ಪಜ್ಜಿ ವೃತ್ತದಲ್ಲಿ ತಂಗುದಾಣಗಳಿದ್ದವು. ನಗರದಲ್ಲಿ ಮೊದಲ ಬಾರಿಗೆ ನಗರ ಸಾರಿಗೆ ಆರಂಭವಾದಾಗ ಮುಖ್ಯಮಂತ್ರಿಯ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದಡಿ 2009-10ನೇ ಸಾಲಿನಲ್ಲಿ ಹಾಗೂ ಬಿಆಜಿಎಫ್ 2007 – 08ನೇ ಸಾಲಿನ ಅನುದಾನದಡಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೆಡೆ ಬಸ್ ತಂಗುದಾಣಗಳನ್ನು ನಿರ್ಮಿಸಲಾಯಿತು.
ಕೆಲ ದಿನಗಳ ಬಳಿಕ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಬಹುತೇಕ ಕಡೆ ಸಮರ್ಪಕ ನಿರ್ವಹಣೆ ಇಲ್ಲದೆ ಹಾಳಾದವು. ಮಳೆಗಾಲದಲ್ಲಿ ಉಪಯೋಗಕ್ಕೆ ಬರದಂತಾಗಿವೆ. ಬೇಸಿಗೆಯಲ್ಲಿ ಪ್ರಯಾಣಿಕರ ಸ್ಥಿತಿ ಹೇಳ ತೀರದಾಗಿದೆ.
ಜಿಲ್ಲಾ ಆಸ್ಪತ್ರೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಚಳ್ಳಕೆರೆ ಗೇಟ್, ಜೆಸಿಆರ್ ಮುಖ್ಯ ರಸ್ತೆ ಸೇರಿದಂತೆ ವಿವಿಧೆಡೆ ಶಾಸಕರು, ಸಂಸದರು ಹಾಗೂ ವಿವಿಧ ಅಭಿವೃದ್ಧಿ ಯೋಜನೆಯಡಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ತಂಗುದಾಣಗಳನ್ನು ಸಿ.ಸಿ. ರಸ್ತೆ ಕಾಮಗಾರಿ ನೆಪದಲ್ಲಿ ತೆರವುಗೊಳಿಸಲಾಯಿತು. ಬಳಿಕ ಅದೇ ಸ್ಥಳದಲ್ಲಿ ನಿರ್ಮಿಸಿರುವ ತಂಗುದಾಣಗಳು ಪ್ರಯಾಣಿಕರಿಂದ ದೂರವಾಗಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿವೆ. ಜಿಲ್ಲಾ ಪಂಚಾಯಿತಿ ಮುಂಭಾಗ, ಐಯುಡಿಪಿ ಲೇಔಟ್ ರಸ್ತೆ, ಮೇದೆಹಳ್ಳಿ ರಸ್ತೆ, ತುರುವನೂರು ರಸ್ತೆಯಲ್ಲಿ ತಂಗುದಾಣಗಳು ಹೆಸರಿಗೆ ಮಾತ್ರ ಇವೆ.

j3tvkannada
ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಒಂದೇ ಒಂದು ಪ್ರಯಾಣಿಕರ ತಂಗುದಾಣ ಇಲ್ಲ. ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರವಾಗಿರುವ ಭರಮಸಾಗರದಲ್ಲಿ ನಿತ್ಯ ಸಾವಿರಾರು ಜನ ಪ್ರಯಾಣಿಕರು ಸಂಚರಿಸುತ್ತಾರೆ. ಹತ್ತಾರು ಗ್ರಾಮಗಳಿಂದ ಈ ಊರು ಆವೃತವಾಗಿದೆ. ಚಿತ್ರದುರ್ಗದಿಂದ ಬರುವ ಪ್ರಯಾಣಿಕರು ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಇಳಿದರೆ, ದಾವಣಗೆರೆ ಕಡೆಯಿಂದ ಬರುವವರು ಊರ ಮಧ್ಯದ ನಡು ರಸ್ತೆಯಲ್ಲಿಯೇ ಇಳಿಯುವುದು ಇಂದಿಗೂ ಪರಿಪಾಠ. ಯಾವ ಜನಪ್ರತಿನಿಧಿಯೂ ತಮ್ಮ ಅನುದಾನದಲ್ಲಿ ತಂಗುದಾಣ ನಿರ್ಮಿಸಿ ಪ್ರಯಾಣಿಕರ ಬವಣೆ ತಪ್ಪಿಸುವ ಕೆಲಸಕ್ಕೆ ಮುಂದಾಗಿಲ್ಲ.
ಹಿರೇಬೆನ್ನೂರು ಸರ್ಕಲ್ನಿಂದ ಚಿತ್ರದುರ್ಗ, ದಾವಣಗೆರೆ, ಸಿರಿಗೆರೆ ಕಡೆಗೆ ಪ್ರಯಾಣಿಸುವವರಿಗೆ ರಸ್ತೆಯೇ ತಂಗುದಾಣವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಬಿಸಿಲು, ಮಳೆಯಲ್ಲಿ ನಿಂತು ಬಸ್ಸುಗಳಿಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಆದಾಗ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಬಹುದೆಂಬ ಆಸೆ ಚಿಗುರೊಡೆದಿತ್ತು. ಆದರೆ, ಅದು ಹಾಗೆಯೇ ಕಮರಿ ಹೋಯಿತು. ಹೆದ್ದಾರಿ ವಿಸ್ತರಣೆ ವೇಳೆ ವಿಜಾಪುರ, ಲಕ್ಷ್ಮೀಸಾಗರ ಗ್ರಾಮಗಳ ಬಳಿ ಇದ್ದ ತಂಗುದಾಣಗಳು ನೆಲಸಮವಾದವು. ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ತಂಗುದಾಣಗಳ ಅಗತ್ಯವಿದೆ. ಕೂಡಲೇ ಸಚಿವರು, ಶಾಸಕರು ಈ ಬಗ್ಗೆ ಕ್ರಮವಹಿಸಬೇಕಿದೆ.