
ಹುಬ್ಬಳ್ಳಿ: ರಾಜ್ಯದಲ್ಲಿ ವಂದೇ ಭಾರತ್ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದಕ್ಕೆ ಪೂರಕವಾಗಿ ವಂದೇ ಭಾರತ್ ರೈಲುಗಳ ಸಂಚಾರ ಕೂಡ ಹೆಚ್ಚಾಗಿದೆ. ಈ ರೈಲುಗಳ ವಿಶೇಷ ನಿರ್ವಹಣೆಗಾಗಿ ರಾಜ್ಯದ 3 ಕಡೆ ಡಿಪೊ ನಿರ್ಮಿಸಲು ನೈರುತ್ಯ ರೈಲ್ವೆ ಉದ್ದೇಶಿಸಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ, ಥಣಿಸಂದ್ರ ಹಾಗೂ ಹುಬ್ಬಳ್ಳಿ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ.

j3tvkannada
ಪ್ರಸ್ತುತ ಈಗ ಎಲ್ಲ ರೈಲುಗಳ ಜೊತೆ ಜೊತೆಗೆ ವಂದೇ ಭಾರತ್ ರೈಲುಗಳ ನಿರ್ವಹಣೆ ಮಾಡಲಾಗುತ್ತಿದೆ. ಹಾಗಾಗಿ, ಸ್ಥಳಾವಕಾಶ ಸಾಕಾಗುತ್ತಿಲ್ಲ. ವಂದೇ ಭಾರತ್ ರೈಲುಗಳ ವಿನ್ಯಾಸ ಅತ್ಯಾಧುನಿಕ ಮಾದರಿಯಲ್ಲಿದೆ ಹಾಗೂ ಇತರ ರೈಲುಗಳಿಗಿಂತ ಭಿನ್ನವಾಗಿರುವುದರಿಂದ ಪ್ರತ್ಯೇಕ ಡಿಪೊ ಅವಶ್ಯಕತೆ ಇದೆ ಎಂಬುದನ್ನು ಅರಿತ ರೈಲ್ವೆ ಮಂಡಳಿ, ಹೊಸ ಡಿಪೊ ಸ್ಥಾಪಿಸಲು ಅನುಮೋದನೆ ನೀಡಿದೆ. ಇದಕ್ಕಾಗಿ ಒಟ್ಟು ₹619.55 ಕೋಟಿ ವೆಚ್ಚ ಮಾಡಲಿದೆ. ಎಂ.ಎಸ್.ವಿ.ಬಿ-ಬೈಯಪ್ಪನಹಳ್ಳಿ ಡಿಪೊಗಾಗಿ ₹ 49.60 ಕೋಟಿ, ಹುಬ್ಬಳ್ಳಿಯ ಡಿಪೊಗಾಗಿ ₹ 299.80 ಕೋಟಿ ಹಾಗೂ ಥಣಿಸಂದ್ರ ಡಿಪೊಗಾಗಿ ₹ 270.15 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಟೆಂಡರ್ ಹಂತದಲ್ಲಿದ್ದು, ಸದ್ಯದಲ್ಲಿಯೇ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. 2027ರ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಎಂ.ಎಸ್.ವಿ.ಬಿ-ಬೈಯಪ್ಪನಹಳ್ಳಿ ಡಿಪೊದಲ್ಲಿ ಪಿಟ್ ಲೈನ್ಗಳ ನಿರ್ಮಾಣ ಹಾಗೂ ಮೆಮೊ ಶೆಡ್ ವಿಸ್ತರಣೆ ಮಾಡಲಾಗುವುದು. ಹುಬ್ಬಳ್ಳಿ ಡಿಪೊದಲ್ಲಿ 3 ಬೇರೆ ಲೈನ್ಗಳ ನಿರ್ಮಾಣ, ವಾಶಿಂಗ್ ಲೈನ್ ಹಾಗೂ ಭಾರಿ ರಿಪೇರಿ ಶೆಡ್ ನಿರ್ಮಾಣ ನಡೆಯಲಿದೆ. ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಪ್ರತ್ಯೇಕ ಡಿಪೊ ಬೇಕು. ಬೆಂಗಳೂರಿನಲ್ಲಿ ಈಗಾಗಲೇ ಹಲವು ರೈಲುಗಳ ದುರಸ್ತಿ ನಡೆದಿದೆ. ಈ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮೂರು ಕಡೆ ಪ್ರತ್ಯೇಕ ಡಿಪೊ ನಿರ್ಮಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಹೇಳಿದರು.