
ಕಲಬುರಗಿ: ತರಕಾರಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಿರ್ಮಾಣ ಮಾಡುತ್ತಿರುವ ತರಕಾರಿ ಮಾರುಕಟ್ಟೆ ಸಂಕೀರ್ಣ ಕಟ್ಟಡ ಕಾಮಗಾರಿ ಆರಂಭವಾಗಿ ಮೂರು ವರ್ಷ 8 ತಿಂಗಳು ಕಳೆದರೂ ಆಮೆಗತಿಯಲ್ಲಿ ಸಾಗುತ್ತಿದೆ.

j3tvkannada
ನಗರದ ಎಂಎಸ್ಕೆ ಮಿಲ್ ರಸ್ತೆಯಲ್ಲಿ ಕೆಕೆಆರ್ಡಿಬಿಯಿಂದ 20ಕೋಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ 6.30 ಕೋಟಿ ಸೇರಿ ಒಟ್ಟು ₹26 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದರು. ಅರ್ಧದಷ್ಟು ಕಾಮಗಾರಿ ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಅನುದಾನದ ಕೊರತೆಯಿಂದ ಕೆಲ ತಿಂಗಳ ಕಾಲ ಸ್ಥಗಿತವಾಗಿತ್ತು. ಸರ್ಕಾರ ಬಂದು ಅರು ತಿಂಗಳ ಬಳಿಕ ಕಾಮಗಾರಿ ಆರಂಭವಾದರೂ ಪೂರ್ಣಮಾತ್ರ ಆಗುತ್ತಿಲ್ಲ ಎಂಬುದು ಅಲ್ಲಿನ ವ್ಯಾಪಾರಿಗಳ ಆರೋಪ.
ಕಣ್ಣಿ ತರಕಾರಿ ಮಾರುಕಟ್ಟೆಯಲ್ಲಿ ಸುಮಾರು 360ಕ್ಕೂ ಹೆಚ್ಚು ನೋಂದಾಯಿತ ತರಕಾರಿ ಮಾರಾಟಗಾರರಿದ್ದು, ಮಾರಾಟ ಮಾಡುವ ಸ್ಥಳದಲ್ಲಿ ದಿನ ನಿತ್ಯವೂ ದೂಳಿನ ಮಜ್ಜನ, ಪಕ್ಕದಲ್ಲಿಯೇ ಚರಂಡಿ ನೀರು ಹರಿಯುತ್ತದೆ. ಸಂತೆಯಲ್ಲಿ ಹಂದಿಗಳು ಸಂಚರಿಸುತ್ತಿವೆ.
ಕಸ, ಕೊಳಚೆ ಜಾಗದಲ್ಲಿಯೇ ಕುಳಿತು ವ್ಯಾಪಾರ ಮಾಡುವುದು ತರಕಾರಿ ವ್ಯಾಪಾರಿಗಳ ಗೋಳಾದರೆ, ಮಾರುಕಟ್ಟೆಗೆ ಬರುವ ಜನರು ಮೂಗಿಗೆ ಕರವಸ್ತ್ರ ಹಿಡಿದುಕೊಂಡೇ ಸಂಚರಿಸಬೇಕಿದೆ. ಕಾಮಗಾರಿ ಆರಂಭ ಮಾಡಿದ ವರ್ಷದಲ್ಲಿಯೇ ಅಂಗಡಿಗಳನ್ನು ವ್ಯಾಪಾರಿಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ವರ್ಷಗಳೇ ಕಳೆದರೂ ವ್ಯಾಪಾರಿಗಳ ಕನಸು ಮಾತ್ರ ಸಾಕಾರಗೊಂಡಿಲ್ಲ.