
ಕೊಪ್ಪಳ(ಕುಷ್ಟಗಿ): ‘ಪುರಸಭೆ ವ್ಯಾಪ್ತಿಯ ಕಾಮಗಾರಿಯನ್ನು ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ ನಿರ್ವಹಿಸುತ್ತಿದೆ. ಆದರೆ ಸಂಬಂಧಿಸಿದ ಇಲಾಖೆ ಹಾಗೂ ಸಂಸ್ಥೆಯ ನಡುವಿನ ಸಮನ್ವಯದ ಕೊರತೆಯಿಂದಾಗಿ ಕಾಮಗಾರಿಯು ಬೇಕಾಬಿಟ್ಟಿಯಾಗಿ ನಡೆಯುತ್ತಿದೆ.

j3tvkannada
ಪ್ರಮುಖವಾಗಿ ಡಾಂಬರು, ಕಾಂಕ್ರೀಟ್ ರಸ್ತೆಗಳು ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಇಂಥ ಕಾಮಗಾರಿ ನಡೆಸಬೇಕಾದರೆ ಎಲ್ಲಿ ಕಾಮಗಾರಿಯ ಅವಶ್ಯಕತೆಯ ಅಗತ್ಯವಿದೆ, ಯಾವ ರೀತಿ ಕೆಲಸ ಕೈಗೆತ್ತಿಕೊಳ್ಳುವುದು ಸರಿ ಮತ್ತು ನಿರ್ವಹಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಯಾರೂ ಯೋಚಿಸಿದಂತಿಲ್ಲ. ಜನರಿಗೆ ಬೇಕೋ? ಬೇಡವೋ? ಎಂಬುದರ ಬಗ್ಗೆ ಯೋಚಿಸುವುದಿಲ್ಲ. ಒಟ್ಟಾರೆ ಸರ್ಕಾರದ ಅನುದಾನ ಮಾತ್ರ ಖರ್ಚಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದಾರೆ.
ಪುರಸಭೆಗೆ ಸೇರಿದ ಡಾ.ರಾಜಕುಮಾರ ಕಲ್ಯಾಣ ಮಂಟಪದ ರಸ್ತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ.
ಕೆ.ಕೆ.ಆರ್.ಡಿ.ಬಿ.ಯ 2023-24ನೇ ವರ್ಷದ ಒಟ್ಟು ₹ 6 ಕೋಟಿ ಮೊತ್ತದ ಕಾಮಗಾರಿ ಅನುದಾನದಲ್ಲಿ, ರಸ್ತೆಯನ್ನು 40 ಅಡಿ ಅಗಲದಷ್ಟು ಅಭಿವೃದ್ಧಿ ಪಡಿಸಬೇಕು. ಆದರೆ ಕೇವಲ 15 ಅಡಿ ಅಗಲದಷ್ಟು ಮಾತ್ರ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರಾದ ಶಿವಶಂಕರ, ಬಸವರಾಜ ಪಾಟೀಲ ಮತ್ತಿತರರು ದೂರಿದರು.
ಪುರಸಭೆಯ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಣೆಗೆ ಅಧಿಕಾರಿಗಳು, ಸಂಬಂಧಿಸಿದವರನ್ನು ಸಂಪರ್ಕಿಸಿ, ಸಮರ್ಪಕವಾದ ಮಾಹಿತಿಯನ್ನು ಪಡೆದು ಕಾಮಗಾರಿ ಆರಂಭಿಸಬೇಕು.
ಆದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಸೌಜನ್ಯಕ್ಕಾದರೂ ಮಾಹಿತಿ ಪಡೆಯಲು ಯತ್ನಿಸಿಲ್ಲ. ಮನ ಬಂದಂತೆ ಅಂದಾಜು ಪಟ್ಟಿ ಸಿದ್ದಪಡಿಸಿ, ಬೇನಾಮಿ ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸಲಾಗುತ್ತದೆ ಎಂಬ ಆರೋಪಗಳು ಕೇಳಿವೆ. ಈ ಕುರಿತು ವಿವರಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಧಾಕರ ಕಾತರಕಿ, ತಾವು ಕೆಲ ತಿಂಗಳ ಹಿಂದಷ್ಟೇ ಇಲ್ಲಿಯ ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಹೇಳಿದರು. ಹಾಗಾದರೆ ಕಾಮಗಾರಿ ಸ್ಥಳ ಪರಿಶೀಲಿಸಲು ಆಗುವುದಿಲ್ಲವೆ? ಎಂದಾಗ ಬಂಗಾರದ ರಸ್ತೆ ಮಾಡಿದರೂ ಇಲ್ಲಿಯ ಜನ ಆರೋಪಿಸುತ್ತಲೇ ಇರುತ್ತಾರೆ ಎಂದು ಅಸಡ್ಡೆಯ ಉತ್ತರ ನೀಡಿದರು.
ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ ಅವರು, ‘ಡಾ.ರಾಜಕುಮಾರ ಕಲ್ಯಾಣ ಮಂಟಪದ ಮುಂದಿನ ರಸ್ತೆ ಕೆಲಸದ ಬಗ್ಗೆ ಲೋಕೋಪಯೋಗಿ ಇಲಾಖೆ ಸಂಪರ್ಕಿಸಿಲ್ಲ’ ಎಂದರು.
ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರರು ಸ್ಥಳಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಮೂಲ ಗುತ್ತಿಗೆದಾರರ ಹೆಸರಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತೋಚಿದಂತೆ ಕಾಮಗಾರಿ ಮಾಡುತ್ತಿದ್ದರೂ ಪ್ರಶ್ನಿಸುತ್ತಿಲ್ಲ. ಸಾರ್ವಜನಿಕರು ಪ್ರಶ್ನಿಸಬಾರದೆಂದೇ ರಾಜಕೀಯ ನಾಯಕರು, ತಮ್ಮ ನಿರ್ದಿಷ್ಟ ಹಿಂಬಾಲಕರಿಗೆ ಕಾಮಗಾರಿ ಉಸ್ತುವಾರಿ ವಹಿಸಿದ್ದಾರೆ ಎಂದು ಸಾರ್ವಜನಿಕರೊಬ್ಬರು ಆರೋಪಿಸಿದರು.
ಪಟ್ಟಣದ ಬಹುತೇಕ ರಸ್ತೆಗಳ ಅಕ್ಕಪಕ್ಕದಲ್ಲಿರುವವರು ರಸ್ತೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಒತ್ತುವರಿ ತೆರವುಗೊಳಿಸದೆ ಇದ್ದಷ್ಟೇ ಜಾಗದಲ್ಲಿ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. 2ನೇ ವಾರ್ಡ್ನಲ್ಲಿ ಗ್ರಾಮೀಣ ಬ್ಯಾಂಕ್ ಬಳಿ ಪ್ರಭಾವಿಗಳು ಆರ್ಥಿಕ ಬಲಾಡ್ಯರು ರಸ್ತೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಆದರೆ ಪುರಸಭೆ ತೆರವಿಗೆ ಮುಂದಾಗಿಲ್ಲ. ಸದಸ್ಯರೂ ಕೂಡ ಚಕಾರವೆತ್ತಿಲ್ಲ. ಅದೇ ಸಾಮಾನ್ಯರು ಅಲ್ಪ ಸ್ವಲ್ಪ ಜಾಗ ಒತ್ತುವರಿ ಮಾಡಿಕೊಂಡಿದ್ದನ್ನು ಮುಲಾಜಿಲ್ಲದೆ ಜೆ.ಸಿ.ಬಿ.ಯಿಂದ ಒಡೆದು ಹಾಕುವ ಪುರಸಭೆಯವರು ಪ್ರಭಾವಿಗಳ ತಂಟೆಗೆ ಏಕೆ ಹೋಗುತ್ತಿಲ್ಲ? ಎಂದು ಅಲ್ಲಿಯ ನಿವಾಸಿಗಳು ಪ್ರಶ್ನಿಸಿದರು.