
ಉಡುಪಿ: ನಗರದ ದೊಡ್ಡ ಕೆರೆಗಳ ಹೂಳೆತ್ತುವ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ಬ್ರಹ್ಮಗಿರಿಯ ನಾಯರ್ ಕೆರೆಯ ಹೂಳೆತ್ತುವ ಕಾಮಗಾರಿ ಈಚೆಗೆ ನಡೆದಿದೆ. ಜೊತೆಗೆ ಪರ್ಕಳದ ಕೆರೆ, ಕೊಡವೂರಿನ ಸಿರಿ ಕೆರೆ, ಕಿನ್ನಿಮುಲ್ಕಿಯ ಕೆರೆಗಳನ್ನು ಹೂಳೆತ್ತಿ ಸ್ವಚ್ಛಗೊಳಿಸುವ ಕೆಲಸವೂ ನಡೆದಿದೆ.

j3tvkannada
ಕೆರೆಗಳ ಹೂಳೆತ್ತಿದರೆ ಅವುಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗಿ, ಆಸುಪಾಸಿನ ಬಾವಿಗಳ ಅಂತರ್ಜಲ ಮಟ್ಟವೂ ಏರಿಕೆಯಾಗಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ನಗರ ವ್ಯಾಪ್ತಿಯಲ್ಲಿ ಬಾವಿ ನೀರನ್ನೇ ಆಶ್ರಯಿಸಿರುವ ಸಾಕಷ್ಟು ಮನೆಗಳಿವೆ. ಅಂತರ್ಜಲ ವೃದ್ಧಿಯಾದರೆ ಬಾವಿಗಳಲ್ಲೂ ನೀರಿನ ಮಟ್ಟ ಏರಿಕೆಯಾಗಿ ಅವರಿಗೆ ಅನುಕೂಲವಾಗಲಿದೆ.
ನಾಯರ್ಕೆರೆಯು ಸುಮಾರು 82 ಅಡಿ ಅಗಲ ಹಾಗೂ ಅಷ್ಟೇ ಉದ್ದವಿದೆ. ಸುಮಾರು 20 ಅಡಿ ಆಳವಿದೆ. ಮಳೆಗಾಲದಲ್ಲಿ ಭರ್ತಿಯಾಗುವ ಈ ಕೆರೆ ಬಿರು ಬೇಸಿಗೆಯಲ್ಲೂ ಬತ್ತುವುದಿಲ್ಲ. ಹಿಂದೆ ಸಮೀಪ ಪ್ರದೇಶದ ಜನರಿಗೆ ಇದು ನೀರಿನಾಶ್ರಯವಾಗಿತ್ತು ಎನ್ನುತ್ತಾರೆ ಹಿರಿಯರು.
ಸೂಕ್ತ ನಿರ್ವಹಣೆ ಕೊರತೆಯಿಂದ ನಾಯರ್ಕೆರೆ ಅವನತಿಯ ಅಂಚಿಗೆ ತಲುಪಿತ್ತು. 2014ರಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಕೆರೆಯ ಸುತ್ತಲೂ ಆವರಣಗೋಡೆ ನಿರ್ಮಿಸಿ, ಅದರ ಸಮೀಪ ಜನರಿಗೆ ಕುಳಿತುಕೊಳ್ಳಲು ಆಸನಗಳನ್ನು ನಿರ್ಮಿಸಲಾಗಿತ್ತು. ನಗರದ ಬಹುತೇಕ ಕೆರೆಗಳಲ್ಲಿ ಫೆಬ್ರುವರಿ, ಮಾರ್ಚ್ ತಿಂಗಳವರೆಗೂ ಸಾಕಷ್ಟು ನೀರಿನ ಪ್ರಮಾಣ ಇರುತ್ತದೆ. ಆದರೆ ಏಪ್ರಿಲ್, ಮೇ ತಿಂಗಳಾಗುವಾಗ ನೀರಿನ ಮಟ್ಟ ತೀರಾ ಇಳಿಕೆಯಾಗಿ ನೀರಿನ ಬಣ್ಣವೂ ಮಾಸಿ, ಪಾಚಿಗಟ್ಟುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಕೆಲವು ಕೆರೆಗಳ ಸಮೀಪ ಜನರು ಪ್ಲಾಸ್ಟಿಕ್ ಸೇರಿದಂತೆ ಕಸ ಎಸೆಯುತ್ತಾರೆ. ಅವುಗಳು ಕೆರೆಗಳ ಒಡಲು ಸೇರಿ ನೀರು ಕಲುಷಿತಗೊಳ್ಳುತ್ತದೆ. ಸಂಬಂಧಪಟ್ಟವರು ಇದಕ್ಕೂ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸುತ್ತಾರೆ. ನಗರಕ್ಕೆ ನೀರುಣಿಸುವ ಬಜೆ ಜಲಾಶಯದಲ್ಲೂ ಈ ಬಾರಿ ಸಾಕಷ್ಟು ನೀರಿನ ಸಂಗ್ರಹವಿದೆ. ಜೊತೆಗೆ ಪ್ರತಿದಿನ 25 ಎಂ.ಎಲ್.ಡಿ ವಾರಾಹಿಯ ನೀರೂ ಬರುತ್ತಿರುವುದರಿಂದ ಯಾವ ಕಾರಣಕ್ಕೂ ನೀರಿನ ಸಮಸ್ಯೆ ಕಾಡದು. ಒಂದು ವೇಳೆ ಸಮಸ್ಯೆ ಕಾಡಿದರೂ ಅದನ್ನು ಎದುರಿಸಲು ಬಾವಿ ಹಾಗೂ ಕೊಳವೆ ಬಾವಿಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಅದರ ಅಂಗವಾಗಿ ಕೆರೆಗಳ ಹೂಳೆತ್ತುವ ಕೆಲಸವೂ ನಡೆದಿದೆ ಎನ್ನುತ್ತವೆ ನಗರಸಭೆ ಮೂಲಗಳು.
ಇನ್ನಷ್ಟು ಕೆರೆಗಳ ಹೂಳೆತ್ತಲಾಗುವುದು:- ಅಂತರ್ಜಲ ವೃದ್ಧಿಗಾಗಿ ಕೆರೆಗಳ ಹೂಳೆತ್ತಲಾಗುತ್ತಿದೆ. ಸದ್ಯ ದೊಡ್ಡ ಕೆರೆಗಳನ್ನಷ್ಟೇ ಆಯ್ಕೆ ಮಾಡಿ ಅವುಗಳ ಹೂಳೆತ್ತುವ ಕಾರ್ಯ ಮಾಡಿದ್ದೇವೆ.ಮುಂದೆ ನಗರಸಭೆ ವ್ಯಾಪ್ತಿಯ ಇತರ ಕೆರೆಗಳನ್ನೂ ಕೆರೆ ಪುನಶ್ಚೇತನ ಯೋಜನೆಯ ಅಡಿಯಲ್ಲಿಅಭಿವೃದ್ಧಿಗೊಳಿಸಲಾಗುವು ದು . ಪ್ರತಿವರ್ಷ ಬೇಸಿಗೆಯಲ್ಲಿ ನಗರ ವ್ಯಾಪ್ತಿಯ ಕೆರೆಗಳ ಹೂಳೆತ್ತುವ ಕಾರ್ಯ ನಡೆಯುತ್ತದೆ. ಈ ಬಾರಿ ನಾಲ್ಕು ಕೆರೆಗಳ ಹೂಳೆತ್ತುವ ಕಾಮಗಾರಿ ನಡೆದಿದೆ. ಹೂಳು ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಂಡರೆ ಮಳೆ ಬಂದಾಗ ಕೆರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತದೆ ಎಂದು ನಗರಸಭೆಯ ಹೆಚ್ಚುವರಿ ಪ್ರಭಾರ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ತಿಳಿಸಿದರು.