
ಬಳ್ಳಾರಿ(ಎಮ್ಮಿಗನೂರು) : ಯಾವುದೇ ಬೆಳೆಯಾದರೂ ಆಗಾಗ ದರ ಕುಸಿತ, ದರ ಏರಿಕೆ ಇದೆಲ್ಲಾ ಮಾಮೂಲಿಯಾಗಿದ್ದರೂ ದರ ಕುಸಿತ ಆದಾಗ ಮಾತ್ರ ರೈತರು ಕಂಗಾಲಾಗುತ್ತಾರೆ. ಇದೀಗ ತುಂಗಭದ್ರಾ ಎಲ್.ಎಲ್.ಸಿ ಬಲದಂಡೆ ಅಚ್ಚುಕಟ್ಟು ಹಾಗೂ ನದಿ ತೀರದಲ್ಲಿ ಪ್ರಸಕ್ತ ಹಿಂಗಾರು ಹಂಗಾಮು ಬೇಸಿಗೆಗೆ ನಾಟಿ ಮಾಡಿದ ಭತ್ತದ ಕಟಾವು ಭರದಿಂದ ಸಾಗಿದ್ದು, ಇಳುವರಿ ಉತ್ತಮವಾಗಿದ್ದರೂ ಬೆಲೆ ಕುಸಿತ ರೈತರನ್ನು ಕಾಡುತ್ತಿದ್ದರೆ, ಇನ್ನೊಂದೆಡೆ ಅನಿರೀಕ್ಷಿತ ಮಳೆಯಿಂದಾಗಿ ಬೆಳೆ ನಷ್ಟವಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ.

j3tvkannada
ನದಿ ತೀರದಲ್ಲಿ 13,656 ಹೆಕ್ಟೇರ್ ಪ್ರದೇಶದಲ್ಲಿ ಗಂಗಾ ಕಾವೇರಿ, ಆರ್.ಎನ್.ಆರ್ ತಳಿಯ ಭತ್ತವನ್ನು ರೈತರು ಬೆಳೆದಿದ್ದಾರೆ. ಮಣ್ಣೂರು, ಸೂಗೂರು, ಎಮ್ಮಿಗನೂರು, ಚಿಟಿಗಿನಹಾಳ್, ಗುತ್ತಿಗನೂರು, ಸೋಮಲಾಪುರ, ಗೆಣಿಕೆಹಾಳ್, ಹಾವಿನಹಾಳ್ ಸೇರಿದಂತೆ ನದಿ ತೀರದಲ್ಲೇ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕಟಾವು ಭರದಿಂದ ಸಾಗಿದೆ.
ಸರಕಾರ ಕ್ವಿಂಟಾಲ್ ತೂಕದಲ್ಲಿ ಭತ್ತದ ದರ ನಿಗದಿ ಮಾಡಿದ್ದರೆ, ಮಾರುಕಟ್ಟೆಯಲ್ಲಿ 75 ಕೆಜಿ ಭತ್ತದ ಚೀಲಕ್ಕೆ ಬೆಲೆ ನಿಗದಿಪಡಿಸಿರುತ್ತಾರೆ. 75 ಕೆಜಿಯಂತೆ ಪರಿಗಣಿಸಿದರೆ 1 ಎಕರೆಗೆ 40 ರಿಂದ 50 ಚೀಲ ಭತ್ತದ ಇಳುವರಿ ಬರುತ್ತಿದೆ. ಗಂಗಾಕಾವೇರಿ ತಳಿಯ 1 ಚೀಲ ಭತ್ತಕ್ಕೆ (75 .ಕೆಜಿ) 1350 ರೂ, ಆರ್.ಎನ್.ಆರ್ ಭತ್ತಕ್ಕೆ 1420 ರೂ ಬೆಲೆಯಿದೆ. ಈ ಸಲ ರೈತರಿಗೆ ಉತ್ತಮ ಇಳುವರಿಯಾದ ಸಂತಸ ಒಂದೆಡೆಯಾದರೆ ದರ ಕುಸಿತದ ಆತಂಕ ಮತ್ತೊಂದೆಡೆಯಾಗಿದೆ.
ಭತ್ತದ ಕಟಾವಿಗೆ ಯಂತ್ರದ ಬಾಡಿಗೆ ಒಂದು ಗಂಟೆಗೆ 2500 ರಿಂದ 2600 ರೂ. ಇದ್ದು ಇದು ರೈತರಿಗೆ ಹೊರೆಯಾಗಿದೆ. ಜೊತೆಗೆ ಜಮೀನು ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡುವ ರೈತರು ಜಮೀನಿನ ಮಾಲೀಕರಿಗೆ ಎಕರೆಗೆ 15 ರಿಂದ 18 ಚೀಲ ಭತ್ತ ನೀಡಬೇಕಿದೆ. ಈಗಾಗಲೇ ಬೆಳೆಗಾಗಿ ಸಾಕಷ್ಟು ವ್ಯಯಿಸಲಾಗಿದೆ. ಇದೀಗ ದರ ಕುಸಿತ ರೈತರನ್ನು ನಷ್ಟದೆಡೆಗೆ ದೂಡಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಕಟಾವು ನಡೆಯಬೇಕಿದೆ. ಆದರೆ ಮಳೆಯ ಕಾಟ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಶಾಶ್ವತ ಭತ್ತ ಖರೀದಿ ಕೇಂದ್ರ ಆರಂಭಿಸಿದರೆ ಬೆಲೆ ನಿಯಂತ್ರಣದಲ್ಲಿರಲಿದೆ ಎನ್ನುತ್ತಾರೆ ರೈತರು. ಸಮಗ್ರ ಕೃಷಿ ಪದ್ದತಿ ಅನುಸರಿಸಬೇಕು. ಕೃಷಿಯೊಂದಿಗೆ ಮಿಶ್ರ ಬೇಸಾಯ ಪದ್ದತಿ ಅನುಸರಿಸುವುದರ ಜೊತೆಗೆ ಕೋಳಿ ಸಾಕಣೆ, ಕುರಿ, ಮೊಲ ಸಾಕಾಣಿಕೆ ಅಳವಡಿಸಿಕೊಂಡರೆ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದಾಗಿ ಎನ್ನುತ್ತಾರೆ, ಕೆ.ಸೋಮಶೇಖರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಕಂಪ್ಲಿ.
ಈ ಸಲ ಇಳುವರಿ ಉತ್ತಮವಾಗಿದ್ದರೂ, ಬೆಲೆ ಸಿಗುತ್ತಿಲ್ಲ. 1 ಎಕರೆ ಪ್ರದೇಶಕ್ಕೆ 30-35 ಸಾವಿರ ವೆಚ್ಚ ಮಾಡಿದ್ದು, ರೈತನಿಗೆ ಸಂತೋಷ, ನೆಮ್ಮದಿಯಿಲ್ಲದಂತಾಗಿದೆ ಎನ್ನುತ್ತಾರೆ, ಜಡೆಪ್ಪ, ದೊಡ್ಡ ಬಸಪ್ಪ, ಭೀಮಪ್ಪ ಚಿಟಿಗಿನಹಾಳ್, ಜಮೀರ್ ಸಾಬು, ಎಮ್ಮಿಗನೂರು ರೈತರು.