
ಚಿಕ್ಕಮಗಳೂರು : ರಜೆ ನೀಡಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರು ಇಲ್ಲಿನ ಬಸ್ ಡಿಪೊದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಚಾಲಕ ಎಂ.ವಿ. ಮಧು ಆತ್ಮಹತ್ಯೆಗೆ ಯತ್ನಿಸಿದ್ದು, ಕಡೂರು ಡಿಪೊ ಎಟಿಎಸ್ ಕಿರುಕುಳ ನೀಡಿರುವುದಾಗಿ ಆಪಾದಿಸಿದ್ದಾರೆ. ಮಧು ಅವರು ಒಂದು ವಾರ ರಜೆ ಹಾಕದೆ, ವಾರದ ರಜೆಯಲ್ಲೂ ಕೆಲಸ ಮಾಡಿದ್ದರು. ಅವರ ಮಗುವಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಬೇಕಿತ್ತು. ವಾರದ ರಜೆ ದಿನ ಕೆಲಸ ಮಾಡಿದ್ದರಿಂದ ರಜೆ ನೀಡಿ ಎಂದು ಎ.ಟಿ.ಎಸ್ ಅವರಲ್ಲಿ ಮನವಿ ಮಾಡಿದ್ದರು. ಅವರು ರಜೆ ನೀಡದೆ ಗೈರು ಎಂದು ನಮೂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

j3tvkannada
ಎಷ್ಟು ಮನವಿ ಮಾಡಿದರೂ ಸ್ಪಂದಿಸದೆ ಇದ್ದುದರಿಂದ ಮನನೊಂದ ಮಧು ಅಧಿಕಾರಿಗಳ ವರ್ತನೆ ಖಂಡಿಸಿ ಶುಕ್ರವಾರ ಪತ್ರ ಬರೆದಿಟ್ಟು ಡಿಪೊದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅಲ್ಲಿದ್ದವರು ಮಧು ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಧು ಕುಟುಂಬದವರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ದೂರು ದಾಖಲಾಗಿದೆ.