
ಬೆಂಗಳೂರು: ಖಾಸಗಿ ಟ್ಯಾಂಕರ್ ಹಾವಳಿ ತಪ್ಪಿಸಿ, ಸಿಲಿಕಾನ್ ಸಿಟಿ ಜನರಿಗೆ ಶುದ್ಧ ಕಾವೇರಿ ನೀರು ಒದಗಿಸಲು ನಿರ್ಧರಿಸಿರುವ ಬೆಂಗಳೂರು ಜಲಮಂಡಳಿ, ‘ಸಂಚಾರಿ ಕಾವೇರಿ’ (ಕಾವೇರಿ ಆನ್ ವೀಲ್ಸ್) ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಸಾರ್ವಜನಿಕರು ‘ಸಂಚಾರಿ ಕಾವೇರಿ’ ಯೋಜನೆಯಡಿ ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿ, ಬಿ.ಐ.ಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ಗಳ ಮೂಲಕವೇ ಮನೆ ಬಾಗಿಲಿಗೆ ಸರಬರಾಜು ಮಾಡಲಿದೆ. ಇನ್ನು ಈ ಸೇವೆ ಒದಗಿಸಲು ಇಚ್ಛಿಸುವ ಖಾಸಗಿ ಟ್ಯಾಂಕರ್ಗಳು ಮಂಡಳಿ ‘ಸಂಚಾರಿ ಕಾವೇರಿ’ ಪ್ಲಾಟ್ಫಾರ್ಮ್ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ.

j3tvkannada
ಡಿ.ಕೆ .ಶಿವಕುಮಾರ್ ಟ್ವೀಟ್ನಲ್ಲಿ ಏನೇನಿದೆ?
‘ಸಂಚಾರಿ ಕಾವೇರಿ’ಬೆಂಗಳೂರಿಗೆ ಶುದ್ಧ ಕುಡಿಯುವ ನೀರು. ಬೇಸಿಗೆ ಸಮಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಗಗನಕ್ಕೇರುವ ಟ್ಯಾಂಕರ್ ದರಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ನನ್ನ ಸೂಚನೆಯ ಮೇರೆಗೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ವತಿಯಿಂದ ‘ಸಂಚಾರಿ ಕಾವೇರಿ’ ಎಂಬ ವಿನೂತನವಾದ ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಈ ಯೋಜನೆ ದೇಶದಲ್ಲೇ ಮೊದಲು ಎಂದು ಡಿ.ಸಿ.ಎಂ ಡಿಕೆ ಶಿವಕುಮಾರ್ ಹೇಳಿದರು.
ಖಾಸಗಿ ಟ್ಯಾಂಕರ್ಗಳ ದರ ಏರಿಕೆಯ ಸಮಸ್ಯೆಗೆ ಪರಿಹಾರವಾಗಿ, ಬೆಂಗಳೂರಿನ ಜನತೆಗೆ ನಿಗದಿತ ದರದಲ್ಲಿ ಶುದ್ಧ ನೀರು ದೊರಕುವ ವ್ಯವಸ್ಥೆ ಇದಾಗಿದೆ. ಆನ್ಲೈನ್ ಬುಕ್ಕಿಂಗ್ ಮಾಡಿದರೆ, ಬಿ.ಐ.ಎಸ್ ಪ್ರಮಾಣೀಕೃತ ಶುದ್ಧ ಕುಡಿಯುವ ನೀರು ಇನ್ನು ಮುಂದೆ ಬೆಂಗಳೂರು ಜಲಮಂಡಳಿಯ ಟ್ಯಾಂಕರ್ಗಳ ಮೂಲಕವೇ ಮನೆ ಬಾಗಿಲಿಗೆ ಸರಬರಾಜು ಆಗಲಿದೆ. ಬೆಂಗಳೂರನ್ನು ‘ಟ್ಯಾಂಕರ್ ಸಿಟಿ’ ಎಂದು ಕರೆದವರಿಗೆ ಈ ಮೂಲಕ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದು ಎಕ್ಸ್ ಖಾತೆಯಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಶಿವಕುಮಾರ್ ಹೇಳಿದರು.
ಸಂಚಾರಿ ಕಾವೇರಿ ಆನ್ಲೈನ್ಲ್ಲಿ ಅರ್ಜಿ ಸಲ್ಲಿಸುವ ವಿಧಾನ
110 ಹಳ್ಳಿಗಳ ವ್ಯಾಪ್ತಿಯೂ ಒಳಗೊಂಡಂತೆ ನಗರದಲ್ಲಿ ಟ್ಯಾಂಕರ್ಗಳ ಮೇಲೆ ಅವಲಂಬಿತರಾಗಿರುವ ಜನರಿಗೆ ಉತ್ತಮ ನೀರನ್ನು ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಟ್ಯಾಂಕರ್ ಮಾಲೀಕರಿಗೆ ಮಂಡಳಿ ‘ಸಂಚಾರಿ ಕಾವೇರಿ’ ಪ್ಲಾಟ್ಫಾರ್ಮ್ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಿದೆ. ಈ ಸೇವೆಯನ್ನು ಒದಗಿಸಲು ಮಾಲೀಕರು ಜಲಮಂಡಳಿಗೆ ಟ್ಯಾಂಕರ್ಗಳನ್ನು ಬಾಡಿಗೆ ನೀಡಬಹುದು.
‘ಸಂಚಾರಿ ಕಾವೇರಿ’ – ‘ಕಾವೇರಿ ಆನ್ ವೀಲ್ಸ್’ ಗಾಗಿ ಆ್ಯಪ್ ಹಾಗೂ ವೆಬ್ಸೈಟ್ ರೂಪಿಸಲಾಗಿದೆ. ಅತ್ಯಂತ ಸುಲಭ ವಿಧಾನದಲ್ಲಿ ಜನರು ತಮಗೆ ಅಗತ್ಯವಿರುವಷ್ಟು ನೀರನ್ನು ಬುಕ್ಕಿಂಗ್ ಮಾಡಲು ಅವಕಾಶವಿದೆ. ಗ್ರಾಹಕರು ನೇರವಾಗಿ ನಮ್ಮ ಆನ್ಲೈನ್ ಪ್ಲಾಟ್ಫಾರ್ಮ್ ಮೂಲಕ ಹಣ ಪಾವತಿಸಿ ಟ್ಯಾಂಕರ್ ಬುಕ್ಕಿಂಗ್ ಮಾಡಿ ನೀರು ಪಡೆಯಬಹುದು. ಆಸಕ್ತರು, ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮುಖ್ಯ ಎಂಜಿನಿಯರ್ ಸನತ್ ಕುಮಾರ್ ಅವರನ್ನು ಮೊ: 91-99018 88338 ಮೂಲಕ ಸಂಪರ್ಕಿಸಬಹುದು.