
ತುಮಕೂರು: ಉಪ್ಪಾರಹಳ್ಳಿ, ಮರಳೂರು ದಿಣ್ಣೆ, ಯಾದವ ನಗರ, ಸಪ್ತಗಿರಿ ಬಡಾವಣೆ, ವಿಜಯನಗರ, ದೇವನೂರು, ಗೆದ್ದಲಹಳ್ಳಿ ಸೇರಿ ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಉಪ್ಪಾರಹಳ್ಳಿ ಮುಖ್ಯರಸ್ತೆ ಗುಂಡಿ ಮಯವಾಗಿದೆ. ಅಧ್ವಾನವಾದ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸ ಮಾಡಬೇಕಿದೆ.

j3tvkannada
ಉಪ್ಪಾರಹಳ್ಳಿ ಮುಖ್ಯರಸ್ತೆ ಮಹಾನಗರ ಪಾಲಿಕೆಯ 24ನೇ ವಾರ್ಡ್ ವ್ಯಾಪ್ತಿಗೆ ಒಳಪಡುತ್ತದೆ. ಚನ್ನಬಸವೇಶ್ವರ ಬಡಾವಣೆ, ಶಿವಮೂಕಾಂಬಿಕ ನಗರ, ಮಹಾಲಿಂಗೇಶ್ವರ ದೇವಸ್ಥಾನ ಪ್ರದೇಶಗಳು ವಾರ್ಡ್ಗೆ ಸೇರುತ್ತವೆ. ಮುಖ್ಯರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಹಾಳಾಗಿವೆ. ಚರಂಡಿ ಸಂಪರ್ಕ ಸಮರ್ಪಕವಾಗಿ ಇಲ್ಲದೆ ಮಳೆಗಾಲದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಉಪ್ಪಾರಹಳ್ಳಿಯ ವಿವಿಧೆಡೆ ರಾಜಕಾಲುವೆ ಒತ್ತುವರಿಯಾಗಿದ್ದು, ನೀರು ರಸ್ತೆ ಮೇಲೆ ಹರಿಯುತ್ತಿದೆ. 2022ರ ಜುಲೈ 31ರಂದು ಸುರಿದ ಭಾರಿ ಮಳೆಗೆ ಶಿವಮೂಕಾಂಬಿಕ ನಗರದ ಮನೆಗಳಿಗೆ ನೀರು ನುಗ್ಗಿತ್ತು. ಜಲಾವೃತವಾಗಿದ್ದ ಮನೆಯೊಂದರಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇಡೀ ರಾತ್ರಿ ಸುರಿದ ಮಳೆಗೆ ಮನೆಯಲ್ಲಿ ನೀರು ಸಂಗ್ರಹವಾಗಿತ್ತು. ಯುಪಿಎಸ್ ಸಂಪರ್ಕ ಕಡಿತಗೊಳಿಸಲು ಮುಂದಾದಾಗ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿತ್ತು. ಘಟನೆ ನಂತರವೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಮಳೆ ಬಂದ ಪ್ರತಿ ಬಾರಿಯೂ ಈ ಭಾಗದ ಜನರು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ. ವಾರ್ಡ್ನಲ್ಲಿ ಹಲವು ಉದ್ಯಾನವನ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ಅವು ನಿರ್ವಹಣೆ ಇಲ್ಲದೆ ಸೊರಗಿವೆ. ಪಾರ್ಕ್ನಲ್ಲಿಯೇ ಗಿಡಗಂಟಿಗಳು ಬೆಳೆದು ನಿಂತಿವೆ. ಆಸನಗಳು ಮುರಿದಿದ್ದು, ಸರಿ ಪಡಿಸುವ ಗೋಜಿಗೆ ಹೋಗಿಲ್ಲ.
ಉದ್ಘಾಟನೆಯಾಗದ ಭವನ: ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಿರ್ಮಿಸಿರುವ ಸಮುದಾಯ ಭವನಕ್ಕೆ ಇದುವರೆಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆಯಿಂದ ಭವನ ನಿರ್ಮಿಸಲಾಗಿದೆ. ಕಾಮಗಾರಿ ಮುಗಿದು ಹಲವು ದಿನಗಳು ಕಳೆದರೂ ಉದ್ಘಾಟಿಸಿಲ್ಲ. ಭವನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಕಿರಿದಾಗಿದ್ದು, ಬೈಕ್ ಬಿಟ್ಟರೆ ಬೇರೆ ವಾಹನಗಳ ಓಡಾಟ ಸಾಧ್ಯವಾಗುತ್ತಿಲ್ಲ.