
ಬಳ್ಳಾರಿ: ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಡ್ಯಾಂನಲ್ಲಿ ವರ್ಷದಿಂದ ವರ್ಷಕ್ಕೆ ಬಾರೀ ಪ್ರಮಾಣದ ಹೂಳು ತುಂಬಿಕೊಳ್ಳುತ್ತಿದೆ. ಡ್ಯಾಂನಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವಂತೆ ಆಗ್ರಹಿಸಿ ರೈತರು, ಸಾರ್ವಜನಿಕರು ನಿರಂತರವಾಗಿ ಸರ್ಕಾರದ ವಿರುದ್ಧ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಸಾವಿರಾರು ರೂಪಾಯಿ ಖರ್ಚಾಗುತ್ತದೆ ಎಂದು ಸಬೂಬು ನೀಡುತ್ತಾ ಬರುತ್ತಿದೆ. ಹೀಗಾಗಿ ಈ ವರ್ಷವಾದರೂ ಹೂಳು ತೆಗೆಯಲಿ ಎಂಬುದು ರೈತರ ಒತ್ತಾಯವಾಗಿದೆ. ಡ್ಯಾಂ ನಿರ್ಮಾಣವಾದಾಗ ಸುಮಾರು 132 ಟಿ.ಎಂ.ಸಿ ನೀರನ್ನು ಸಂಗ್ರಹ ಮಾಡುವ ಸಾಮರ್ಥ ಹೊಂದಿತ್ತು.

ಆದರೆ, ಕಾಲ ಕಳೆದಂತೆ ಹೂಳಿನ ಪ್ರಮಾಣ ಹೆಚ್ಚಾಗುತ್ತಿದ್ದರಿಂದ ಪ್ರಸ್ತುತ 105 ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥ ಹೊಂದಿದೆ.
ಒಂದು ಅಂದಾಜಿನ ಪ್ರಕಾರ 28 ಟಿ.ಎಂ.ಸಿ ನೀರು ಸಂಗ್ರಹವಾಗುವಷ್ಟು ಹೂಳು ತುಂಬಿದೆ ಎನ್ನುವ ಮಾಹಿತಿ ಇದೆ. ಹೀಗಾಗಿ ಡ್ಯಾಂನಲ್ಲಿ ಶೇಖರಣೆಯಾಗಿರುವ ಹೂಳನ್ನು ತೆರವುಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಒಂದು ವೇಳೆ ಮಾಡದಿದ್ದರೆ ರೈತರಿಗೆ ತೊಂದರೆಯಾಗುವುದರ ಜತೆಗೆ, ಡ್ಯಾಂಗೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ತುಂಗಭದ್ರಾ ಡ್ಯಾಂ ನೀರಿನ ಸಂಗ್ರಹದ ಪ್ರಮಾಣ ಕಡಿಮೆ ಆಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ, ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಸರ್ಕಾರ ಕೂಡಲೇ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ. ಹಿಂದಿನ ಸರ್ಕಾರಗಳು ಹೂಳು ತೆಗೆಸಲು ಹಲವು ವಿದೇಶಿ ತಂತ್ರಜ್ಞಾನವನ್ನು ಬಳಕೆ ಮಾಡಲು ಮುಂದಾಗಿದ್ದವು. ಆದರೆ ಅದರ ಖರ್ಚು ವೆಚ್ಚ ಸಾವಿರಾರು ಕೋಟಿ ರೂ. ಆಗುವ ಕಾರಣದಿಂದ ಆ ಪ್ರಾಜೆಕ್ಟ್ ಕೈಬಿಡಲಾಗಿತ್ತು.