
ರಾಯಚೂರು: ನಿಯಮಿತವಾಗಿ ಕಸ ವಿಲೇವಾರಿ ನಡೆಯದ ಕಾರಣ ಪಟ್ಟಣದ ಪ್ರಮುಖ ರಸ್ತೆಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ರಸ್ತೆಯುದ್ದಕ್ಕೂ ಕಸದ ರಾಶಿಗಳು ರಾರಾಜಿಸುತ್ತಿವೆ.

j3tvkannada
ಸಮರ್ಪಕವಾಗಿ ಕಸ ವಿಲೇವಾರಿಯಾಗದೆ ಪಟ್ಟಣದ ರಾಯಚೂರು ರಸ್ತೆ, ಮುದಗಲ್, ಕಲಬುರಗಿ ರಸ್ತೆ, ಬೆಂಗಳೂರು ಬೈಪಾಸ್ ರಸ್ತೆ, ಕರಡಕಲ್ ರಸ್ತೆ ಬದಿಯಲ್ಲಿ ಕಸದ ರಾಶಿಗಳು ರಾರಾಜಿಸುತ್ತಿವೆ. ಆರ್ ಡಿಪಿಆರ್ ಕಚೇರಿ ಎದುರಿನಲ್ಲಿ ಕಸದ ರಾಶಿ ತಲೆ ಎತ್ತಿದೆ.’ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊಗಳು 8-10 ದಿನಗಳಿಗೊಮ್ಮೆ ಬರುತ್ತಿರುವ ಕಾರಣ ಹತ್ತು ದಿನಗಳವರೆಗೆ ಒಣ ಮತ್ತು ಹಸಿ ಕಸ ಮನೆಯಲ್ಲಿ ಇಟ್ಟುಕೊಳ್ಳಲಾಗದೆ ಅನಿವಾರ್ಯವಾಗಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ’ ಎಂದು 7ನೇ ವಾರ್ಡ್ ನಿವಾಸಿಯೊಬ್ಬರು ತಿಳಿಸಿದರು.
ಚರಂಡಿಗಳಲ್ಲೂ ತ್ಯಾಜ್ಯ: ಬಡಾವಣೆಗಳಲ್ಲಿನ ಚರಂಡಿಗಳೂ ಕಸದಿಂದ ತುಂಬಿವೆ. ಆದ್ದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
‘ಕಸ ಸಂಗ್ರಹಕ್ಕೆ ಪುರಸಭೆಯ ಆಟೊಗಳು 8 ದಿನಗಳಿಗೊಮ್ಮೆ ವಾರ್ಡ್ಗಳಿಗೆ ಬಂದರೆ ಕಸ ಮನೆಯಲ್ಲಿ ಇಟ್ಟುಕೊಳ್ಳಲಾಗದೇ ರಸ್ತೆ ಅಕ್ಕಪಕ್ಕದಲ್ಲೇ ಸಾರ್ವಜನಿಕರು ರಾಶಿ ರಾಶಿ ಕಸ ಸುರಿಯುತ್ತಾರೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ನಮ್ಮ ಏರಿಯಾದಲ್ಲಿನ ಚರಂಡಿಯನ್ನು ದುಡ್ಡು ಕೊಟ್ಟು ಸ್ವಚ್ಛ ಮಾಡಿಸಿದ್ದೇವೆ. ಕಸ ವಿಲೇವಾರಿಗೆ ಪುರಸಭೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು’ ಎಂದು ನಿವಾಸಿ ಶೇಖರ ಗುರಡ್ಡಿ ಒತ್ತಾಯಿಸಿದರು.
‘ಪುರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕೆ ಸದ್ಯ ನಾಲ್ಕು ಆಟೊಗಳಿವೆ. ಹೊಸದಾಗಿ 3 ಆಟೊ ಖರೀದಿಗಾಗಿ ಟೆಂಡರ್ ಕರೆಯಲಾಗಿದೆ. ನ್ಯಾಯಾಲಯದ ಉದ್ಘಾಟನೆ ಪ್ರಯುಕ್ತ ಸ್ವಚ್ಛತೆ ಮತ್ತು ಅಮರೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸ್ವಚ್ಛತೆಗಾಗಿ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಪಟ್ಟಣದಲ್ಲಿ ಎಲ್ಲಿಲ್ಲಿ ಕಸರಾಶಿ ಇದೆಯೋ ಅದನ್ನು ಆದಷ್ಟು ಬೇಗ ವಿಲೇವಾರಿ ಮಾಡಲಾಗುವುದು ಎಂದು ಪುರಸಭೆ ಪರಿಸರ ಇಂಜಿನಿಯರ್ ಕೆ.ಗಿರಿಜಾ ರವರು ತಿಳಿಸಿದರು.