
ಬೆಂಗಳೂರು: ವ್ಯಕ್ತಿಯೊಬ್ಬರಿಗೆ ‘ಹೋಗಿ ಸಾಯಿ’ ಎಂದು ಹೇಳಿದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅದೇ ಆರೋಪ ಸಂಬಂಧ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಮೂವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಬಸವರಾಜು ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
‘‘ಪ್ರಚೋದನೆ” ಎಂಬ ಪದ ಅಸಂಬಂದ್ಧ ಕ್ರಿಯೆ ಮಾಡುವುದಕ್ಕೆ ನೀಡುವ ಕುಮ್ಮಕ್ಕಾಗಿರಲಿದೆ. ಆರೋಪಿಗಳು ಮೃತರನ್ನು ಹೋಗಿ ಸಾಯಿ ಎಂದು ಹೇಳಿದ್ದಾರೆಂಬ ಪ್ರಾಸಿಕ್ಯೂಷನ್ ವಾದ ಒಪ್ಪಿಕೊಂಡರೂ, ಅದು ಸಾವಿಗೆ ಪ್ರಚೋದನೆ ನೀಡಿದಂತಾಗುವುದಿಲ್ಲ. ಈ ಹೇಳಿಕೆಯಲ್ಲಿಅಪರಾಕ ಮನಸ್ಥಿತಿ ಇಲ್ಲ, ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ರಾಮಪ್ಪ, ಅವರ ಪುತ್ರ ಸುರೇಶ್ ಮತ್ತು ಸೊಸೆ ಸ್ವರೂಪವ್ವ ಅವರನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.
ಪ್ರಕರಣದಲ್ಲಿ ಸುಧಾ ಎಂಬುವವರು ಮೃತಪಟ್ಟ ಬಳಿಕ ಎಫ್.ಐ.ಆರ್ ದಾಖಲಿಸಿದ್ದು ವಿಳಂಬವಾಗಿದೆ. ಮೃತ ದೇಹದಲ್ಲಿ ಶೇ.95ರಷ್ಟು ಸುಟ್ಟ ಗಾಯಗಳಾಗಿದ್ದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ. ಪ್ರಕರಣ ಸಂಬಂಧ ಹೇಳಿಕೆ ನೀಡುವುದಕ್ಕೆ ಸುಧಾ ಯೋಗ್ಯ ಸ್ಥಿತಿಯಲ್ಲಿದ್ದಾರೆಂಬ ಅಂಶವನ್ನು ವೈದ್ಯಕೀಯ ಅಧಿಕಾರಿ ವಿವರಣೆ ನೀಡಿಲ್ಲ. ತನಿಖಾಧಿಕಾರಿ ಮೃತರ ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ತಹಸೀಲ್ದಾರ್ಗೆ ಮನವಿ ನೀಡಿದ್ದಾರೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ಅದಕ್ಕೆ ಪುರಾವೆ ಒದಗಿಸಿಲ್ಲ. ಈ ಎಲ್ಲಅಂಶಗಳು ಅನುಮಾನಕ್ಕೆ ಕಾರಣವಾಗಲಿದ್ದು, ತನಿಖೆ ಸೂಕ್ತ ರೀತಿಯಲ್ಲಿ ನಡೆಸಿಲ್ಲವೆಂಬ ಅಂಶ ಗೊತ್ತಾಗಲಿದೆ, ಎಂದು ನ್ಯಾಯಪೀಠ ತಿಳಿಸಿದೆ.
ಆಗಿದ್ದು ಏನು?
ಮೃತ ಸುಧಾ ಮತ್ತು ಆಕೆ ಪತಿ ನಾಗರಾಜು ಹಾಗೂ ಪ್ರಕರಣದ ಆರೋಪಿಗಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ನಾಗರಾಜ್ ಅವರ ಅಜ್ಜ ರಾಮಪ್ಪ, ಸುಧಾರಿಗೆ ಸೇರಿದ ಮನೆ ಖಾಲಿ ಮಾಡುವಂತೆ ಕೇಳಿದ್ದರು. ಆಗ ಎಲ್ಲಿಗೆ ಹೋಗಬೇಕು ಎಂದು ಸುಧಾ ಕೇಳಿದ್ದಾಗಿ ‘ಎಲ್ಲಾದರೂ ಹೋಗಿ ಸಾಯಿ’ ಎಂದು ನಿಂದಿಸಿ ಹಲ್ಲೆನಡೆಸಿ ಮನೆಯಿಂದ ಹೊರಹೋಗಲು ತಿಳಿಸಿದ್ದರು. ಅದಾದ ಅರ್ಧ ಗಂಟೆ ಬಳಿಕ ಸುಧಾ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದ ಹಿರೇಕೆರೂರು ಪೊಲೀಸರು ಮೂವರ ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ದೂರು ದಾಖಲಿಸಿಕೊಂಡು ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.