
ಹಾಸನ: ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ಸಂಕಲ್ಪ ಮಾಡಿರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ದಾನಿಗಳಿಂದ ಬೆಂಚ್ ಹಾಗೂ ಡೆಸ್ಟ್ಗಳನ್ನು ದೇಣಿಗೆ ಪಡೆದು, ಅಗತ್ಯವಿರುವ ಶಾಲೆಗಳಿಗೆ ವಿತರಣೆ ಮಾಡಲಾಗುತ್ತಿದೆ.

j3tvkannada
ಜಿಲ್ಲೆಯ ಉದ್ಯಮಿಗಳು, ಪರವಾನಗಿ, ಎನ್ಒಸಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಾರೆ. ಇಂಥವರಿಗೆ ಸಾಮಾಜಿಕ ಕಳಕಳಿಯ ಕೆಲಸ ಮಾಡುವಂತೆ ಜಿಲ್ಲಾಧಿಕಾರಿ ಸತ್ಯಭಾಮಾ ಮನವಿ ಮಾಡುತ್ತಾರೆ. ಹಾಗಾಗಿ ಕೆಲಸ ಆದ ಖುಷಿಯಲ್ಲಿ ಉದ್ಯಮಿಗಳು ಶಾಲೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಮುಂದೆ ಬರುತ್ತಿದ್ದಾರೆ. ಅಂತಹ ಉದ್ಯಮಿಗಳಿಂದ ಸಹಕಾರ ಪಡೆದು, ಸರ್ಕಾರಿ ಶಾಲೆಗಳಿಗೆ ಆದ್ಯತೆ ಅನುಸಾರವಾಗಿ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಸತ್ಯಭಾಮಾ ಮುಂದಾಗಿದ್ದಾರೆ. ಇದುವರೆಗೂ 120ಕ್ಕೂ ಹೆಚ್ಚು ಡೆಸ್ಟ್ಗಳನ್ನು ನಗರ ಸೇರಿದಂತೆ ವಿವಿಧ ತಾಲ್ಲೂಕುಗಳ ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಲಾಗಿದೆ. ಇತ್ತೀಚಿಗೆ ಶಿವಗಂಗಾ ಗ್ರಾನೈಟ್ ಮಾಲೀಕ ಎಸ್.ಎಚ್.ರಾಜಶೇಖರ್ 30 ಬೆಂಚ್ ಮತ್ತು ಡೆಸ್ಕ್ ನೀಡಿದ್ದಾರೆ. ಅರಸೀಕೆರೆ ತಾಲ್ಲೂಕಿನ ಅರೆಕೆರೆ ಗ್ರಾಮದ ಉದ್ಯಮಿ ಮಂಜುನಾಥ್ 20 ಡೆಸ್ಕ್ ಹಾಗೂ ಬೆಂಚ್ ನೀಡಿದ್ದಾರೆ. ವಾಣಿಜ್ಯೋದ್ಯಮಿ ತನುಗೌಡ ಸಹ 20 ಡೆಸ್ಕ್ ದೇಣಿಗೆಯಾಗಿ ನೀಡಿದ್ದಾರೆ. ಇನ್ನೂ 120 ಡೆಸ್ಟ್ಗಳು ಸಂಗ್ರಹವಾಗಲಿವೆ.
ಡೆಸ್ಕ್ಗಳನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ಕೃಷ್ಣಗೌಡ, ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಸುಜಯ್ ಅವರ ಉಪಸ್ಥಿತಿಯಲ್ಲಿ ಶಾಲೆಗಳಿಗೆ ಹಸ್ತಾಂತರಿಸಲಾಗಿದೆ.
ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ: ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಕಾಡುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸಭೆಗಳಲ್ಲಿ ದೂರುಗಳು ಕೇಳಿಬಂದಿತ್ತು. ಈ ನಡುವೆ ಜಿಲ್ಲಾಧಿಕಾರಿ ಸತ್ಯಭಾಮಾ, ಮುತುವರ್ಜಿ ವಹಿಸಿ ಸಿಎಸ್ಆರ್ ಅನುದಾನದಿಂದ ಬರುವ ಸೌಲಭ್ಯವನ್ನು ಬಳಸಿಕೊಂಡು ಜಿಲ್ಲೆಯ ಸುಮಾರು 100ಕ್ಕೂ ಹೆಚ್ಚು ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿದ್ದಾರೆ.
ಆಲೂರು, ಸಕಲೇಶಪುರ, ಚನ್ನರಾಯಪಟ್ಟಣ, ಹೊಳೆನರಸೀಪುರ, ಹಾಸನ, ಅರಕಲಗೂಡು, ಅರಸೀಕೆರೆ ತಾಲ್ಲೂಕಿನ ಸುಮಾರು 80ಕ್ಕೂ ಹೆಚ್ಚು ಶಾಲೆಗಳಿಗೆ ಸುಣ್ಣ-ಬಣ್ಣ, ಕಾಂಪೌಂಡ್ ನಿರ್ಮಾಣ, ಮೇಲ್ಪಾವಣಿ, ಶೌಚಾಲಯ, ಕೊಠಡಿ, ಬೀರುಗಳ ವಿತರಣೆ, ಡ್ರಮ್ ಸೆಟ್, ಕಂಪ್ಯೂಟರ್, ನೋಟ್ ಬುಕ್, ಶಾಲೆ ಆವರಣ ಸ್ವಚ್ಛತೆ, ಅಡುಗೆ ಮನೆಗೆ ಬಣ್ಣ ಸುಣ್ಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.