

ಚಿಕ್ಕಮಂಗಳೂರು: ಮಲ್ಲೇಶ್ವರದ ಸ್ವರ್ಣಾಂಬ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ದೇವಿಗೆ ಚಿಕ್ಕರಥೋತ್ಸವ ಗುರುವಾರ ನೆರವೇರಿತು. ಬೆಳಿಗ್ಗೆ ದೇವಿಯ ಮೂಲಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆಗಳು ನಡೆದ ನಂತರ ಸಂಪ್ರದಾಯದಂತೆ ದೇವಿ ಉತ್ಸವ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆ ತಂದು ಅಲಂಕೃತವಾದ ಚಿಕ್ಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಬಳಿಕ ಗ್ರಾಮದೊಳಗಿರುವ ದೇವಸ್ಥಾನದವರೆಗೆ ರಥವನ್ನು ಎಳೆಯಲಾಯಿತು. ನಂತರ ಚಂಡಿಕಾ ಹೋಮ ನಡೆಯಿತು. ದೇವಿಪ್ರಸಾದ್ ಶರ್ಮ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಡಾ.ಎಂ.ಟಿ.ಸತ್ಯನಾರಾಯಣ, ಸದಸ್ಯರು ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಶುಕ್ರವಾರ ಬ್ರಹ್ಮ ರಥೋತ್ಸವ ನಡೆಯಲಿದೆ.