
ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಮೂಡಬೂಳ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಜಮೀನಿದ್ದರೂ ಮಂಜೂರಿಗೆ ಮೀನಾಮೇಷ ಎಣಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿಗೆ ಕಳೆದ 5 ವರ್ಷಗಳಿಂದ ಪ್ರಯತ್ನಗಳು ಸಾಗಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ಗ್ರಾಮದಲ್ಲಿ ಸುಮಾರು 10ಸಾವಿರ ಜನ ಸಂಖ್ಯೆಯಿದೆ. ಗ್ರಾಮ ರಾಜ್ಯ ಹೆದ್ದಾರಿಯಿಂದ 3ಕಿ.ಮೀ ಮೀಟರ್ ಅಂತರದಲ್ಲಿದೆ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವಂಚಿತವಾಗಿದೆ. ಗ್ರಾಮದ ಅಕ್ಕಪಕ್ಕದ ಗ್ರಾಮಗಳಾದ ಶಿರವಾಳ, ಗೋಗಿ ಪ್ರಾಥಮಿಕ ಕೇಂದ್ರಗಳಿವೆ. ಅಲ್ಲಿಗೆ ತೆರಳಲು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಆರೋಗ್ಯ ಕೇಂದ್ರದ ಕೊರತೆ ಇರುವ ಕಾರಣ ಬಾಣಂತಿಯರು, ಶಿಶುಗಳು, ವೃದ್ಧರು, ಶಹಾಪುರ ಇಲ್ಲವೇ ಕಲಬುರಗಿಗೆ ತೆರಳುವ ಪರಿಸ್ಥಿತಿ ಇದೆ.

j3tvkannada
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಮಂಜೂರು ಆಗಿರಲಿಲ್ಲ. ಕಳೆದ 5 ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಅನುಮತಿ ಸಿಕ್ಕಿತ್ತು. ಆದರೆ, ಅದು ಇನ್ನೂ ಕೈಗೂಡಿಲ್ಲ. ಅಂದಿನ ಶಾಸಕ, ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಗ್ರಾಮದ ಜನತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿಯಾಗಿದ್ದು ಕಟ್ಟಡಕ್ಕೆ ₹1.75ಕೋಟಿ ಟೆಂಡರ್ ಆಗಿದೆ. ಗ್ರಾಮಸ್ಥರು ಭೂಮಿ ಕೊಡಿ ಎಂದು ಹೇಳಿದ್ದರು. ಅದರಂತೆ ಗ್ರಾಮದ ಸರ್ಕಾರಿ ಗೈರಾಣು ಸರ್ವೆ ನಂಬರ್ 273 ರಲ್ಲಿ 9-24ಗುಂಟೆಯಲ್ಲಿ 4ಎಕರೆ ಜಮೀನು ಕೊಡಲು ಗ್ರಾಮ ಪಂಚಾಯಿತಿಯಲ್ಲಿ ಠರಾವು ಪಾಸು ಮಾಡಲಾಗಿತ್ತು. ಇಲ್ಲಿಯವರೆಗೆ ಕಟ್ಟಡ ತಲೆ ಎತ್ತಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದು.
ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಇವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೂಮಿ ಕೊಡಲು ಮನವಿ ಕೊಡಲಾಯಿತು. ಆದರೂ ಇಲ್ಲಿಯವರೆಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಆಗುವ ಲಕ್ಷಣಗಳು ಕಾಣುತಿಲ್ಲ ಎನ್ನುವ ಪ್ರಶ್ನೆ ಗ್ರಾಮಸ್ಥರದ್ದು. ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊನೆಯ ಭಾಗದ ಗ್ರಾಮವಾಗಿದ್ದು, ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾದರೆ ಸುತ್ತಮುತ್ತಲು ಹಳ್ಳಿಯ ಜನರಿಗೆ ಅನುಕೂಲವಾಗುತ್ತದೆ ಎನ್ನುವ ಆಗ್ರಹ ನಿವಾಸಿಗಳು ಮಾಡುತ್ತಾರೆ. ಸರ್ಕಾರದ ಆಮೆ ನಡಿಗೆಯಿಂದ ಮೂಡಬೂಳ ಗ್ರಾಮ ಆರೋಗ್ಯ ಕೇಂದ್ರ ವಂಚಿತವಾಗಿದೆ. ಕೂಡಲೇ ಸಂಬಂಧಿಸಿದವರು ಪಿಎಚ್ಸಿ ಕಟ್ಟಡ ಸೇರಿದಂತೆ ಕೇಂದ್ರ ನಿರ್ಮಾಣಕ್ಕೆ ಬೇಕಾಗಿರುವ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ತರಾದ ಅಶೋಕರಾವ ಮೂಡಬೂಳ ತಿಳಿಸಿದರು.