
ರಾಯಚೂರು: ಹಟ್ಟ ಚಿನ್ನದಗಣಿ ಪಟ್ಟಣದಲ್ಲಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿ ಇಲ್ಲದ ಕಾರಣ ನಿತ್ಯ ಜನರು ಪರದಾಡುತ್ತಿದ್ದಾರೆ.

j3tvkannada
ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಕ್ಯಾಂಪ್ ಪ್ರದೇಶದ ಪೊಲೀಸ್ ಠಾಣೆ, ಹೊಸ ಬಸ್ ನಿಲ್ದಾಣ ಹತ್ತಿರದ ನಲ್ಲಿಯ ಎದುರು ಜನರು ನಿಲ್ಲುತ್ತಿದ್ದಾರೆ. ಹಟ್ಟಿ ಪಟ್ಟಣದಲ್ಲಿ ಒಟ್ಟು 13 ವಾರ್ಡ್ಗಳಿವೆ. 30 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಕುಡಿಯುವ ನೀರಿಗಾಗಿ ಹೋರಾಟ ಮಾಡಿದರೂ ಜನಪ್ರತಿನಿಧಿಗಳಿಗೆ ಬಡ ಜನರ ನೋವು ತಿಳಿಯದಾಗಿದೆ. ನೀರಿಗಾಗಿ ಮಕ್ಕಳು,ಯುವಕರು, ಮಹಿಳೆಯರು ನಿತ್ಯ ಹರಸಾಹಸ ಪಡುತ್ತಿದ್ದಾರೆ. ಆದರೆ, ನೀರಿನ ಸಮಸ್ಯೆ ಪರಿಹಾರ ಮಾಡುವ ಗೋಜಿಗೆ ಯಾರೂ ಮುಂದಾಗುತ್ತಿಲ್ಲ.
ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅಹವಾಲು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ ಎನ್ನುವುದು ನಾಗರಾಜ ಅವರ ಆರೋಪ. ಜನರಿಗೆ ಅಗತ್ಯವಾಗಿ ಬೇಕಾಗಿರುವುದು ಕುಡಿಯುವ ನೀರು. ನೀರಿನ ಸೌಲಭ್ಯ ಒದಗಿಸದೆ ಇದ್ದರೆ ಏನು ಮಾಡುವುದು ಎಂದು ಇಲ್ಲಿನ ಜನರು ಪ್ರಶ್ನಿಸುತ್ತಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ನೀರಿನ ಸಮಸ್ಯೆ ಬಗ್ಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುವುದು ಜನರ ಒತ್ತಾಯವಾಗಿದೆ.
ಹಟ್ಟಿ ಪಟ್ಟಣದ ಜನರನ್ನು ಶಾಸಕ ಮಾನಪ್ಪ ವಜ್ಜಲ್ ಅವರು ಮರೆತು ಬಿಟ್ಟಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುತ್ತೇನೆ ಎಂದು ಚುನಾವಣೆ ಸಮಯದಲ್ಲಿ ನೀಡಿದ ಭರವಸೆ ಹುಸಿಯಾಗಿದೆ. ಇಂತಹ ಜನಪ್ರತಿನಿಧಿಗಳಿಂದ ಅಭಿವೃದ್ಧಿ ನಿರೀಕ್ಷೆ ಮಾಡುವುದು ಹೇಗೆ ಎನ್ನುವುದು ಜನರ ನೋವು. ಕುಡಿಯುವ ನೀರಿಗಾಗಿ ಈ ಹಿಂದೆ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಟಣಮಕಲ್ಲು ಹತ್ತಿರ ಡಿ.ಎಂ.ಎಫ್ ಯೋಜನೆ ಅಡಿಯಲ್ಲಿ ₹4.30 ಕೋಟಿ ಅನುದಾನದಲ್ಲಿ ಜಾಕ್ವೆಲ್ ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ನೇರವಾಗಿ ಹಟ್ಟಿ ಪಟ್ಟಣಕ್ಕೆ ಹೊಸ ಪೈಪ್ಲೈನ್ ಕಾಮಗಾರಿ ಮಾಡಲು ಮುಂದಾದಾಗ ಚುನಾವಣೆ ಬಂದು ಅಡ್ಡಿಯಾಯಿತು. ಆ ಯೋಜನೆ ಕೈಗೆತ್ತಿಕೊಳ್ಳಲಿಲ್ಲ. ಚುನಾವಣೆಯಲ್ಲಿ ಗೆದ್ದು ಬಂದ ಶಾಸಕ ಮಾನಪ್ಪ ವಜ್ಜಲ್ 2 ವರ್ಷದಿಂದ ಹಟ್ಟಿ ಪಟ್ಟಣಕ್ಕೆ ಕಾಲಿಟ್ಟಿಲ್ಲ. ಇಲ್ಲಿನ ಮುಖಂಡರು ಮೌನಕ್ಕೆ ಶರಣಾಗಿದ್ದಾರೆ ಎನ್ನುತ್ತಾರೆ ಸಾರ್ವಜನಿಕರು.