
ಶಿವಮೊಗ್ಗ: ಜಾತಿಗಣತಿ ಸಮೀಕ್ಷೆಯಲ್ಲಿ ವನ್ನಿಯರ್ ಸಮುದಾಯಕ್ಕೆ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಮತ್ತೊಮ್ಮೆ ವೈಜ್ಞಾನಿಕವಾಗಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಕರುನಾಡು ರಾಜ್ಯ ವನ್ನಿಯರ್ ಮಹಾಸಭಾ ಸಂಸ್ಥಾಪಕ ಜಿ.ವಿ.ಗಣೇಶಪ್ಪ ಆಗ್ರಹಿಸಿದರು.

j3tvkannada
ರಾಜ್ಯದಲ್ಲಿ ವನ್ನಿಯರ್ ಸಮುದಾಯ 30 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಗೌಂಡರ್,ವನ್ನಿ ರೆಡ್ಡಿ, ನಾಯ್ಕರ್, ಪಡಿಯಾಚಿ, ಪಲ್ಲಿ, ನನ್ನಿ, ವನ್ನಿ ಗೌಂಡರ್ ಎಲ್ಲವೂ ಒಂದೇ ಸಮುದಾಯಕ್ಕೆ ಸೇರಿವೆ. ಆದರೆ ಸಮೀಕ್ಷೆಯಲ್ಲಿ ಗೌಂಡರ್ 1.3 ಲಕ್ಷ, ವನ್ನಿಯ ಕುಲಕ್ಷತ್ರಿಯ 33,516 ಜನಸಂಖ್ಯೆ ಇದೆ ಎಂಬ ಅಂಕಿ ಅಂಶ ನೀಡಲಾಗಿದೆ. ಇದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶಿವಮೊಗ್ಗದಲ್ಲಿ ಅಂದಾಜು 70,000, ಚಿಕ್ಕಮಗಳೂರಿನಲ್ಲಿ 85,000ದಷ್ಟು ಸಮುದಾಯದ ಜನರಿದ್ದಾರೆ. ಜಾತಿಗಣತಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದ್ದು, ಸಮೀಕ್ಷೆಗೆ ಯಾರೂ ಮನೆ ಬಾಗಿಲಿಗೆ ಬಂದಿಲ್ಲ ಎನ್ನುವ ಮಾತು ಸಮುದಾಯದ ಜನರಿಂದ ಕೇಳಿ ಬಂದಿದೆ. ಆದ್ದರಿಂದ ಸರ್ಕಾರ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
1980ಕ್ಕಿಂತ ಹಿಂದೆ ಜಾತಿ ಪ್ರಮಾಣ ಪತ್ರವನ್ನು ಕೈಬರಹದಲ್ಲಿ ನೀಡುತ್ತಿದ್ದರು. ಗಣಕೀಕೃತವಾದ ನಂತರ ವನ್ನಿಕುಲದ ಎಲ್ಲ ಸಮುದಾಯಗಳನ್ನು ಗೌಂಡರ್ ಎಂದು ನಮೂದು ಮಾಡಿದ್ದರು. ಈಗಿನ ಸಮೀಕ್ಷೆಯಲ್ಲಿ ನಮ್ಮ ಸಮುದಾಯವನ್ನು ಒಕ್ಕಲಿಗರ ಜೊತೆ ಸೇರಿಸಿದ್ದಾರೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಆದ್ದರಿಂದ ಪುನರ್ ಗಣತಿ ಮಾಡಬೇಕು ಹಾಗೂ 2ಎ ಮೀಸಲು ನೀಡಬೇಕು’ ಎಂದು ಮಹಾಸಭಾದ ಸಂಘಟನಾ ಕಾರ್ಯದರ್ಶಿ ಚಕ್ರವರ್ತಿ ಒತ್ತಾಯಿಸಿದರು. ಕರುನಾಡು ನನ್ನಿಯರ್ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರೊಟ್ಟಿ ಸುಬ್ಬಣ್ಣ, ಪ್ರಮುಖರಾದ ಪಿ.ಷಣ್ಮಗಂ, ಮುರುಗೇಶ್, ಜೆ.ಮುರುಗನ್, ಮಂಜು, ಗಿರೀಶ್, ರಾಮಕೃಷ್ಣ, ಸಂಪತ್ ಕುಮಾರ್ ಇದ್ದರು.