
ಕೊಪ್ಪಳ: ಯಲಬುರ್ಗಾ ವಿಧಾನಸಭಾ ಕ್ಷೇತ್ರ ಮಹಿಳೆಗೆ ಮೀಸಲಾದರೆ ಹಿಟ್ನಾಳ ಕುಟುಂಬದ ಮಹಿಳೆಯನ್ನು ಕಣಕ್ಕಿಳಿಸುವುದಾಗಿ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಯನ್ನು ಸಂಸದ ರಾಜಶೇಖರ ಹಿಟ್ನಾಳ ಬುಧವಾರ ಇಲ್ಲಿ ಸಮರ್ಥಿಸಿಕೊಂಡರು.

j3tvkannada
ಸುದ್ದಿಗಾರರೊಂದಿಗೆ ಮಾತನಾಡಿ ರಾಯರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು (ರಾಯರೆಡ್ಡಿ) ನಮಗೆ ತಂದೆ ಸಮಾನರು, ಆತ್ಮೀಯರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕುಟುಂಬಗಳೇ ಸಮಾಜ ಸೇವೆಯಲ್ಲಿರಬೇಕು, ಬೇಡ ಎಂಬುದಿರುವುದಿಲ್ಲ. ಪ್ರತಿಯೊಬ್ಬರಿಗೂ ಸೇವೆಗೆ ಅವಕಾಶ ಇರುತ್ತದೆ. ಅಂತಹವರು ಚುನಾವಣೆಯಲ್ಲಿ ಗೆದ್ದು ಬರುತ್ತಾರೆ ಅದರಲ್ಲಿ ತಪ್ಪೇನಿದೆ ಎಂದರು.
ಅಲ್ಲದೆ, ನಮ್ಮ ತಂದೆ, ಅಣ್ಣ, ನಾನೂ ಸೇರಿ ನಮ್ಮ ಇಡೀ ಕುಟುಂಬ ಸಮಾಜ ಸೇವೆಗಾಗಿ ಜನರೊಂದಿಗೆ ಇರಲು ಬಯಸುತ್ತೇವೆ. ಅಂತಹ ಶಕ್ತಿಯೂ ನಮ್ಮ ಕುಟುಂಬಕ್ಕಿದೆ ಎಂದರು. ಅಲ್ಲದೆ ಮಾಜಿ ಸಂಸದ ಸಂಗಣ್ಣ ಕರಡಿ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಅವರೂ ಅಂತರ ಕಾಯ್ದುಕೊಂಡಿಲ್ಲ. ಅವರ ಅನುಭವವನ್ನು ಕ್ಷೇತ್ರದ ಅಭಿವೃದ್ಧಿಗೆ ತಾವು ಬಳಸಿಕೊಳ್ಳುತ್ತಿರುವುದಾಗಿ ಸಂಸದ ಸ್ಪಷ್ಟಪಡಿಸಿದರು.