
ಹಾವೇರಿ : ತಾಲ್ಲೂಕು ಆಸ್ಪತ್ರೆಯಲ್ಲಿ ಭದ್ರತೆ, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆಯೂ ಸಿಗದಾಗಿದೆ.

j3tvkannada
ಆಸ್ಪತ್ರೆಯ ಕಾಂಪೌಂಡ್ ಬಿದ್ದು ವರ್ಷಗಳೇ ಕಳೆದಿದೆ. ಕಾಂಪೌಂಡ್ ಮರು ನಿರ್ಮಾಣಕ್ಕೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೂಕ್ತ ಭದ್ರತೆ ಇಲ್ಲದೆ ಬೀದಿ ನಾಯಿಗಳು, ಹಂದಿಗಳು ಆಸ್ಪತ್ರೆ ಆವರಣಕ್ಕೆ ನುಗ್ಗುತ್ತಿವೆ. ಆಸ್ಪತ್ರೆ ಒಳಗೆ ಮತ್ತು ಹೊರಗಿನ ಆವರಣದ ಸ್ವಚ್ಛತೆ ಕಾಪಾಡಲೂ ಕ್ರಮವಾಗಿಲ್ಲ. ಆಸ್ಪತ್ರೆಗೆ ಪ್ರತಿದಿನ 650ರಿಂದ 700 ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಒಟ್ಟು 18 ತಜ್ಞ ವೈದ್ಯರ ಹುದ್ದೆ ಮಂಜೂರಾಗಿದ್ದರೂ, ಐವರು ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಲ್ವರು ತುರ್ತು ಚಿಕಿತ್ಸಾ ತಜ್ಞರ ಹುದ್ದೆ ಖಾಲಿ ಇದ್ದು, ನೇಮಕಾತಿಗೆ ಇಲಾಖೆ ಮುಂದಾಗಿಲ್ಲ. ಆಸ್ಪತ್ರೆಯಲ್ಲಿ ರಕ್ತ ಹಾಗೂ ಮೂತ್ರ ತಪಾಸಣಾ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಹೆಚ್ಚಿನ ಪರೀಕ್ಷೆಗೆ ಖಾಸಗಿ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ರಕ್ತ ಹಾಗೂ ಮೂತ್ರ ತಪಾಸಣಾ ಕೇಂದ್ರ, ಕ್ಷ-ಕಿರಣ ಮತ್ತು ಔಷಧ ವಿತರಣೆಯನ್ನು ದಿನದ 24 ಗಂಟೆಯೂ ಮಾಡಬೇಕೆಂಬುದು ಜನರ ಆಗ್ರಹವಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವ ಕಾರಣ ರೋಗಿಗಳಿಗೆ ಅನಾನುಕೂಲವಾಗಿದೆ, ಹೆಚ್ಚಿನ ಚಿಕಿತ್ಸೆಗೆ ಪಕ್ಕದ ತಾಲ್ಲೂಕಿನ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗೆ ತೆರಳಬೇಕಿದೆ. ಎಲ್ಲಾ ರೀತಿಯ ತಪಾಸಣೆಯನ್ನು ಆಸ್ಪತ್ರೆಯಲ್ಲೇ ಮಾಡುವ ವ್ಯವಸ್ಥೆ ಜಾರಿ ಆಗಬೇಕಿದೆ. ಕ್ಯಾಂಟೀನ್ ಸಹ ತೆರೆಯಬೇಕಿದೆ ಎಂದು ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನವೀನ್ ಹುಲ್ಲತ್ತಿ ಒತ್ತಾಯಿಸಿದರು.