
ದಾವಣಗೆರೆ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಬಯಲಿನಲ್ಲಿಯೇ ಆರಂಭವಾಯಿತು. ಗೋಪ್ಯತೆ ಕಾಪಾಡಿಕೊಳ್ಳಬೇಕಿದ್ದ ಮೌಲ್ಯಮಾಪನ ಕಾರ್ಯ ಸಮನ್ವಯತೆಯ ಕೊರತೆಯ ಕಾರಣಕ್ಕೆ ಕಟ್ಟಡದ ಕಾರಿಡಾರಿನಲ್ಲಿ ನಡೆಯಿತು.

j3tvkannada
ಏ.16ರಿಂದ ಇದೇ ಕಾಲೇಜಿನಲ್ಲಿ ಸಿ.ಇ.ಟಿ ಪರೀಕ್ಷೆ ನಡೆಯುತ್ತಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿತು. ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಟೇಬಲ್ಗಳ ಮೇಲೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಿಬ್ಬಂದಿ ಕೊಠಡಿಗಳಿಗೆ ಧಾವಿಸಿದ್ದರಿಂದ ಮೌಲ್ಯಮಾಪನ ನಡೆಸುತ್ತಿದ್ದ ಸಿಬ್ಬಂದಿಗೆ ಕಾರಿಡಾರಿಗೆ ತೆರಳಬೇಕಾಯಿತು.
ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯ ವಿಜ್ಞಾನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರವಾಗಿ ಮೋತಿ ವೀರಪ್ಪ ಕಾಲೇಜಿನ ಪ್ರೌಢಶಾಲಾ ವಿಭಾಗವನ್ನು ನಿಗದಿಪಡಿಸಲಾಗಿತ್ತು. ಕಾಲೇಜಿನ 5 ಕೊಠಡಿಗಳನ್ನು ಇದಕ್ಕೆ ಮೀಸಲಿಡಲಾಗಿತ್ತು. ಮೌಲ್ಯಮಾಪನ ಕಾರ್ಯಕ್ಕೆ ಹಾಜರಾದ ಶಿಕ್ಷಕರಿಗೆ ಉತ್ತರ ಪತ್ರಿಕೆಗಳನ್ನು ವಿತರಿಸಲಾಗಿತ್ತು. ಗೊಂದಲಕ್ಕೆ ಒಳಗಾದ ಶಿಕ್ಷಕರು ಅಸಮಾಧಾನ ಹೊರ ಹಾಕಿ ಕೊಠಡಿಯಿಂದ ಹೊರ ಬಂದು ಮೌಲ್ಯಮಾಪನ ಕಾರ್ಯ ಮುಂದುವರಿಸಿದರು.
ಎಸ್.ಎಸ್.ಎಲ್.ಸಿ ಮೌಲ್ಯಮಾಪನ ಕಾರ್ಯ ಆರಂಭವಾಗಿದೆ. ನಿಯೋಜನೆಗೊಂಡ ಶಿಕ್ಷಕರು ಕೇಂದ್ರಗಳಿಗೆ ಹಾಜರಾಗಿದ್ದಾರೆ. ಸಿ.ಇ.ಟಿ ನಡೆಯುವ ಕೇಂದ್ರಗಳಲ್ಲಿ ಏ.16 ಮತ್ತು 17ರಂದು ಮೌಲ್ಯಮಾಪನ ಇರುವುದಿಲ್ಲ. ಮೋತಿ ವೀರಪ್ಪ ಕಾಲೇಜಿನ ಬಯಲಲ್ಲಿ ಮೌಲ್ಯಮಾಪನ ಮಾಡಿರುವುದು ಗಮನಕ್ಕೆ ಬಂದಿಲ್ಲ ಎಂದು ಡಿ.ಡಿ.ಪಿ.ಐ ಜಿ.ಕೊಟ್ರೇಶ್ ತಿಳಿಸಿದರು.