

j3tvkannada
ಮಧ್ಯರಾತ್ರಿಯಿಂದಲೇ ಸರಕುಗಳನ್ನು ಲಾರಿಗೆ ತುಂಬಿಸದೆ ಚಾಲಕರು ಮುಷ್ಕರದಲ್ಲಿ ಭಾಗಿಯಾದರು. ಬನ್ನಿಮಂಟಪ, ಮೇಟಗಳ್ಳಿ ಹಾಗೂ ಬಂಡಿಪಾಳ್ಯದ ಗೂಡ್ಸ್ ಟರ್ಮಿನಲ್ಗಳಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಒಕ್ಕೂಟದ ಸದಸ್ಯರು ಪ್ರತಿಭಟನಾ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಸುಮಾರು 3 ಸಾವಿರ ಲಾರಿಗಳು ರಸ್ತೆಗಿಳಿಯಲಿಲ್ಲ. ವಿವಿಧೆಡೆಗಳಿಂದ ರೈಲಿನಲ್ಲಿ ಬಂದ ಸರಕುಗಳನ್ನು ಕೆಳಗಿಳಿಸಲು ಸರಕು ಸಾಗಾಟದಾರರು ನಿರಾಕರಿಸಿದ್ದರಿಂದ 400ಕ್ಕೂ ಹೆಚ್ಚು ಲಾರಿಗಳು ಮೇಟಗಳ್ಳಿಯ ನೂತನ ಗೂಡ್ಸ್ ಟರ್ಮಿನಲ್ನಲ್ಲಿ ನಿಂತಲ್ಲೇ ಇದ್ದವು. ಇದರಿಂದ ಹಣ್ಣು, ತರಕಾರಿ, ಎಲ್ಪಿಜಿ ಸಿಲಿಂಡರ್, ಕಟ್ಟಡ ಸಾಮಗ್ರಿ, ಅಗತ್ಯ ವಸ್ತುಗಳು ಸೇರಿದಂತೆ ಸರಕು, ಸಾಗಣೆಯಲ್ಲಿ ವ್ಯತ್ಯಯವಾಯಿತು.
ಮುಷ್ಕರದ ಹಿನ್ನೆಲೆಯಲ್ಲಿ ಮೈಸೂರು ಲಾರಿ ಮಾಲೀಕರು ಮತ್ತು ಚಾಲಕರ ಒಕ್ಕೂಟದಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಒಕ್ಕೂಟದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಮುಷ್ಕರದಲ್ಲಿ ಭಾಗವಹಿಸಿದ ಲಾರಿ ಮಾಲೀಕರು, ಚಾಲಕರು ಸರ್ಕಾರ ನಡೆ ಖಂಡಿಸಿ ಘೋಷಣೆಗಳನ್ನು ಕೂಗಿದರು. 6 ತಿಂಗಳಲ್ಲಿ ರಾಜ್ಯ ಸರ್ಕಾರ 2 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಹಾಗೂ ಟೋಲ್ ದರ ಇಳಿಕೆ ಮಾಡಲು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರವರೆಗೆ ಗಡುವು ಕೊಟ್ಟಿದ್ದರು. ಆದರೆ ಅವರು ಸ್ಪಂದಿಸದ ಪರಿಣಾಮ, ಮಂಗಳವಾರದಿಂದ ನಮ್ಮ ಬೇಡಿಕೆ ಈಡೇರಿಸುವರೆಗೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂದರು.