
ಚಿಕ್ಕಬಳ್ಳಾಪುರ : ಸರಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಬಹುತೇಕ ಆಸ್ಪತ್ರೆಗಳಲ್ಲಿ ಶಿಸ್ತು, ಸ್ವಚ್ಛತೆ ಮರೀಚಿಕೆ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲೂ ಸ್ವಚ್ಛತೆ, ಶಿಸ್ತು, ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಆಸ್ಪತ್ರೆ ಸಿಬ್ಬಂದಿಗೆ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಸಹಕಾರದೊಂದಿಗೆ ಪ್ರಾಯೋಗಿಕವಾಗಿ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಸಮವಸ್ತ್ರ ನೀಡಲಾಗಿದೆ. ವೈದ್ಯರು, ದಾದಿಯರು, ಪ್ರಯೋಗಾಲಯ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಹೀಗೆ ಎಲ್ಲರಿಗೂ ಪ್ರತ್ಯೇಕ ಬಣ್ಣಗಳ ಸಮವಸ್ತ್ರ ನೀಡಲಾಗಿದ್ದು, ಕಡ್ಡಾಯವಾಗಿ ಧರಿಸಿ ಆಸ್ಪತ್ರೆಗೆ ಬರಲು ಸೂಚನೆ ನೀಡಲಾಗಿದೆ. ಇತ್ತೀಚೆಗೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿಈ ಕುರಿತು ಚರ್ಚೆಯಾಗಿದ್ದು, ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಾನೇ ಸಮವಸ್ತ್ರ ಕೊಡಿಸುವ ಭರವಸೆ ನೀಡಿದ್ದು ಅದರಂತೆ ಎಲ್ಲ ಸಿಬ್ಬಂದಿಗೂ ನೀಡಲಾಗಿದೆ. ಈಗ ಆಸ್ಪತ್ರೆಗೆ ಪ್ರತ್ಯೇಕ ಬಣ್ಣದ ಸಮವಸ್ತ್ರ ತೊಟ್ಟು ಸಿಬ್ಬಂದಿ ಆಗಮಿಸುತ್ತಿದ್ದು, ಆಸ್ಪತ್ರೆಯಲ್ಲಿ ಹೊಸತನದಿಂದ ಕೂಡಿದೆ. ಈ ಮೂಲಕ ಶಿಸ್ತು, ಸ್ವಚ್ಛತೆ ಹಾಗೂ ರೋಗಿಗಳಿಗೂ ಸಾಕಷ್ಟು ಅನುಕೂಲವಾಗುತ್ತಿದೆ.

j3tvkannada
ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಯಲ್ಲಿ ಯಾವುದೇ ಸಮವಸ್ತ್ರ ಇರಲ್ಲ. ಹೀಗಾಗಿ ಯಾರು ವೈದ್ಯ, ಯಾರು ನರ್ಸ್, ಸ್ವಚ್ಛತಾ ಸಿಬ್ಬಂದಿ. ಈಗ ಗೊಂದಲ ಇದ್ದಿದ್ದೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲವೂ ಕಟ್ಟುನಿಟ್ಟಾಗಿರುತ್ತದೆ. ಸ್ವಚ್ಛತೆ ಮತ್ತು ಶಿಸ್ತಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗಳು ಕೂಡಾ ರೋಗಿಗಳ ಸ್ನೇಹಿಯಾಗಿವೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ. ಹೀಗಾಗಿ ಸಾಕಷ್ಟು ಗೊಂದಲಗಳು ಇವೆ. ಸರಕಾರಿ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೂ 3 ಜತೆ ಸಮವಸ್ತ್ರಗಳನ್ನು ವಿತರಿಸಲಾಗಿದೆ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುತ್ತದೆ. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಪ್ರತ್ಯೇಕವಾಗಿ ಸಮವಸ್ತ್ರ ಧರಿಸಿ ಸ್ವಚ್ಛಗೊಳಿಸಿಕೊಂಡರೆ ಸೋಂಕು ತಟ್ಟುವ ಅಪಾಯವೂ ಇರಲ್ಲ.

j3tvkannada
ಇನ್ನೊಂದೆಡೆ ಆಸ್ಪತ್ರೆಯಲ್ಲಿನ ರೋಗಿಗಳು ಕೂಡಾ ಸಮವಸ್ತ್ರ ಆಧರಿಸಿ ಯಾರಿವರು ಎಂಬುದನ್ನು ಗುರುತು ಹಿಡಿಯಲು ಸಾಧ್ಯವಾಗುತ್ತದೆ. ಈ ಎಲ್ಲ ಗೊಂದಲಗಳಿಗೆ ಮುಕ್ತಿ ಹಾಡಲೆಂದೇ ಸರಕಾರಿ ಆಸ್ಪತ್ರೆಗಳಲ್ಲಿ ಸಮವಸ್ತ್ರ ಪರಿಚಯಿಸುವ ಯತ್ನಕ್ಕೆ ಚಿಂತಾಮಣಿ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಎಲ್ಲರಿಗೂ ಸಮವಸ್ತ್ರ ನೀಡಲಾಗಿದ್ದು, ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಲಾಗಿದೆ. ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಈ ವಿನೂತನ ಪ್ರಯೋಗಕ್ಕೆ ಚಿಂತಾಮಣಿ ಸರಕಾರಿ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ. ಜಿಲ್ಲಾಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಇದೇ ರೀತಿ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜಾರಿಗೆ ತರುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದ್ದು, ಪರಿಶೀಲಿಸುವ ಭರವಸೆ ನೀಡಿದ್ದಾರೆ. ಸದ್ಯ ಚಿಂತಾಮಣಿ ಸರಕಾರಿ ಆಸ್ಪತ್ರೆಯಲ್ಲಿ ಈ ಪ್ರಾಯೋಗಿಕ ಕ್ರಮವನ್ನು ಜಾರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ವಿಸ್ತರಿಸುವ ಸಾಧ್ಯತೆಯೂ ಇದೆ.
ಚಿಂತಾಮಣಿ ಸರಕಾರಿ ಆಸ್ಪತ್ರೆಯ ಸಭೆಯಲ್ಲಿ ಚರ್ಚೆಯಾದಂತೆ ಜಿಲ್ಲಾಉಸ್ತುವಾರಿ ಸಚಿವರೇ ವೈದ್ಯರು, ದಾದಿಯರು ಹಾಗೂ ಎಲ್ಲ ಸಿಬ್ಬಂದಿಗೂ ಪ್ರತ್ಯೇಕ 3 ಜೊತೆ ಸಮವಸ್ತ್ರಗಳನ್ನು ವಿತರಿಸಿದ್ದಾರೆ. ಶಿಸ್ತು, ಸ್ವಚ್ಛತೆ ಕಾಪಾಡಲು ಹಾಗೂ ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಇದನ್ನು ಪಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದಿದ್ದಾರೆ ಡಾ.ಮಹೇಶ್ಕುಮಾರ್, ಜಿಲ್ಲಾಆರೋಗ್ಯಾಧಿಕಾರಿ. ಸರಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಇಲ್ಲ, ಶಿಸ್ತಿಲ್ಲ ಎಂಬ ಅಪವಾದ ಇದೆ. ಆದರೆ ನಮ್ಮ ಸರಕಾರಿ ಆಸ್ಪತ್ರೆಗಳಲ್ಲೂ ಶಿಸ್ತು, ಸ್ವಚ್ಛತೆ ಕಾಪಾಡಬೇಕು ಎಂಬ ದೃಷ್ಟಿಯಿಂದ ನಮ್ಮ ತಾಲೂಕಿನ ಸರಕಾರಿ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೂ ಪ್ರತ್ಯೇಕವಾಗಿ ಸಮವಸ್ತ್ರಗಳನ್ನು ವಿತರಿಸಲಾಗಿದೆ. ಖಾಸಗಿ ಆಸ್ಪತ್ರೆಗಳಂತೆ ನಮ್ಮ ಸರಕಾರಿ ಆಸ್ಪತ್ರೆಗಳಲ್ಲೂ ಶಿಸ್ತು, ಸ್ವಚ್ಛತೆ ಹಾಗೂ ರೋಗಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಎಲ್ಲರಿಗೂ ಸಮವಸ್ತ್ರಗಳನ್ನು ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಜಾರಿಗೆ ತಂದರೆ ಅನುಕೂಲ ಎಂದಿದ್ದಾರೆ ಡಾ.ಎಂ.ಸಿ.ಸುಧಾಕರ್, ಜಿಲ್ಲಾಉಸ್ತುವಾರಿ ಸಚಿವ.