
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಭಾನುವಾರ ಕಾವೇರಿ ನದಿಗೆ ಬಿದ್ದು ಬಾಲಕ ಮೃತಪಟ್ಟಿದ್ದು, ಸೋಮವಾರ ಮೃತದೇಹ ಪತ್ತೆಯಾಗಿದೆ.

j3tvkannada
ಮಂಡ್ಯ ತಾಲ್ಲೂಕು ಕಾಡುಕೊತ್ತನಹಳ್ಳಿ ಗ್ರಾಮದ ಸತೀಶ್ ಮತ್ತು ಅನಿತಾ ದಂಪತಿ ಪುತ್ರ ತರುಣ್ ಅಲಿಯಾಸ್ ಮಾದೇಶ್ (5) ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಸೋಮವಾರ ಬೆಳಿಗ್ಗೆ ನದಿಯಿಂದ ಮೇಲೆತ್ತಿದರು.
ಯುಗಾದಿ ಹಬ್ಬಕ್ಕೆಂದು ಅನಿತಾ ತನ್ನ ಪುತ್ರ ತರುಣ್ ಜತೆ ತವರು ಮನೆ ಮಹದೇವಪುರಕ್ಕೆ ಬಂದಿದ್ದರು. ಅನಿತಾ ಅವರ ತಂದೆ ತಾತಪ್ಪ ಅವರು ತಮ್ಮ ಮೊಮ್ಮಗನನ್ನು ಬಹಿರ್ದೆಸೆಗೆಂದು ನದಿಯ ಕಡೆಗೆ ಕರೆದೊಯ್ದಿದ್ದರು. ನದಿಯ ದಡದಲ್ಲಿ ಕೂರಿಸಿ ತಾವೂ ಬಹಿರ್ದೆಸೆಗೆ ತೆರಳಿದ್ದರು. ಕೆಲ ನಿಮಿಷಗಳ ಬಳಿಕ ಬಂದಾಗ ತರುಣ್ ನಾಪತ್ತೆಯಾಗಿದ್ದ. ಶೋಧ ನಡೆಸಿದ ಬಳಿಕ ತರುಣ್ ನದಿಗೆ ಬಿದ್ದು ಮೃತಪಟ್ಟಿರುವುದು ತಿಳಿಯಿತು ಎಂದು ಪಿ.ಎಸ್.ಐ. ಎನ್. ವಿನೋದಕುಮಾರ್ ತಿಳಿಸಿದರು.
ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.