ಚಿಕ್ಕಮಂಗಳೂರು: ವರ್ಷಪೂರ್ತಿ ಗರ್ಭಗುಡಿಯಲ್ಲಿ ಭಕ್ತರಿಗೆ ದರ್ಶನ ನೀಡುವ ಆದಿಶಕ್ತಿ ಅನ್ನಪೂರ್ಣೇಶ್ವರಿ ವರ್ಷದಲ್ಲೊಮ್ಮೆ ಭಕ್ತರಿರುವ ಜಾಗಕ್ಕೆ ಬಂದು ಭಕ್ತರನ್ನು ನೋಡಿ ಅನುಗ್ರಹಿಸುತ್ತಾಳೆ ಎಂಬ ನಂಬಿಕೆಯಂತೆ ಇಂದು ಮಹಾರಥವನ್ನು ಏರಿ ದರ್ಶನ ಭಾಗ್ಯ ನೀಡಿದ್ದಾಳೆ. ಸಾವಿರಾರು ಭಕ್ತರು ರಥವನ್ನ ಎಳೆಯುವ ಮೂಲಕ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ರಾಜ್ಯ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಅನ್ನಪೂರ್ಣೇಶ್ವರಿ ಮಹಾರಥೋತ್ಸವದಲ್ಲಿ ಭಾಗಿಯಾದರು.

ಕಾಫಿ ನಾಡಿನ ಅದಿಶಕ್ತಿ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕಾಗಿ ರಾಜ್ಯ ಸೇರಿದಂತೆ ದೇಶ ವಿದೇಶಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂದು ದೇವಿಗೆ ಬ್ರಹ್ಮ ರಥೋತ್ಸವ ನಡೆಯಿತು. ಮುಂಜಾನೆಯಿಂದಲೂ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದ ಮೇಲೆ ಕುಳ್ಳಿರಿಸಲಾಯಿತು.
ಉತ್ಸವ ಮೂರ್ತಿಯನ್ನ ರಥದ ಮೇಲೆ ಕುಳ್ಳಿರಿಸುತ್ತಿದ್ದಂತೆ ಅನ್ನಪೂರ್ಣೇಶ್ವರಿ ಅಮ್ಮನಿಗೆ ಜೈಕಾರದ ಘೋಷಣೆಗಳನ್ನು ಹಾಕಲಾಯಿತು. ಕಾಫಿ,ಏಲಕ್ಕಿ, ಕಾಳು ಮೆಣಸು, ಅಡಿಕೆಯನ್ನು ದೇವರಿಗೆ ಭಕ್ತರು ಅರ್ಪಿಸಿದರು. ಬಳಿಕ ವಾಧ್ಯಘೋಷ, ಡೋಲುಗಳ ನಾದ, ವೀರಗಾಸೆ ಕುಣಿತದೊಂದಿಗೆ ರಥೋತ್ಸವ ನಡೆಯಿತು. ಭಕ್ತರು ರಥದ ಮುಂದೆ ಚಾಮರಗಳನ್ನ ಹಿಡಿದು ಸಾಗಿದರು. ದೇವಾಲಯದ ಮುಂಭಾಗದಲ್ಲಿ ಬ್ರಹ್ಮ ರಥವನ್ನ ಭಕ್ತರು ಎಳೆದರು. ಹೊರನಾಡು ಅನ್ನಪೂರ್ಣೇಶ್ವರಿಯ ವಾರ್ಷಿಕ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ರಾಜ್ಯ ಸೇರಿದಂತೆ ಹೊರನಾಡಿನ ಸುತ್ತಮುತ್ತಲ ಭಕ್ತರು ಭಾಗಿಯಾಗಿ ಮಹಾರಥೋತ್ಸವವನ್ನು ಸಂಪನ್ನಗೊಳಿಸಿದರು.