
ರಾಯಚೂರು: ಇತ್ತೀಚೆಗೆ ಹಲವಾರು ಕಡೆಗಳಲ್ಲಿ ಬೆಂಕಿ ಅವಘಡಗಳು ಸಂಭವಿಸುತ್ತಿದ್ದು, ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಸ್ವಲ್ಪ ಯಾಮಾರಿದರೂ ಅವಘಡಗಳು ಸಂಭವಿಸುತ್ತವೆ. ನಾವು ಎಚ್ಚರದಲ್ಲಿದ್ದಷ್ಟೂ ನಮಗೇ ಒಳ್ಳೆಯದು. ಇದೀಗ ರಾಯಚೂರಿನ ಆರ್.ಟಿ.ಪಿ.ಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಆರ್.ಟಿ.ಪಿ.ಎಸ್ ಘಟಕವು ರಾಯಚೂರಿನ ಶಕ್ತಿನಗರದಲ್ಲಿದೆ.

j3tvkannada
ಈ ಘಟಕದ ಟಿ.ಸಿ ಹಾಗೂ ಜನರೇಟರ್ ಸುಟ್ಟು ಭಸ್ಮವಾಗಿದೆ. 210 ಮೆಗಾ ವ್ಯಾಟ್ ಉತ್ಪಾದನೆ ಮಾಡುವ ನಾಲ್ಕನೇ ಘಟಕ ಇದಾಗಿದೆ. ತಾಂತ್ರಿಕ ದೋಷದ ಹಿನ್ನೆಲೆ ಕಳೆದ 3 ತಿಂಗಳುಗಳಿಂದ ಘಟಕವನ್ನು ಮುಚ್ಚಲಾಗಿತ್ತು. ಏ.13ರ ತಡರಾತ್ರಿ ನಾಲ್ಕನೇ ಘಟಕದ ಬಾಯ್ಲರ್ ಟ್ಯೂಬ್ ಬದಲಿಸಿ, ರೀಸ್ಟಾರ್ಟ್ ಮಾಡುವ ವೇಳೆ ಅಗ್ನಿ ಅವಘಡ ಸಂಭವಿಸಿದೆ.
ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಶಕ್ತಿ ನಗರದ ಆರ್.ಟಿ.ಪಿ.ಎಸ್ 7ನೇ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಿಂದ 7ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.