
ತುಮಕೂರು : ಈಗ ಯಾವುದೇ ಊರಿಗೆ ಹೋದರೂ ಗುಂಡಿ ಬಿದ್ದ ರಸ್ತೆಗಳೇ ಕಾಣಿಸುತ್ತಿವೆ. ಅದರಲ್ಲೂ ನಗರಗಳಲ್ಲಿನ ರಸ್ತೆಗಳ ಪರಿಸ್ಥಿತಿ ಹೇಳತೀರದ್ದಾಗಿದೆ. ಪ್ರತಿ ವರ್ಷವೂ ರಸ್ತೆಯನ್ನು ದುರಸ್ತಿಗೊಳಿಸಿ ಎಂಬ ಕೂಗುಗಳು ಕೇಳಿ ಬರುತ್ತಲೇ ಇವೆ. ಅದರಲ್ಲೂ ಮುಂದೆ ಮಳೆಗಾಲ ಬರುವುದರಿಂದ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸವನ್ನು ಈಗಿನಿಂದಲೇ ಆರಂಭಿಸಬೇಕಿದೆ. ಆದರೆ ಸದ್ಯಕ್ಕೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದರಿಂದ ಗುಂಡಿ ಬಿದ್ದ ರಸ್ತೆಯಲ್ಲಿಯೇ ಓಡಾಡಬೇಕಾಗಿದೆ. ಹೀಗಾಗಿ ವಾಹನದಲ್ಲಿ ತೆರಳುವವರು ದೇವರ ಮೇಲೆ ಭಾರ ಹಾಕಿ ಮುನ್ನಡೆಯಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರಸ್ತೆಗಳನ್ನಂತು ದುರಸ್ತಿ ಮಾಡಲ್ಲ ಹೀಗಿರುವಾಗ ಸಾರ್ವಜನಿಕರು ತಮ್ಮ ಪ್ರಾಣ ಕಾಪಾಡುವಂತೆ ರಸ್ತೆಯಲ್ಲಿರುವ ಗುಂಡಿಗಳಿಗೆ ಪೂಜೆ ಮಾಡಿ ಪ್ರಾರ್ಥಿಸುವಂತಾಗಿದೆ.
ನಮ್ಮನ್ನು ಆಳುವವರಂತು ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಹೀಗಾಗಿ ನಮ್ಮ ರಕ್ಷಣೆಯನ್ನು ನೀನೇ ಮಾಡು ಎಂದು ಕೈಮುಗಿಯುವಂತಾಗಿದ್ದು, ಸಾರ್ವಜನಿಕರು ವಿಡಂಬನೆ ಮಾಡುವ ಮೂಲಕ ಸರ್ಕಾರಕ್ಕೆ ತಮ್ಮ ಕೂಗನ್ನು ತಲುಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ರೀತಿಯ ವಿನೂತನ ಪ್ರತಿಭಟನೆ ನಡೆದಿರುವುದು ತುಮಕೂರಿನಲ್ಲಿ.

j3tvkannada
ತುಮಕೂರು ನಗರದ ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಬೇಸತ್ತ ನಗರದ ಗೋಕುಲ, ಬಡ್ಡಿಹಳ್ಳಿ ಬಡಾವಣೆ ನಾಗರೀಕರು ರಸ್ತೆ ಗುಂಡಿಗಳಿಗೆ ಪೂಜೆ ಸಲ್ಲಿಸಿ ಗುಂಡಿಗಳನ್ನು ಮುಚ್ಚಲು ನಗರಪಾಲಿಕೆಯ ಗಮನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿ ವಿನೂತನ ಪ್ರತಿಭಟನೆ ನಡೆಸಿರುವುದು ಗಮನಾರ್ಹವಾಗಿದೆ. ಇಲ್ಲಿನ ನಿವಾಸಿ ಹೈಕೋರ್ಟ್ ನ್ಯಾಯವಾದಿ ಎಲ್.ರಮೇಶ್ ನಾಯಕ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸ್ಥಳೀಯ ನಾಗರೀಕರು ಇಲ್ಲಿನ ರಸ್ತೆ ಗುಂಡಿಗಳಿಗೆ ಪೂಜೆ ಮಾಡಿ, ಅಪಾಯಕಾರಿ ಗುಂಡಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ನ್ಯಾಯವಾದಿ ಎಲ್.ರಮೇಶ್ ನಾಯಕ್ ಅವರು ಈ ಹಿಂದೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನಗರಾಭಿವೃದ್ಧಿ ಇಲಾಖೆ ಹಾಗೂ ನಗರಪಾಲಿಕೆಗೆ ನೋಟೀಸ್ ನೀಡಿದ್ದ ಹೈಕೋರ್ಟ್, ರಸ್ತೆಯಲ್ಲಿನ ಗುಂಡಿ ಮುಚ್ಚಲು ಕ್ರಮ ತೆಗೆದುಕೊಂಡು ವರದಿ ನೀಡುವಂತೆ ಸೂಚಿಸಿ ಎರಡು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ ನಗರದ ಹಲವಾರು ಬಡಾವಣೆಗಳ ರಸ್ತೆಗಳಲ್ಲಿ ಸಾಕಷ್ಟು ಗುಂಡಿಗಳಿದ್ದು ಪಾಲಿಕೆ ಮುಚ್ಚುವ ಪ್ರಯತ್ನ ಮಾಡಿಲ್ಲ ಎಂದು ಪ್ರತಿಭಟನೆಯಲ್ಲಿ ರಮೇಶ್ ನಾಯಕ್ ಹೇಳಿದ್ದಾರೆ.

j3tvkannada
ನಗರದಲ್ಲಿ ರಸ್ತೆ ಗುಂಡಿಗಳಿದ್ದರೆ 9449872599ಗೆ ವಾಟ್ಸಾಪ್ ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ನಗರಪಾಲಿಕೆ ಹೇಳಿತ್ತು. ಸಾಕಷ್ಟು ಗುಂಡಿಗಳ ಬಗ್ಗೆ ಫೋಟೊ ಸಮೇತ ವಾಟ್ಸಾಪ್ ಮಾಡಿದ್ದರೂ ಪಾಲಿಕೆ ಗುಂಡಿ ಮುಚ್ಚುವ ಕಾರ್ಯ ಮಾಡಿಲ್ಲ. ಹೀಗಾಗಿ ಗುಂಡಿ ಪೂಜೆ ಮೂಲಕ ಹೋರಾಟ ಮಾಡಿ, ಜನರಲ್ಲಿ ಅರಿವು ಮೂಡಿಸಿ, ಪಾಲಿಕೆಯ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ನಗರದ ನಾಗರೀಕರು ತಮ್ಮ ಬಡಾವಣೆಯ ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದಲ್ಲಿ ನಗರಪಾಲಿಕೆಯ ಗಮನಕ್ಕೆ ತರಲು 9449872599ಗೆ ವಾಟ್ಸಾಪ್ ಮಾಡಬಹುದು. ಇಂತಹದೊಂದು ಜಾಗೃತಿ ಜನರಲ್ಲಿ ಮೂಡಿದರೆ ನಗರದ ರಸ್ತೆಗಳನ್ನು ಗುಂಡಿ ಮುಕ್ತ ಮಾಡಲು ಸಾಧ್ಯವಾಗುತ್ತದೆ ಎಂದು ರಮೇಶ್ ನಾಯಕ್ ಹೇಳಿದ್ದಾರೆ ಅಲ್ಲದೇ, ಗುಂಡಿ ಪೂಜೆ ನಂತರ ಮನೆಮನೆಗೆ ತೆರಳಿದ ಮುಖಂಡರು ಕರಪತ್ರ ವಿತರಣೆ ಮಾಡಿ ಜನರಲ್ಲಿ ರಸ್ತೆ ಗುಂಡಿ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಅರಿವು ಮೂಡಿಸಿದರು. ಈ ಪ್ರತಿಭಟನೆಯಲ್ಲಿ ಮೈದಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ರವೀಂದ್ರ, ಸದಸ್ಯರಾದ ನರಸಿಂಹಮೂರ್ತಿ ಕರೇಕಲ್ಲುಪಾಳ್ಯ, ಸೋಮಣ್ಣ, ಗಂಗಾಧರ ನಾಯಕ್, ಪ್ರಸನ್ನಕುಮಾರ್, ಮುಖಂಡರಾದ ಮಲ್ಲಿಕಾರ್ಜುನಯ್ಯ, ಕೆ.ಎನ್.ಪುಟ್ಟರಾಜು, ಹೆಚ್.ಆರ್.ನಾಗರಾಜು, ಅರೆಗುಜ್ಜನಹಳ್ಳಿ ಮಂಜುನಾಥ್, ಮುರಳಿ ನಾಯಕ್, ನರಸಿಂಹರಾಜು, ಶ್ರೀರಂಗಪ್ಪ, ಗೋವಿಂದರಾಜು, ಲಕ್ಷ್ಮೀಕಾಂತರಾಜು, ಅಶ್ವತ್ಥ್, ಮಂಜುನಾಥ್, ರಮೇಶ್, ಪೃಥ್ವಿಜೆ.ಸಾಗರ್, ನವೀನ್, ಆನಂದ್ ಶಿವರಾಜು, ಹನುಮಂತರಾಜು ಮೊದಲಾದವರು ಭಾಗವಹಿಸಿದ್ದರು.