
ಪೂರ್ವ ಭಾಗದ 15ಕ್ಕೂ ಹೆಚ್ಚು ಗ್ರಾಮಗಳ ಕೃಷಿ ಜಮೀನುಗಳಿಗೆ ನೀರಿನ ಕೊರತೆ ಉಂಟಾಗಿರುವುದಾರಿಂದ ರೈತರಿಗೆ ಆತಂಕ ಸೃಷ್ಟಿಸಿದೆ.

j3tvkannada
ಉತ್ತರ ಕನ್ನಡ :32 ಗ್ರಾಮ ಪಂಚಾಯಿತಿ ಒಳಗೊಂಡ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸದ್ಯ ತೊಂದರೆ ಆಗಿಲ್ಲ. ಈಚೆಗಷ್ಟೆ ಸುರಿದ ಮಳೆಯಿಂದ ಕೆರೆ ಬಾವಿಗಳಲ್ಲಿ ತಕ್ಕಮಟ್ಟಿಗೆ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ, ಬನವಾಸಿ ಹೋಬಳಿಯ ಅಂದಾಜು 1,500 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, ಬಾಳೆ, ಮೆಕ್ಕೆಜೋಳ, ಅನಾನಸ್ ಬೆಳೆಯನ್ನು ಬೆಳೆಯಲಾಗುತ್ತಿದೆ. ಯಥೇಚ್ಛ ನೀರು ಬೇಡುವ ಈ ಬೆಳೆಗಳಿಗೆ ಕೊಳವೆಬಾವಿ ಮೂಲಕ ನೀರು ವಿತರಿಸುವ ಸ್ಥಿತಿ ಉಂಟಾಗಿದೆ. ಕಳೆದ ವರ್ಷದ ಅತಿವೃಷ್ಟಿಯ ಕಾರಣಕ್ಕೆ ನೀರಿನ ಕೊರತೆ ಆಗದು ಎಂದು ರೈತರು ನಂಬಿದ್ದರು. ಆದರೆ ಏರುತ್ತಿರುವ ತಾಪಮಾನ, ಬಿಸಿಲು ಕಾರಣಕ್ಕೆ ಅವರ ನಂಬಿಕೆ ಹುಸಿಯಾಗಿದೆ. ಹೋಬಳಿಯ ಬನವಾಸಿ, ಅಂಡಗಿ, ದಾಸನಕೊಪ್ಪ, ಮಧುರವಳ್ಳಿ, ವದ್ದಲ, ಕಲಕರಡಿ, ಹೊಸನಗರ, ಕತ್ರಿಕೊಪ್ಪ, ಭಾಶಿ ಸೇರಿ ಹಲವು ಗ್ರಾಮಗಳಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ನೀರಿನ ಸಮಸ್ಯೆ ತಲೆದೋರಿದೆ. ಒಣ ಹವೆ ವಾತಾವರಣದ ಬನವಾಸಿ ಹೋಬಳಿಯ ಗ್ರಾಮಗಳಲ್ಲಿ ಭತ್ತ, ಜೋಳ, ಅನಾನಸ್, ಶುಂಠಿ ಉತ್ತಮವಾಗಿ ಬೆಳೆಯುತ್ತವೆ. ಆದರೆ ಇತ್ತೀಚಿನ ವರ್ಷದಲ್ಲಿ ಅಡಿಕೆಗೆ ಬಂದ ಧಾರಣೆಯ ಕಾರಣಕ್ಕೆ ಬಹುತೇಕ ರೈತರು ಈ ಎಲ್ಲ ಬೆಳೆಯ ಕ್ಷೇತ್ರ ಇಳಿಸಿ ಅಲ್ಲಿ ಅಡಿಕೆ ನಾಟಿ ಮಾಡಿದ್ದರು. ಅಡಿಕೆ ತೋಟಕ್ಕೆ ನೀರು ಹಾಯಿಸುವುದು ಸವಾಲಿನ ಕೆಲಸವಾಗಿದೆ. ಇದರ ಜತೆ ಉಳಿದ ಬೆಳೆಗಳಿಗೂ ನೀರು ಸಾಲುತ್ತಿಲ್ಲ ಎನ್ನುತ್ತಾರೆ. ರೈತ ಸೋಮಶೇಖರ. ಅಂತರ್ಜಲ ಇಳಿಕೆಯ ಜತೆ ಈ ಭಾಗದಲ್ಲಿ ವಿದ್ಯುತ್ ವೊಲ್ಟೇಜ್ ಕಡಿತದಿಂದ ಪಂಪ್ ಸೆಟ್ಗಳು ಕೆಲಸ ಮಾಡುತ್ತಿಲ್ಲ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಹಾಯಿಸಲಾಗುತ್ತಿದೆ ಎಂದರು.