
ಸುಂಟಿಕೊಪ್ಪ: ರಕ್ತದಾನ ಮೂಲಕ ಒಂದು ಜೀವ ಬದುಕಿಸಲು ಸಹಾಯ ಮಾಡಬಹುದು ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರ ಮುಖ್ಯಸ್ಥ ಕರುಂಬಯ್ಯ ಹೇಳಿದರು.

j3tvkannada
ಇಲ್ಲಿನ ಹಾರಂಗಿ ರಸ್ತೆಯಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್, ವಿದ್ಯಾರ್ಥಿ ಸಂಘ, ದೈಹಿಕ ಶಿಕ್ಷಣ ವಿಭಾಗ, ಎನ್ಎಸ್ಎಸ್, ಹಳೇ ವಿದ್ಯಾರ್ಥಿಗಳ ಸಂಘ, ಪಿ.ಟಿ.ಎ, ಕುಶಾಲನಗರ ವಾಸವಿ ಯುವಜನ ಚಾರಿಟಬಲ್ ಟ್ರಸ್ಟ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಭಾಗಿತ್ವದಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇದೆ. ಇಂತಹ ಶಿಬಿರದ ಮೂಲಕ ರೋಗಿಗಳ ತುರ್ತು ಚಿಕಿತ್ಸೆಗೆ ಅವಕಾಶವಾಗಲಿದೆ. ಯುವ ಜನರು ಕೆಟ್ಟ ಚಟಗಳಿಗೆ ದಾಸರಾಗದೆ, ಒಳ್ಳೆಯ ಆಹಾರ ಸೇವಿಸಿ ಆರೋಗ್ಯವಂತರಾಗಿ ಇನ್ನೊಂದು ಜೀವ ಉಳಿಸುವ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಕುಶಾಲನಗರ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ಕೆ.ಸತೀಶ್ ಮಾತನಾಡಿ, ರಕ್ತದಾನ ಮಹಾದಾನ. ಆರೋಗ್ಯವಂತ ವ್ಯಕ್ತಿಯು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹದು. ಕೆಲವರಿಗೆ ರಕ್ತದಾನ ಮಾಡುವ ವಿಚಾರದಲ್ಲಿ ಗೊಂದಲ ಮತ್ತು ಭಯವಿದೆ. ರಕ್ತ ನೀಡಿದ ಕೆಲವೇ ದಿನದಲ್ಲಿ ಪರಿಶುದ್ಧವಾದ ರಕ್ತಸೇರ್ಪಡೆಗೊಳ್ಳಲಿದೆ. ಮದ್ಯಪಾನ, ಧೂಮಪಾನದಿಂದ ದೂರವಿದ್ದು, ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.