
ಗದಗ : ಬೋರ್ವೆಲ್ ಪಂಪ್ಸೆಟ್ ರಿಪೇರಿ ಹಾಗೂ ವೈಂಡಿಂಗ್ ವೃತ್ತಿಯನ್ನು ಮುಖ್ಯ ಕಸುಬನ್ನಾಗಿರಿಸಿಕೊಂಡ ರೈತ ಗುಡ್ಡಪ್ಪ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು, ಸಮಗ್ರ ಕೃಷಿಯತ್ತ ಸಾಗುತ್ತಿರುವುದು ಇತರರಿಗೆ ಮಾದರಿಯಾಗಿದೆ. ತಾಲ್ಲೂಕಿನ ಹೊಳೆಇಟಗಿ ಗ್ರಾಮದ ರೈತ ಗುಡ್ಡಪ್ಪ ಅಂಬಿಗೇರ ಒಂದು ಎಕರೆ ಜಮೀನಿನಲ್ಲಿ ವಿವಿಧ ತಳಿಯ ಸಸಿಗಳನ್ನು ನಾಟಿ ಮಾಡಿದ್ದು, ಅವುಗಳನ್ನು ಪೋಷಿಸುವ ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಆಧುನಿಕ ಜೀವನಶೈಲಿಗೆ ಜನರು ಮಾರುಹೋಗುತ್ತಿರುವ ಪ್ರಸ್ತುತ ದಿನಗಳಲ್ಲಿ ಇವರು ಮಣ್ಣನ್ನೇ ನಂಬಿ ಬಂಡವಾಳ ಹಾಕಿ ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಅಡಿಕೆ ಸಸಿಯನ್ನು ಮುಖ್ಯ ಬೆಳೆಯನ್ನಾಗಿಸಿಕೊಂಡ ರೈತ ಗುಡ್ಡಪ್ಪ ಸುಮಾರು 450 ಸಸಿಗಳನ್ನು ನಾಟಿ ಮಾಡಿದ್ದಾರೆ. ಸ್ವಲ್ಪ ಜಾಗವನ್ನೂ ವ್ಯರ್ಥ ಮಾಡದ ಅವರು ಸಸಿಯಿಂದ ಸಸಿಗೆ ನಿಗದಿತ ಅಂತರ ಬಿಟ್ಟು ಆ ಸ್ಥಳದಲ್ಲಿ ಮತ್ತೆ ಬೇರೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ನಾಟಿ ಮಾಡಿದ ಅಡಿಕೆ ಸಸಿಗಳು ಪ್ರಸ್ತುತ ವರ್ಷ ಹೊಂಬಾಳೆ ಬಿಟ್ಟಿದ್ದು, ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಕೇವಲ ಒಂದು ಎಕರೆ ಜಮೀನಿನಲ್ಲಿ ವಿವಿಧ ಬಗೆಯ ಸಾಕಷ್ಟು ಸಸಿಗಳನ್ನು ನಾಟಿ ಮಾಡಲಾಗಿದ್ದು, ತೋಟದ ಬದುವಿಗೆ ಹೊಂದಿಕೊಂಡಂತೆ ಸುತ್ತಲೂ 32 ತೆಂಗಿನ ಸಸಿಗಳನ್ನು ಹಚ್ಚಿದ್ದಾರೆ. ಅದರಿಂದ ಸುಮಾರು 4 ಅಡಿ ಅಂತರದಲ್ಲಿ 150-200 ಮಹಾಗನಿ ಸಸಿ ನಾಟಿ ಮಾಡಲಾಗಿದೆ. ಎರಡು ತೆಂಗಿನ ಸಸಿಯ ಮಧ್ಯ ಒಂದು ಮಾವು, ಪೇರಲ, ಕಿತ್ತಳೆ, ಚಿಕ್ಕು ಹಾಗೂ ಡ್ರಾಗನ್ ಫೂಟ್ ಸಸಿಗಳನ್ನು ನಾಟಿ ಮಾಡಿದ್ದು, ಫಸಲಿನ ನಿರೀಕ್ಷೆಯಲ್ಲಿದ್ದಾರೆ.

j3tvkannada
ತೋಟದ ಸುತ್ತಲೂ ವಿವಿಧ ತಳಿ ಸಸಿಗಳನ್ನು ನಾಟಿ ಮಾಡಿರುವ ಇವರು ತೋಟದ ಮಧ್ಯೆ ಸುಮಾರು 60 ಸೇಬು ಸಸಿಗಳನ್ನು ನಾಟಿ ಮಾಡಿದ್ದಾರೆ. ಬಿಜಾಪುರದಿಂದ ಸಸಿಗಳನ್ನು ತರಿಸಿದ್ದು, ಚಳಿಗಾಲದಲ್ಲಿ ಹೂ ಬಿಡುತ್ತವೆ. ಸೇಬು ಸಸಿಗೆ ಹೆಚ್ಚಿನ ಬಿಸಿಲು ಬೇಕಾಗಿದ್ದು, ಅಡಿಕೆ ಹಾಗೂ ಮೊದಲ ನಾಟಿ ಮಾಡಿದ್ದ ಬಾಳೆ ಬೆಳೆಯಿಂದ ಬೆಳವಣಿಗೆ ಸ್ವಲ್ಪ ನಿಧಾನವಾಗಿದೆ. ಇದರಿಂದ ಸದ್ಯ ಬಾಳೆಯನ್ನು ಸಂಪೂರ್ಣ ತೆಗೆದುಹಾಕಲಾಗಿದ್ದು, ಸೇಬು ಹಣ್ಣಿನ ಸಸಿಗಳನ್ನು ಪೋಷಿಸಲಾಗುತ್ತಿದೆ. ಪ್ರಸ್ತುತ ಚಳಿಗಾಲದ ಫಸಲನ್ನು ಕಳೆದುಕೊಂಡ ರೈತ ಗುಡ್ಡಪ್ಪ ಅವರು ಮುಂದಿನ ಇಳುವರಿಗಾಗಿ ಕಾಯುತ್ತಿದ್ದಾರೆ. ರಾಸಾಯನಿಕ ಗೊಬ್ಬರದ ಗೋಜಿಗೆ ಹೋಗದ ಗುಡ್ಡಪ್ಪ ಅಪ್ಪಟ ಸಾವಯವ ಕೃಷಿಯನ್ನೆ ಅವಲಂಬಿಸಿದ್ದು, ಗೊಬ್ಬರ ತಯಾರಿಕೆಗೆ ಒಂದು ಉಪಾಯ ಮಾಡಿದ್ದಾರೆ.

j3tvkannada
ಗ್ರಾಮದಲ್ಲಿನ ರೈತರಿಂದ ಅಲಸಂದಿ ಹಾಗೂ ಕಡ್ಲಿ ಹೊಟ್ಟನ್ನು ಕೊಂಡುಕೊಂಡು, ತೋಟದ ತುಂಬೆಲ್ಲಾ ಒಂದು ಇಂಚು ಜಾಗ ಬಿಡದ ಹಾಗೆ ಹರಡುತ್ತಾರೆ. ನಂತರ ಅದರ ಮೇಲೆ ಸಗಣಿ ಮಿಶ್ರಿತ ಎರೆ ಮಣ್ಣನ್ನು ಹರಡುತ್ತಿದ್ದು, ಇದರಿಂದ ಸಸಿಗಳಿಗೆ ಸಾವಯವ ಗೊಬ್ಬರದ ಕಣಜವನ್ನೇ ಕೊಟ್ಟಂತಾಗುತ್ತದೆ ಎಂಬುದು ಅವರ ಅನುಭವದ ಮಾತಾಗಿದೆ. ಸಸಿಗಳನ್ನು ನಾಟಿ ಮಾಡಿದ ಮೊದಲ ವರ್ಷದಲ್ಲಿ ಸಸಿಗಳ ಮಧ್ಯದಲ್ಲಿ ವಿವಿಧ ಬಗೆಯ ಬೆಳೆಯನ್ನು ಬೆಳೆದು ಒಂದು ಬೆಳೆಗೆ ಸುಮಾರು ₹70 ಸಾವಿರ ಲಾಭ ಗಳಿಸಿದ್ದಾರೆ. ಹೀಗೆ ಸುಮಾರು ಬೆಳೆಗಳ ಲಾಭವನ್ನು ತೆಗೆದುಕೊಂಡ ರೈತ ಗುಡ್ಡಪ್ಪ ಪ್ರಸ್ತುತ ತೋಟಕ್ಕೆ ಸುಮಾರು ₹4 ಲಕ್ಷದಿಂದ ₹5 ಲಕ್ಷ ಖರ್ಚು ಮಾಡಿದ್ದಾರೆ. ಅಲ್ಲದೇ ₹1.30 ಲಕ್ಷ ಖರ್ಚು ಮಾಡಿ ತೋಟಕ್ಕೆ ಸದೃಢವಾದ ತಂತಿಬೇಲಿ ನಿರ್ಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಸಮಗ್ರ ಬೆಳೆಯ ತೋಟಕ್ಕೆ ಬೇಕಾಗುವ ಎಲ್ಲಾ ಖರ್ಚನ್ನು ರೈತ ಗುಡ್ಡಪ್ಪ ಈಗಾಗಲೇ ವ್ಯಯಿಸಿದ್ದು, ಇನ್ನು ಮುಂದೆ ಆದಾಯದ ನಿರೀಕ್ಷೆಯಲ್ಲಿದ್ದಾರೆ.