
ಬಳ್ಳಾರಿ : ಪಡಿತರ ಚೀಟಿದಾರರು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಸಬೇಕಿದೆ. ಉಚಿತವಾಗಿ ಇದನ್ನು ಮಾಡಿಸಲು ಸರ್ಕಾರ ಅವಕಾಶ ನೀಡಿದೆ. ಅಲ್ಲದೇ ಏಪ್ರಿಲ್ 30ರ ಗಡುವು ಸಹ ನಿಗದಿ ಮಾಡಿದೆ. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಈ ಕುರಿತು ಮತ್ತೊಮ್ಮೆ ಎಲ್ಲಾ ಪಡಿತರ ಚೀಟಿದಾರರಿಗೂ ಮಾಹಿತಿಯನ್ನು ನೀಡಿದೆ. ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಹಂತದಲ್ಲಿ ಆಧಾರ್ ದೃಢೀಕರಣ (ಇ-ಕೆವೈಸಿ) ವನ್ನು ಉಚಿತವಾಗಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕಡ್ಡಾಯವಾಗಿ ಎಲ್ಲರೂ ಇ-ಕೆವೈಸಿ ಮಾಡಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಹೇಳಿದ್ದಾರೆ.

ಪಡಿತರ ಚೀಟಿದಾರರು ಆಧಾರ್ ದೃಢೀಕರಣ (ಇ-ಕೆವೈಸಿ)ವನ್ನು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬೆರಳಚ್ಚು ಮೂಲಕ ತಮ್ಮ ಗುರುತು, ನೋಂದಣಿ ಅಥವಾ ಮರು ನೋಂದಣಿ ಮಾಡಿಸಬಹುದು. ಇ-ಕೆವೈಸಿ ಮಾಡಿಸಲು ಎಲ್ಲರಿಗೂ ಏಪ್ರಿಲ್ 30ರ ತನಕ ಅವಕಾಶವನ್ನು ನೀಡಲಾಗಿದ್ದು, ಇದಕ್ಕೆ ಯಾವುದೇ ಹಣ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇ-ಕೆವೈಸಿ ಮಾಡಿಸಿಕೊಳ್ಳದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ತಿಂಗಳ ಆಹಾರ ಧಾನ್ಯ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು ಮತ್ತು ಆಧಾರ್ ದೃಢೀಕರಣ (ಇ-ಕೆವೈಸಿ)ವನ್ನು ಮಾಡದೇ ಇರುವ ಫಲಾನುಭವಿಗಳಿಗೆ ಡಿಸೆಂಬರ್ ಮಾಹೆಯಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಲಾಗಿದೆ. ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ತರಲು ಕೇಂದ್ರ ಸರ್ಕಾರ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಸೂಚನೆ ನೀಡಿತ್ತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ಸಹ ಆದೇಶವನ್ನು ಹೊರಡಿಸಿದೆ. ಇ-ಕೆವೈಸಿ ಆಧಾರಿತ ವಹಿವಾಟುಗಳು ಈಗ ದೇಶದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಬ್ಯಾಂಕಿಂಗ್, ಹಣಕಾಸು ಮತ್ತು ಇತರ ವಲಯಗಳಲ್ಲಿ ಇದು ಸುಗಮ, ಸುರಕ್ಷಿತವಾಗಿದೆ.

ಆಧಾರ್ ಇ-ಕೆವೈಸಿ ಸೇವೆಯು ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಸೇವೆಗಳಲ್ಲಿ, ಪಡಿತರ ವಿತರಣೆಯಲ್ಲಿ ಪಾರದರ್ಶಕ ಮತ್ತು ಸುಧಾರಿತ ಗ್ರಾಹಕ ಅನುಭವವನ್ನು ಒದಗಿಸಲಿದೆ. ಆದ್ದರಿಂದ ಬೆರಳಚ್ಚು ನೀಡುವ ಮೂಲಕ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಬೇಕಿದೆ. ಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರ ಪಡಿತರ ಪಡೆಯುವ ಕುಟುಂಬದ ಸದಸ್ಯರ ಇ-ಕೆವೈಸಿ ಮಾಡಿಸಲು ಅಕವಾಶ ನೀಡಿತ್ತು. 2025ರ ಜನವರಿಯಲ್ಲಿ ಈಗ ಕೊನೆಯ ಅವಕಾಶವನ್ನು ನೀಡುತ್ತಿದ್ದೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ವಿತರಣೆಯನ್ನು ಸ್ಥಗಿತ ಮಾಡುತ್ತೇವೆ ಎಂದು ಹೇಳಿತ್ತು. ಪಡಿತರ ಚೀಟಿದಾರರ ಬಗ್ಗೆ ಕೈಬಿಟ್ಟು ಹೋದ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಸರ್ಕಾರವು ಇ-ಕೆವೈಸಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಆದೇಶದಂತೆ ಇ-ಕೆವೈಸಿ ಕಡ್ಡಾಯವಾಗಿದೆ. ಅಂತ್ಯೋದಯ, ಅಧ್ಯತಾ ಹಾಗೂ ಆದ್ಯತೇತರಾ ಪಡಿತರ ಚೀಟಿಗಳಲ್ಲಿ ಈ ಹಿಂದೆ ಇ-ಕೆವೈಸಿ ಮಾಡಿಸಿರದ ಅಥವಾ ಬೆರಳಚ್ಚು ನೀಡಿದ ಸದಸ್ಯಸರುಗಳು ಸಹ ಈಗ ಇ-ಕೆವೈಸಿ ಮಾಡಿಸಬೇಕು.