
ಬಾಗಲಕೋಟೆ : ಮಾರುಕಟ್ಟೆಗೆ ಹಣ್ಣುಗಳ ರಾಜ ಮಾವು ಬಂದಿಳಿದಿದೆ. ಆದರೆ, ಪೂರೈಕೆ ಕೊರತೆಯಿಂದ ದರ ಭಾರ ಆಗಿದೆ. ಮಹಾರಾಷ್ಟ್ರದ ದೇವಗಢ, ರತ್ನಗಿರಿಯಿಂದ ಪೂರೈಕೆಯಾಗುವ ಆಪೂಸ್ ಹಣ್ಣುಗಳು ಈ ಬಾರಿ ವಿಳಂಬವಾಗಿ ಕಾಣಿಸಿಕೊಂಡಿದೆ. ಆಪೂಸ್ ಹಣ್ಣಿಗೆ ಭಾರಿ ಬೇಡಿಕೆ ಇದ್ದು, ಕಡಿಮೆ ಫಸಲಿನಿಂದಾಗಿ ಹಣ್ಣು ಹೇರಳವಾಗಿ ಲಭ್ಯವಾಗುತ್ತಿಲ್ಲ. ಆಪೂಸ್ ಹಣ್ಣಿನ ಬೆಲೆ ಬಾಕ್ಸ್ಗೆ (12 ರಿಂದ 16 ಹಣ್ಣು) 700 – 1,000 ರೂ.ವರೆಗಿದೆ. ಫೆಬ್ರವರಿ ಮಧ್ಯಭಾಗದಲ್ಲಿ ಈ ದರ 1,200 ರೂ. ತಲುಪಿತ್ತು. ಕಳೆದ ವರ್ಷ ಒಂದು ಬಾಕ್ಸ್ ಹಣ್ಣಿಗೆ 600 ರೂ. ಬೆಲೆ ಇತ್ತು. ಮಾವಿನ ಹಣ್ಣಿನ ಮಾರಾಟಕ್ಕೆ ಬಾಗಲಕೋಟೆ ಜಿಲ್ಲೆ ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ. ಬಾಗಲಕೋಟೆ, ಜಮಖಂಡಿ, ಮುಧೋಳ, ಬಾದಾಮಿ ಸೇರಿದಂತೆ ಪ್ರತಿ ದಿನ ಅಂದಾಜು 800 ಬಾಕ್ಸ್ ಮಾರಾಟವಾಗುತ್ತಿವೆ.

ಬೆಳಗಾವಿ ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಹಣ್ಣು ಪೂರೈಕೆಯಾಗುತ್ತಿಲ್ಲ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಹಣ್ಣುಗಳ ಪ್ರಮಾಣ ಕಡಿಮೆ ಇದೆ. ಪ್ರತಿ ವರ್ಷ ಎರಡೂವರೆ ತಿಂಗಳು ಹಣ್ಣು ಲಭ್ಯವಿತ್ತು. ಆದರೆ ಈ ಬಾರಿ ಅಂದಾಜು ಒಂದೂವರೆ ತಿಂಗಳು ಮಾತ್ರ ದೊರೆಯಲಿದೆ. ಚಂಡಮಾರುತದ ಪರಿಣಾಮ ಮಹಾರಾಷ್ಟ್ರದ ದೇವಗಢ, ರತ್ನಗಿರಿ ಪ್ರದೇಶದಲ್ಲಿ ಚಂದದ ಹಣ್ಣುಗಳು ಹಾಳಾಗಿವೆ. ಸ್ಥಳೀಯವಾಗಿ ದೊರಕುವ ಸಿಂಧೂರ ಹಣ್ಣು ಕೆ.ಜಿಗೆ 100 – 120 ರೂ. ಇದೆ. ಇನ್ನು ಕೆಲ ದಿನಗಳಲ್ಲಿ ಬೇನಶಾ ಹಣ್ಣು ಮಾರುಕಟ್ಟೆಗೆ ಬರಲಿದೆ. ಇದು ಸಾಮಾನ್ಯವಾಗಿ ಕೆ.ಜಿಗೆ 80 ರೂ.ನಂತೆ ಮಾರಾಟವಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವು ಹೇರಳವಾಗಿ ಲಭ್ಯವಾಗಿಲ್ಲ. ಫಸಲು ಕಡಿಮೆ ಇರುವ ಕಾರಣ ದರ ಹೆಚ್ಚಳವಾಗಿದೆ. ಮುಂದೆ ಮಾರುಕಟ್ಟೆಗೆ ಅಧಿಕ ಮಟ್ಟದಲ್ಲಿ ಮಾವು ಬಂದರೆ ಬೆಲೆ ಇಳಿಯಬಹುದು ಎನ್ನುತ್ತಾರೆ ಬಾಗಲಕೋಟೆಯ ಮಾವು ವ್ಯಾಪಾರಿ ಬಂದೇನವಾಜ್ ಬಾಳಿಕಾಯಿ. ಸದ್ಯ ರಸಪುರಿ ಮಾವಿನ ಹಣ್ಣಿನ ದರ ಕೆಜಿಗೆ 180 ರಿಂದ 200 ರೂ. ಇದೆ. ಆಪೂಸ್ ಹಣ್ಣಿಗೆ 200 ರಿಂದ 220 ರೂ.,ಬೆನಿಶಾ 120ರಿಂದ 140 ರೂ., ಜವಾರಿ 80 ರಿಂದ 100 ರೂ., ಸಿಂಡೂಲಾ 60 ರಿಂದ 70 ರೂ., ಕೇಸರ್ 130 ರಿಂದ 140 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಮಾವಿನ ಸೀಜನ್ ಈಗಷ್ಟೇ ಪ್ರಾರಂಭಗೊಂಡಿರುವುದರಿಂದ ರೇಟ್ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಪೂರೈಕೆಯಾದರೆ ಅಥವಾ ಮಳೆ ಬಂದರೆ ದರ ಕೂಡ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹಾವೇರಿಯ ಹಣ್ಣಿನ ವ್ಯಾಪಾರಿಗಳು ಹೇಳುತ್ತಿದ್ದಾರೆ. ಬೇಸಿಗೆ ಅಕಾಲಿಕ ಮಳೆ, ನಾನಾ ರೋಗಗಳ ಹೊಡೆತಕ್ಕೆ ಮಾವು ಇನ್ನೂ ಹೆಚ್ಚಾಗಿ ಮಾರುಕಟ್ಟೆಗೆ ಬಂದಿಲ್ಲ. ಈ ವರ್ಷ ಮಾವಿನ ಇಳುವರಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಹಣ್ಣುಗಳು ಸಹಜವಾಗಿ ದುಬಾರಿಯಾಗಿವೆ. ಈಗಷ್ಟೇ ಸೀಜನ್ ಆರಂಭಗೊಂಡಿದ್ದು, ಪ್ರಸ್ತುತವಾಗಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಹಾವೇರಿಯ ಹಣ್ಣಿನ ವ್ಯಾಪಾರಿ ಮಕೂಲ್ ತಾಡಪತ್ರಿ ಹೇಳಿದ್ದಾರೆ.