

ಮಂಡ್ಯ : ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಶ್ರೀರಂಗಪಟ್ಟಣದ ಬಳಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಲಾರಿಗೆ ಬೆಂಕಿ ಹತ್ತಿಕೊಂಡು ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯಗಳಾಗಿಲ್ಲ. ಮಂಗಳವಾರ ರಾತ್ರಿ ಎಕ್ಸ್ಪ್ರೆಸ್ ವೇನ ಶೀರಂಗಪಟ್ಟಣದ ಗಣಂಗೂರು ಟೋಲ್ ಬಳಿ ಅಪಘಾತ ನಡೆದಿದೆ. ಲಾರಿಯನ್ನು ನಿಲ್ಲಿಸಿ ಅಡುಗೆ ತಯಾರಿಸಿಕೊಳ್ಳುತ್ತಿದ್ದಾಗ ಸಿಲಿಂಡರ್ ಸ್ಪೋಟಗೊಂಡು ಲಾರಿಗೆ ಬೆಂಕಿ ತಗುಲಿ ಲಾರಿ ಭಾಗಶಃ ಸುಟ್ಟುಹೋಗಿದೆ. ಚಾಲಕ ಹಾಗೂ ಕ್ಲೀನರ್ ಪ್ರಾಣಾಪಯದಿಂದ ಪಾರಾಗಿದ್ದು ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ನೆರೆ ರಾಜ್ಯದ ಸರಕು ಸಾಗಾಣಿಕೆ ಲಾರಿಯನ್ನು ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಮಾರ್ಗ ಮಧ್ಯೆ ಗಣಂಗೂರು ಟೋಲ್ ಬಳಿ ನಿಲ್ಲಿಸಿ ಲಾರಿ ಚಾಲಕ ಹಾಗೂ ಕ್ಲೀನರ್ ರಾತ್ರಿ ಊಟಕ್ಕೆ ಮಿನಿ ಸಿಲಿಂಡರ್ ನಿಂದ ಅಡುಗೆ ತಯಾರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.