
ಕೋಲಾರ: ರಾಬರ್ಟಸನ್ಪೇಟೆಯ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ₹3.2 ಕೋಟಿ ಮೌಲ್ಯದ ಚಿನ್ನ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ಕೋಟೆ ಪೊಲೀಸರು ಮಂಗಳವಾರ ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ ಒಂಬತ್ತಕ್ಕೆ ಏರಿದೆ.

j3tvkannada
ಚೆನ್ನೈನಿಂದ ಚಿನ್ನ ಸಾಗಿಸುತ್ತಿದ್ದ ವೇಳೆ ನಾಯಕನೇರಿ ಕಾಡಿನ ಫಾಟ್ ಬಳಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಬೆದರಿಸಿ ಚಿನ್ನ ಅಪಹರಣ ಮಾಡಿದ ಬಗ್ಗೆ ನಗರದ ವ್ಯಾಪಾರಿ ದೀಪಕ್ ವಿ.ಕೋಟೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ತನಿಖೆ ನಡೆಸಿದ ಚಿತ್ತೂರು ಜಿಲ್ಲೆ ಪೊಲೀಸರ ವಿಶೇಷ ತಂಡವು ನಗರದ ಕಾಂಗ್ರೆಸ್ ಮುಖಂಡ ಜಯಪಾಲ್, ಆತನ ಸಹಚರರಾದ ಷಣ್ಮುಗಂ, ಬಾಬು ಮತ್ತು ಕಾರಿನ ಚಾಲಕ ಮಾಕ್ರಂ ಎನ್ನುವವರನ್ನು ಬಂಧಿಸಿದ್ದರು. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ತಮಿಳುನಾಡಿಗೆ ಸೇರಿದ ಐವರನ್ನು ಬಂಧಿಸಲಾಗಿದೆ. ಇನ್ನೂ ಮೂರ್ನಾಲ್ಕು ಮಂದಿ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ನಡೆಯುತ್ತಿದೆ ಎಂದು ತನಿಖಾ ತಂಡದ ಡಿವೈಎಸ್ಪಿ ಪ್ರಭಾಕರ್ ವಿ.ಕೋಟೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.