
ಕೋಲಾರ : ಶಿಥಿಲಾವಸ್ಥೆಗೆ ತಲುಪಿರುವ ರೈಲ್ವೆ ಮೇಲ್ಸೇತುವೆ ಕುಸಿಯುವ ಮುನ್ನ ದುರಸ್ತಿಗೊಳಿಸುವಂತೆ ದಶಕಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸುತ್ತಿದ್ದರೂ, ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗಕ್ಕೆ ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. 1973-74ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಮಾಲೂರು-ಹೊಸೂರು ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಶಿಥಿಲಗೊಂಡು ದಶಕಗಳೇ ಕಳೆದಿದೆ. ಆದರೆ ಇದರ ದುರಸ್ತಿಗೆ ಯಾರು ಗಮನ ಹರಿಸಿಲ್ಲ. 50 ವರ್ಷ ಹಳೆಯದಾದ ಮೇಲ್ಸೇತುವೆ ಮೇಲೆ ವಾಹನ ದಟ್ಟಣೆ ಮತ್ತು ಹೆಚ್ಚು ಭಾರದ ವಾಹನಗಳು ಸಂಚರಿಸುತ್ತಿರುವುದರಿಂದ ಸೇತುವೆ ಸಿಮೆಂಟ್ ಉದುರುತ್ತಿದ್ದು, ಕಬ್ಬಿಣದ ಸರಳಗಳು ಸಡಿಲಗೊಂಡು ಸೇತುವೆ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಕುಸಿಯುವ ಸ್ಥಿತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಪಟ್ಟಣದಲ್ಲಿ 2000 ಇಸವಿ ನಂತರ ಕೈಗಾರಿಕಾ ಪ್ರದೇಶ ಆರಂಭವಾಯಿತು. ಮಾಲೂರು -ಹೊಸೂರು ರಸ್ತೆಯ ಬಳಿ ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣ, ಎಚ್. ಹೊಸಕೋಟೆ ಹಾಗೂ ಬ್ಯಾಲಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿ ವಿವಿಧ ರೀತಿಯ ದೊಡ್ಡ ದೊಡ್ಡ ಕೈಗಾರಿಕೆ ಪ್ರದೇಶ ಆರಂಭವಾಗಿದೆ. ಇಲ್ಲಿಗೆ ಸರಕು ಹಾಗೂ ಇಲ್ಲಿಂದ ಉತ್ಪನ್ನಗಳನ್ನು ತುಂಬಿಕೊಂಡ ಬೃಹತ್ ವಾಹನಗಳು ಇದೇ ಮೇಲ್ಸೇತುವೆ ಮೇಲೆ ಸಂಚರಿಸುತ್ತಿವೆ. 10 ಟನ್ ಭಾರ ಮೀತಿ ಇರುವ ಸೇತುವೆ ಮೇಲೆ 35 ಟನ್ ಭಾರ ಹೊತ್ತು ನೂರಾರು ವಾಹನಗಳು ಸಂಚರಿಸುತ್ತಿವೆ. ಇದರಿಂದಲೂ ಮೇಲ್ಸೇತುವೆ ಶಕ್ತಿ ಕಳೆದುಕೊಳ್ಳುತ್ತಿದೆ. ಮೀತಿ ಮೀರಿದ ಭಾರ ಹೊತ್ತ ಲಾರಿ ಸಂಚರಿಸುವುದರಿಂದ ಸೇತುವೆ ಯಾವಾಗ ಬೇಕಾದರೂ ಕುಸಿಯಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮೇಲ್ಸೇತುವೆ ಮೂಲಕ ಪಟ್ಟಣದ ಆರು ವಾರ್ಡ್ ಸೇರಿದಂತೆ ಸುಮಾರು 13 ಪಂಚಾಯತಿ, ನೊಸಗೆರೆ, ಎಚ್. ಹೊಸಕೋಟೆ ಲಕ್ಕೂರು, ಜಯಮಂಗಲ, ಬಾಳಿಗಾನಹಳ್ಳಿ, ಕುಡಿಯನೂರು, ಸಂತೇಹಳ್ಳಿ, ಹುಳಿದೆನಹಳ್ಳಿ, ರಾಜೇನಹಳ್ಳಿ, ಹಸಾಂಡಹಳ್ಳಿ, ಮಾಸ್ತಿ, ತೃಣಿಸಿ, ದಿನ್ನಹಳ್ಳಿ ಪಂಚಾಯತಿಗಳಿಗೆ ಮೇಲ್ಸೇತುವೆ ಸಂಪರ್ಕ ಕಲ್ಪಿಸುತ್ತಿದೆ.
ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಆಂಧ್ರಪ್ರದೇಶದ ಪುಂಗನೂರು ಕಡೆಯಿಂದ ಹೆಚ್ಚು ಭಾರದ ಲಾರಿಗಳು ತಮಿಳುನಾಡಿಗೆ ಸಂಚರಿಸುತ್ತವೆ. ಭಾರ ಹೊತ್ತು ವಾಹನಗಳು ಸಂಚರಿಸುವ ವೇಳೆ ಸೇತುವೆ ನಡುಗುತ್ತದೆ. ಮೇಲ್ಸೇತುವೆ ಕಿರಿದಾಗಿರುವುದರಿಂದ ಪತ್ರಿದಿನ ಒಂದಲ್ಲ ಒಂದು ರೀತಿ ಅಪಘಾತ ಸಂಭವಿಸುತ್ತಿದೆ. ಕೆಲವೊಮ್ಮೆ ಅಪಘಾತದಲ್ಲಿ ಸಾವು-ನೋವು ಕೂಡ ಸಂಭವಿಸಿದೆ. ಹೀಗಾಗಿ ಮುಂದೆ ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತು ಹೊಸ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಅಲ್ಲಿಯವರೆಗೇ ಸೇತುವೆಯನ್ನು ಸುಸ್ಥಿತಿಯಲ್ಲಿ ಇಡಲು ತುರ್ತಾಗಿ ದುರಸ್ತಿ ಕಾಮಗಾರಿ ನಡೆಸಬೇಕೆಂದು ಸಾರ್ವನಿಕರು ಒತ್ತಾಯಿಸಿದ್ದಾರೆ.