
ಕೊಪ್ಪಳ: ಐತಿಹಾಸಿಕವಾಗಿ ಮಹತ್ವ ಪಡೆದಿರುವ ಜಿಲ್ಲೆಯ ಹೆಮ್ಮೆಯ ತಾಣ ಜಬ್ಬಲಗುಡ್ಡದ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗದ ಸುತ್ತಲೂ ಇರುವ ಕಲ್ಲುಬಂಡೆಗಳು, ಕಣ್ಣು ಹಾಯಿಸಿದಷ್ಟೂ ಕಾಣುವ ಸುಂದರ ಪರಿಸರ ಎಲ್ಲರನ್ನೂ ಗಮನ ಸೆಳೆಯುತ್ತದೆ.
ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮುನ್ನವೇ ಬಾಳಿ ಶೌರ್ಯ ಪರಾಕ್ರಮಗಳಿಗೆ ಹೆಸರಾಗಿದ್ದ ಗಂಡುಗಲಿ ಕುಮಾರರಾಮ ನಾಡಿಗಾಗಿ ಹಾಗೂ ತಾಯಿಗೆ ಕೊಟ್ಟ ಮಾತಿನಂತೆ ಪರಸ್ತ್ರೀಯರ ಮೇಲೆ ಕೈ ಮಾಡದೇ ಪ್ರಾಣವನ್ನೇ ಅರ್ಪಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಈ ಕಾರಣಕ್ಕಾಗಿ ಪರನಾರಿ ಸಹೋದರಿ ಎನ್ನುವ ಬಿರುದು ಹೊಂದಿದ್ದರು.

ಕುಮ್ಮಟದುರ್ಗದಲ್ಲಿರುವ ಜಟ್ಟಂಗಿ ರಾಮನ ದೇವಾಲಯದಲ್ಲಿ ಸಾಲಾಗಿ ಇಟ್ಟಿರುವ ಹನ್ನೆರಡು ಗುಂಡುಗಳಿವೆ. ಇವು ಕುಮಾರರಾಮನ ಮತ್ತು ಇತರರ ಶಿರಗಳೆಂದು ಹೇಳಲಾಗುತ್ತದೆ. ಪ್ರತಿವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ. ಕುಮ್ಮಟದುರ್ಗಕ್ಕೆ ಹೊಂದಿಕೊಂಡಿರುವ ಜಬ್ಬಲಗುಡ್ಡದಲ್ಲಿ ನಾಲ್ಕು, ಸಮೀಪದಲ್ಲಿರುವ ಇಂದರಗಿಯಲ್ಲಿ ಆರು ಹಾಗೂ ಮಲ್ಲಾಪುರದಲ್ಲಿ ಎರಡು, ಕುಮಾರರಾಮ ಮತ್ತು ಹೋಲ್ಕಿರಾಮನ ರುಂಡಗಳ ಮರದ ಪ್ರತಿಮೆಗಳಿವೆ. ಉತ್ತರ ಕರ್ನಾಟಕದ ಶಕ್ತಿ ದೇವತೆ ಎಂದೇ ಹೆಸರಾದ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೆ ವೇಳೆ ಕುಮ್ಮಟದುರ್ಗವನ್ನೇರಿ ಜಾತ್ರೆ ಮಾಡಿ ಅಲ್ಲಿಂದ ಅಕ್ಕಿಪಡಿಯನ್ನು ಹುಲಿಗಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಬಳಿಕವೇ ಹುಲಿಗಿಯ ಜಾತ್ರೆ ಆರಂಭವಾಗುತ್ತದೆ.
ಇಂಥ ಮಹತ್ವದ ಪ್ರದೇಶ ರಕ್ಷಣೆಯಿಲ್ಲದೇ ನಿತ್ಯ ಹಾಳಾಗುತ್ತಿದೆ. ಬೆಟ್ಟದ ಮೇಲ್ಬಾಗದಲ್ಲಿ ದೇವಸ್ಥಾನಕ್ಕೆ ಹೋಗುವ ತನಕ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಕೊಪ್ಪಳ ತಾಲ್ಲೂಕಿನಲ್ಲಿರುವ ಜಬ್ಬಲಗುಡ್ಡದ ಕುಮ್ಮಟದುರ್ಗದಲ್ಲಿ ಕೋಟೆಗಳು, ವೀರಗಲ್ಲುಗಳು, ದೇವಿಸೂರ್ಯ, ವಕ್ರಾಣಿ ಕೆರೆ, ಮಾದಿಗ ಹಂಪೆಯನ ಗುಡ್ಡ, ಜೇನುಕಲ್ಲು, ಈಶ್ವರ ದೇವಾಲಯ, ಜೈನ ದೇವಾಲಯ, ಅರಮನೆಗಳ ಅನುಷ್ಠಾನಗಳು, ಆನೆಪಾದ, ಕಾಟಪ್ಪನ ಗುಡ್ಡ ಹೀಗೆ ಅನೇಕ ಐತಿಹಾಸಿಕ ಸ್ಥಳಗಳಿವೆ. ಕುಮ್ಮಟದುರ್ಗ ಹಾಗೂ ಸುತ್ತಮುತ್ತಲು ಬೋಲನಕೆರೆ, ಹನುಮಂತ ದೇವರ ಗುಡ್ಡ, ಮಧ್ಯಭಾಗದಲ್ಲಿ ಮುಖ್ಯ ಕೋಟೆ, ಗುಡ್ಡದ ನೈರುತ್ಯ ಭಾಗಕ್ಕಿರುವ ಕುದುರೆ ಕಲ್ಲುಗಳು, ಹಳೆ ಕುಮ್ಮಟ ಗ್ರಾಮ, ಬೊಲ್ಲನಗುಡ್ಡ ಮತ್ತು ಕಾಟಪ್ಪದ ಗುಡ್ಡದ ಮಧ್ಯದ ಕೋಟೆ ಹೀಗೆ ಅನೇಕ ಸ್ಥಳಗಳಿವೆ.
ಇವುಗಳಿಗೆ ಸೂಕ್ತ ರಕ್ಷಣೆಯಿಲ್ಲದ ಕಾರಣ ಕುಮ್ಮಟದುರ್ಗ ಅಭಿವೃದ್ಧಿಯ ಸ್ಪರ್ಶವಿಲ್ಲದೆ ಅನಾಥವಾಗಿದೆ. ಕೋಟೆಯ ಕಲ್ಲುಗಳು ಶಿಥಿಲಾವಸ್ಥೆಗೆ ತಲುಪಿವೆ. ಕುಮಾರರಾಮನ ಯುದ್ಧತಂತ್ರದ ಭಾಗವಾಗಿ ನೆಡಲಾಗಿರುವ ಕಲ್ಲುಗಳಲ್ಲಿ ಒಂದಷ್ಟು ‘ಮಾಯ’ವಾಗಿವೆ. ಉಕ್ಕಿನಂತಿರುವ ಕಲ್ಲಿನ ಕೋಟೆಯ ಒಂದೊಂದೇ ಕಲ್ಲುಗಳು ಬೀಳಲಾರಂಭಿಸಿವೆ. ಈ ಕ್ಷೇತ್ರದಲ್ಲಿ ನಡೆದ ಹೋರಾಟದ ಕಥನ, ಆಡಳಿತದ ವೈಖರಿ, ಪರಾಕ್ರಮ ತಿಳಿಸಲು ಕಲ್ಲಿನ ಮೇಲೆ ರಚಿಸಲಾಗಿರುವ ಚಿತ್ರಗಳ ಕಲ್ಲುಗಳು ಎಲ್ಲೆಂದರಲ್ಲಿ ಬಿದ್ದಿವೆ. ಬೆಟ್ಟದ ಮೇಲ್ಬಾಗದಲ್ಲಿ ಸಾಕಷ್ಟು ಸ್ಥಳಗಳಲ್ಲಿ ಅಗೆಯಲಾಗಿದೆ.

ಗಂಡುಗಲಿ ಕುಮಾರರಾಮನ ಕುರಿತು ಅನೇಕ ಜನಪದ ಕಥೆಗಳು ಹಾಗೂ ಹಾಡುಗಳು ಇವೆ. ಬಿ.ಎಸ್. ಗದ್ದಗಿಮಠ ಅವರ ಸಂಪಾದಕತ್ವದಲ್ಲಿ ಬೆಳಕಿಗೆ ಬಂದ ಕುಮಾರರಾಮನ ದುಂದುಮೆ, ಕುಮಾರರಾಮನ ದುಂದುಮೆ ಹಾಡಿದವನು ಗೋಕಾವಿಯ ಗುರುವರ ಸಿದ್ದಸೇವಕ ಎಂದು ಇರುವ ಮಾಹಿತಿ ಲಭ್ಯವಿದೆ.
ಯಾವಾಗ ಅಭಿವೃದ್ಧಿ: ಗಂಡುಗಲಿ ಕುಮಾರರಾಮನ ಐತಿಹಾಸಿಕ ಸ್ಥಳ ಸಾಕಷ್ಟು ಮಹತ್ವ ಪಡೆದಿದ್ದರೂ ಅಭಿವೃದ್ಧಿ ವಿಷಯದಲ್ಲಿ ಶೂನ್ಯವಾಗಿದೆ. ಹಿಂದೆ ಅನೇಕ ಸಂಘಟನೆಗಳು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವಂತೆ ಆಗ್ರಹಿಸಿದರೂ ಅದು ಈಡೇರಿಲ್ಲ. ಕುದುರೆ ಕಲ್ಲು ಸೇರಿದಂತೆ ಅನೇಕ ಮಹತ್ವದ ಸ್ಥಳಗಳಿದ್ದರೂ ಅಲ್ಲಿ ಮಾಹಿತಿ ಫಲಕ ಅಳವಡಿಸದ ಕಾರಣ ಯಾವ ವಸ್ತುವಿನ ಮಹತ್ವವೇನು? ಐತಿಹಾಸಿಕ ಹಿನ್ನೆಲೆಯೇನು? ಎನ್ನುವುದು ಗೊತ್ತಾಗುತ್ತಿಲ್ಲ. ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಅಳಿದುಳಿದ ಸ್ಮಾರಕಗಳ ಮುಂದೆ ಕನಿಷ್ಠ ಮಾಹಿತಿ ಫಲಕಗಳನ್ನಾದರೂ ಅಳವಡಿಸಿದರೆ ಮುಂದಿನ ಪೀಳಿಗೆಯ ಜನತೆಗೆ ಕುಮ್ಮಟದುರ್ಗದ ಇತಿಹಾಸ ತಿಳಿಸಲು ಸಾಧ್ಯವಾಗುತ್ತದೆ ಎನ್ನುವುದು ಇತಿಹಾಸ ಪ್ರಿಯರ ಆಗ್ರಹವಾಗಿದೆ.