
ಬಂಗಾರಪೇಟೆ: ತಾಲ್ಲೂಕಿನ ಹುದುಕುಳ ಗೇಟ್ ಸಮೀಪ ಆಟೊದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಗಾರಪೇಟೆ ಪೊಲೀಸರು ಮೂವರನ್ನು ಶನಿವಾರ ಬಂಧಿಸಿ, ಆರೋಪಿಗಳಿಂದ 735 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಮೊಹಮದ್ ಉಮರ್ ಪಾಷಾ, ನಂದಕುಮಾರ್ ಮತ್ತು ಪ್ರಭು ಬಂಧಿತರು. ಮೊದಲ ಆರೋಪಿ ಬೆಂಗಳೂರಿನ ನಾರಾಯಣ ಪರಾರಿಯಾಗಿದ್ದು, ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆಟೊದಲ್ಲಿ ಗಂಜಾ ಮಾರಾಟ ಮಾಡಲು ಕೆಲ ವ್ಯಕ್ತಿಗಳು ಯತ್ನಿಸಿದ್ದಾರೆ ಎಂದು ಸಾರ್ವಜನಿಕರೊಬ್ಬರು ಸಹಾಯವಾಣಿಗೆ ನೀಡಿದ ಮಾಹಿತಿ ಆಧಾರಿಸಿ 112 ಸಹಾಯವಾಣಿ ಸಿಬ್ಬಂದಿ ದಾಳಿ ನಡೆಸಿ, ಮೂವರನ್ನು ಹಿಡಿದು ಬಂಗಾರಪೇಟೆ ಠಾಣೆ ಕರೆದುಕೊಂಡು ಬಂದರು.
ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ರೊಪ್ಪಿಕೊಂಡಿದ್ದಾರೆ.