
ಬಾಬು ಜಗಜೀವನರಾಂ ಮತ್ತು ಬಿ.ಆರ್. ಅಂಬೇಡ್ಕರ್ ಶೋಷಿತ ವರ್ಗದ ಏಳಿಗೆಗಾಗಿ ಅಹರ್ನಿಶಿ ಶ್ರಮಿಸಿದ್ದಾರೆ. ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರಿಬ್ಬರೂ ಶೋಷಿತ ಸಮುದಾಯಗಳ ಎರಡು ಕಣ್ಣುಗಳು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ 118ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಯ ದೆಸೆಯಲ್ಲಿಯೇ ಜಗಜೀವನ್ ರಾಂ ಅವರು ಪಡೆಯುತ್ತಿರುವ ಸಮಯದಲ್ಲಿ ಜಾತಿ ತಾರತಮ್ಯ ಎದುರಿಸಿದರು. ಶಾಲೆಯಲ್ಲಿ ದಲಿತರಿಗೆ ಪ್ರತ್ಯೇಕವಾಗಿ ಇಟ್ಟಿದ್ದ ಕುಡಿಯುವ ನೀರಿನ ಮಡಕೆಯನ್ನು ಎರಡು ಬಾರಿ ಒಡೆದರು. ನಂತರ ಪ್ರಾಂಶುಪಾಲರು ಶಾಲೆಯಿಂದ ಪ್ರತ್ಯೇಕ ಕುಡಿಯುವ ನೀರಿನ ಮಡಕೆಯನ್ನು ತೆಗೆದುಹಾಕಬೇಕಾಯಿತು ಎಂದರು. ಯಾರಿಗೆ ಶಿಕ್ಷಣ ಇದೆಯೋ ಅಂತಹವರಿಗೆ ರಾಜಕೀಯ ಅಧಿಕಾರ, ಗೌರವ, ಆರ್ಥಿಕ ಲಾಭ ಎಲ್ಲವೂ ದೊರೆಯುತ್ತದೆ ಎಂಬುದನ್ನು ಅರಿತ್ತಿದ್ದರು. ಶಿಕ್ಷಣ, ದುಡಿಮೆ, ತಾಳ್ಮೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು ಎಂದರು.