
ಯಾದಗಿರಿ : ಕಲ್ಯಾಣ ಕರ್ನಾಟಕದ ಜೀವ ನಾಡಿ ನಾರಾಯಣಪುರ ಡ್ಯಾಂನ ನೀರಿಗಾಗಿ ಅನ್ನದಾತರ ಪ್ರತಿಭಟನೆ ಮತ್ತೊಂದು ಹಂತಕ್ಕೆ ತಲುಪಿದೆ. ಸರ್ಕಾರದ ವಿರುದ್ಧ ಸಿಡಿದೆದ್ದ ರೈತರು ಡ್ಯಾಂನ ಗೇಟ್ ಮುರಿದು ಜಮೀನಿಗೆ ನೀರು ಹರಿಸಿದ್ದಾರೆ. ಜಮೀನಿಗೆ ನೀರು ಬಿಡದೇ ಇದ್ದರೆ ವಿಷ ಕುಡಿಯುವುದಾಗಿ ಪಟ್ಟು ಹಿಡಿದಿದ್ದಾರೆ. ನಾರಾಯಣಪುರ ಡ್ಯಾಂ ರಾಯಚೂರು ಯಾದಗಿರಿ ಭಾಗದ ಜನರ ಜೀವ ನಾಡಿ. ಸಾವಿರಾರು ರೈತರ ಕುಟುಂಬಕ್ಕೆ ಆಧಾರವಾಗಿರುವ ಜೀವ ಜಲ. ಅದೆಷ್ಟೋ ಬಡ ರೈತ ಕುಟುಂಬಗಳು ಈ ಡ್ಯಾಂ ನೀರನ್ನು ನಂಬಿ ಬದುಕು ಕಟ್ಟಿಕೊಂಡಿವೆ. ಆದರೆ ಆದರೀಗ ಸಾಲ ಸೋಲ ಮಾಡಿ ಬೆಳೆದ ಬೆಳೆಗೆ ನೀರು ಇಲ್ಲದಂತಾಗಿದೆ. ಹೌದು ನೀರಿಲ್ಲದೆ ಸಮೃದ್ಧವಾಗಿ ಬೆಳೆದ ಬೆಳೆ ನೆಲಕ್ಕಚ್ಚುವಂತಹ ಪರಿಸ್ಥಿತಿ ಇದೆ. ಹೀಗಾಗಿ ನೀರು ಹರಿಸದ ಸರ್ಕಾರದ ವಿರುದ್ಧ ಸಿಡಿದ ಅನ್ನದಾತರು ಎಡದಂಡೆ ಕಾಲುವೆ ಗೇಟ್ ಉಡೀಸ್ ಮಾಡಿದ್ದಾರೆ. ಗೇಟ್ ಮುರಿದು ನೀರು ಹರಿಸಿದ್ದಾರೆ. ಕಳೆದ ಹದಿನೈದು ದಿನಗಳಿಂದ ನೀರು ಹರಿಸುವಂತೆ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಏಪ್ರಿಲ್ ಹದಿನೈದರವರೆಗೆ ಮಾತ್ರ ನೀರು ಬಿಡಿ ಎಂದು ರೈತರು ಬೇಡಿಕೊಂಡಿದ್ದಾರೆ. ಆದರೂ ಕೂಡ ಅನ್ನದಾತರ ಕೂಗು ಸರ್ಕಾರದ ಕಿವಿಗೆ ಬೀಳಲಿಲ್ಲ. ಅದೆಷ್ಟೇ ಗೋಳಾದರು ಕೂಡ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ.

ಇದರಿಂದ ರೊಚ್ಚಿಗೆದ್ದ ರೈತರು ರಾತ್ರೋ ರಾತ್ರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಯಾದಗಿರಿ ಮುದನೂರು ಬಳಿಯ 10ಎ ಮತ್ತು 11ಡಿ ಎರಡು ಗೇಟ್ಗಳನ್ನು ಮುರಿದು ಜಮೀನುಗಳಿಗೆ ನೀರು ಹರಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಟೆಂಟ್ ಹಾಕಿ ಕುಟುಂಬ ಸಮೇತ ಧರಣಿ ಕೂಡ ಮಾಡುತ್ತಿದ್ದಾರೆ. ಅಧಿಕಾರಿಗಳು ಗೇಟ್ ಬಂದ್ ಮಾಡಿದರೆ ವಿಷ ಕುಡಿದು ಜೀವ ಬಿಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡಿದ ರೈತ ಸಿದ್ದಾರೆಡ್ಡಿ, ‘ನನ್ನದು ತುಂಬು ಕುಟುಂಬ. 25 ಎಕರೆ ಜಮೀನು ಇದೆ. ಆದರೆ ನೀರು ಇಲ್ಲದೆ ಬೆಳೆ ಹಾಳಾಗಿ ಹೋಗುತ್ತಿದೆ. ಒಂದು ಎಕರಿಗೆ ನಾವು 30-40 ಸಾವಿರ ಖರ್ಚು ಮಾಡಿದ್ದೇವೆ. ನೀರಿನ ಗೇಟ್ ಬಂದ್ ಮಾಡಿದರೆ ನಾವು ಕುಟುಂಬ ಸಮೇತ ವಿಷ ಕುಡಿದು ಪ್ರಾಣ ಬಿಡುತ್ತೇವೆ. ಆರು ದಿನ ನೀರು ಬಿಡಿ ಸಾಕು ಎಂದು ಗೋಗರಿದಿದ್ದಾರೆ. ಇನ್ನೂ ಅನ್ನದಾತರ ಹೋರಾಟಕ್ಕೆ ಮಾಜಿ ಸಚಿವ ರಾಜುಗೌಡ ಸಾತ್ ಕೊಟ್ಟಿದ್ದಾರೆ. ಇದು ರೈತರ ಬಂಡಾಯದ ಮೊದಲ ಹೆಜ್ಜೆ.

ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು. ನನಗೆ ಕರೆ ಮಾಡಿ ರೈತರು ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ನಾನು ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಹೇಳುತ್ತಿದ್ದೇನೆ. ಆದರೂ ರೈತರು ನನ್ನನ್ನು ಬೈಯುತ್ತಿದ್ದಾರೆ. ನಮ್ಮ ಬೆಳೆ ಹಾಳಾದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಒಂದೆಡೆ ರೈತರು ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದರೆ ಅತ್ತ ಸರ್ಕಾರ ಆಗಾಗ ನಾರಾಯಣಪುರ ಜಲಾಶಯದಿಂದ ತೆಲಂಗಾಣಕ್ಕೆ ನೀರು ಹರಿಸುತ್ತಲೇ ಇರುತ್ತದೆ. ಇದರಿಂದ ನಮಗಿಲ್ಲದ್ದು ನೆರೆ ರಾಜ್ಯಕ್ಕೆ ಯಾಕೆ ಅನ್ನೋ ಪ್ರಶ್ನೆ ಕೂಡ ರೈತರು ಹಾಕುತ್ತಿದ್ದಾರೆ. ಒಟ್ಟಾರೆ ತಾಳ್ಮೆ ಕಟ್ಟೆ ಒಡೆದ ರೈತರು ಡ್ಯಾಂ ಗೇಟ್ ಮುರಿದು ನೀರು ಹರಿಸುತ್ತಿದ್ದಾರೆ. ಇದರಿಂದ ಅಧಿಕಾರಿಗಳ ಮುಂದಿನ ನಡೆ ಏನು ಅನ್ನೋದೇ ಪ್ರಶ್ನೆಯಾಗಿದೆ.